ಗುರುವಾರ

ನಾನೂ ಸಮುದ್ರವಾಗಬಾರದಿತ್ತಾ?

ಹರಿಯುತ್ತಿದ್ದರೆ ನದಿ ಆಗುತ್ತಾ, ಯಾರಿಗೆ ಗೊತ್ತು, ಸಮುದ್ರವು ಅಗ್ಬಹುದಲ್ಲ?.ನಿಜ.
ಹೊಳೆಯೂ ಅಗಬಹುದು!
ನನ್ನ ಊರ ಕಡೆಯಲ್ಲ,'ಹೊಳೆ' ಎಂದೂ ಕರೆಯುತ್ತಾರೆ.
ನಾನೂ ಸಮುದ್ರವಾಗಬಾರದಿತ್ತಾ?!
(ಹರಿ , ಹೊಳೆ ಎರಡಕ್ಕೂ ಹಲವು ಅರ್ಥಗಳಿದ್ದಾವೆ ನಮ್ಮ ಕನ್ನಡದಲ್ಲಿ.)

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೆಲ್ಲಿಗೋ. ಹುಡುಕಾಟ ಕೆಲವರಿಗೆ ಹುಡುಗಾಟವೆನ್ನಿಸಬಹುದು.ಅದರೆ ಹಲವರಿಗೆ ?
ಗೊತ್ತಿಲ್ಲಾ. ಯಾಕೋ ಅಲ್ಲೊಂದು ಕೂಗು, ಇಲ್ಲೊಂದು ಅಳಲು, ಮನದ ಕದ ತಟ್ಟಿ ಹಾಗೆಯೇ ಹಾರಿಹೋಗುತ್ತಿವೆ. ಅಮ್ಮಂಗೆ ಅವತ್ತು ಅನಿಸಿದ್ದು ನನಗೆ ಇವತ್ತಿಗೂ ಸಲ್ಲುವಂತಿದೆ.

ಧೃತ್ ಯಾವಾಗಲೂ ಹೀಗೆಯೆ; ಮಾತಿಗೆ ಸಿಕ್ಕಿದರೆ, ಎಲ್ಲಿಂದ ಎಲ್ಲಿಗೋ ಹಾರಿ,ತೇಲಿ,ನೆಗೆದು,ಜಿಗಿದು ಹೋಗಿಬಿಡುತ್ತಾನೆ. ಬಿಡೊ ಮಾರಾಯ, ಒಂದಕ್ಕೊಂದು ತಾಳೆ ಅಗ್ಲಿಕ್ಕಿಲ್ಲ ನಿನ್ನ ಮಾತು ಅಂದರೆ ತಟ್ಟನೆ ಸುಮ್ಮನಾಗಿಬಿಡುತ್ತಾನೆ. ಅಲ್ಲೊಂದು ತಣ್ಣನೆಯ ಮೌನ ಆವರಿಸಿಬಿಡುತ್ತದೆ. ಅದೊಂದು ಅಸಹನೀಯ ಮೌನ, ಮತ್ತೆ ನಾನೇ ಕೆದಕಿ ಕೇಳಬೇಕು, ಏನಾಯ್ತೋ ನಿಂಗೆ?

ಏನಿಲ್ಲಾಕ್ಕ, ಹಾಗೆ ಸುಮ್ಮನೆ, ಅಂದು ಸುಮ್ಮನಾಗಿಬಿಟ್ಟ. ಯಾಕೋ ಎಲ್ಲೋ ಏನೋ ಎಡವಟ್ಟಾಗಿದೆ, ಎಂಬ ಸೂಚನೆ ಆಗಲೆ ಸಿಕ್ಕಿಯಾಗಿತ್ತು ನನಗೆ.

ಅಕ್ಕಾ, ಬಂಗಾಳ ಕೊಲ್ಲಿಯತರ ನೀನು ಅಂದ. ಅಬ್ಬರ ಜಾಸ್ತಿ, ಅದಕ್ಕೆ ನೀನು ಹೇಳುವದಕ್ಕೆ, ಮಾತಿಗೆ  ಇಲ್ಲವೆನುವದಕ್ಕಾಗುವದಿಲ್ಲ.
ಮೊನ್ನೆ ನೋಡಿಬಂದೆ.ಯಾಕೋ ಆ ಸಮುದ್ರ ನನ್ನ ನಿದ್ದೆ ಗೆಡಿಸಿದೆ, ಆ ಸಂಜೆಯ ಹೊತ್ತಲ್ಲಿ, ಫ್ಲೊರೆಸೆಂಟ್ ದೀಪದ ಬದಿಯಲ್ಲಿ ಕುಳಿತು ಸಮುದ್ರ ನೋಡುವದಿದೆಯಲ್ಲಾ..ಅಹ್.

ಯಾವದಕ್ಕೋ ಪೀಠಿಕೆ ಅನ್ನಿಸಿತ್ತು.
ಅಕ್ಕ, ಸರಯು ಸಿಕ್ಕಿದ್ದಳು ಅಂದ.
ಯಾವ ಸರಯೂ? ಅಂದೆ.ಗೊತ್ತಿಲ್ಲದವಳಂತೆ.
ಆ ಕಲ್ತುಡ್ಕ ನಿಂಗನ ಮಗಳು..
ಯಾಕೋ ಅಷ್ಟು ಹೊತ್ತು ಇದ್ದ ಉತ್ಸಾಹ ಧೃತ್ ನಲ್ಲಿ ಮಾಯವಾಗಿತ್ತು.

'ಸಿಟ್ಟು ಮಾಡಿ ಹಿಂದೆ ಹೋದ ಸಮುದ್ರದ ಅಲೆಗಳು ಮತ್ತೆ ದಡಕ್ಕೆ ಬಾರದಿರುತ್ತವೆಯೇ',ಅಂದೆ. ಅಪರೂಪದ 'ತಮ್ಮ' ಬಿಡು ನೀನು.

'ಹಿಂದೆ ಕಳೆದು ಹೋದ ಅಲೆಯೇ ಅದು, ಅಂತ ಸಾರಿ ಹೇಳಲಿಕ್ಕೆ ಯಾವ ಬಂಡೆಗೆ ಮಾತು ಬರುತ್ತದೆ ಹೇಳು ಅಕ್ಕಾ', ಅಂದ.

ಅದು ಹೌದು, ಬಂಡೆಗಳಿಗೆ ಮಾತಾಡುವ ತಾಳ್ಮೆ ಎಲ್ಲಿಂದ ಬರಬೇಕೋ ಮಾರಾಯ, ದಿನವಿಡೀ ಅಬ್ಬರ ಸಹಿಸಿ ಸಾಕಾಗಿರುತ್ತದೆ ಅಂದೆ. ಜೊತೆಗೆ ಮರಳಿ ಬರುವ ಅಲೆಗಳೇನು ಶಾಂತವಾದುದವಾ? ಹೊಸದು ಹೊಸದು ಬಂದಂತೆ, ಅಬ್ಬರ ಹೆಚ್ಚುತ್ತಾ ಪೌರ್ಣಮಿಯ ಇದುರು ಬಂದಾಗ ಮಹಾ ಕಾಳಿಯ ಅವತಾರವೇ ಅಲ್ಲವ?

ಕಾಳಿಯೋ ಚಂಡಿಯೋ ನನ್ನ ವ್ಯಾಪ್ತಿ ಮೀರಿದ್ದು ಅನ್ನಿಸಿದೆ. ಅದಿಕ್ಕೆ ಹೇಳಿದ್ದು, ನಾನೂ ಸಮುದ್ರವಾಗಬಾರದಿತ್ತಾ? ಸದಾ ಹರಿಯುತ್ತಲೇ ಇರಬಹುದಿತ್ತು.

ಹೋಗಿ ಆ ಮರಳುಗಳನ್ನು ಕೇಳು ನನಗೇನು ಗೊತ್ತು,ಅಂದೆ. ಎಷ್ಟೇ ಹರಿಯುತ್ತಿದ್ದರು ಒಂದು ದಿನ ದಡ ಸೇರಲೇ ಬೇಕಲ್ಲ ಅಂದೆ. ಅಲ್ಲಿಗೆ ಒಂದು ಅಲ್ಪವಿರಾಮ ಬಿದ್ದಿತ್ತು ನಮ್ಮ ಮಾತಿಗೆ.

ಬಿಡಿಸಿ ಹೇಳುತ್ತಾನೆಂದು ಕಾದೆ, ಅದೇನೆಂದು ಕೊನೆಗೂ ಹೇಳಲೇ ಇಲ್ಲ. ಅವ ಯಾವಾಗಲೂ ಹಾಗೆಯೇ.

ಕಾಮೆಂಟ್‌ಗಳಿಲ್ಲ:

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...