ಶನಿವಾರ

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ?

ನೂರಕ್ಕೆ ನೂರು ಹೌದು.

ಇದನ್ನ ಒಪ್ಪಿಕೊಳುವದಕ್ಕೆ ನಮ್ಮ ಮನಸು ಬಹಳ ಸಾರಿ ತಯಾರಿರುವದಿಲ್ಲ. ಯಾಕಂದರೆ ನಾವು ವಾಸ್ತವಕ್ಕೆ ದೂರಾಗಿ ಬದುಕುತ್ತಿರುತ್ತೇವೆ. ಮತ್ತು ಅದನ್ನೇ ಸಾಫಲ್ಯ ಎಂದು ಭ್ರಮಿಸಿರುತ್ತೇವೆ. ನಮ್ಮಷ್ಟಕ್ಕೆ ನಾವು ಸಾಫಲ್ಯವೆಂದರೆ ಹೀಗೆ ಇರುವದು, ಹಾಗೆ ಮಾತನಾಡುವದು, ಎಂದೆಲ್ಲ ಭಾವಿಸಿ ಕಣ್ಣಿಗೆ ಕಾಣದ ಗೋಡೆ ಕಟ್ಟಿರುತ್ತೇವೆ. ಮತ್ತು ಈ ಗೋಡೆ ಎಷ್ಟೋ ತರಹದ ನಡುವಳಿಕೆಗಳಿಗೆ ಕಾರಣವಾಗಿರುತ್ತದೆ.

ವ್ಯಕ್ತಿ, ತನ್ನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾದ ನಡೆ ನುಡಿಯನ್ನ ಅನುಕರಿಸಿರುತ್ತಾ, ಕಾಣದ, ಎಂದೂ ಮುಗಿಯದ, ಅಸಹಜವಾದ, ಜೀವನಕ್ಕೆ ತನ್ನನ್ನು ತಾನು ಒಡ್ಡಿಯಾಗಿರುತ್ತದೆ. ಮತ್ತು ಅದು ವ್ಯಕ್ತಿತ್ವದ ಭಾಗವಾಗಿಬಿಡುತ್ತದೆ.

ಇಂದು ಮಾರುಕಟ್ಟೆಯಲ್ಲಿ ಎಲ್ಲ ತರಹದ ವಸ್ತುಗಳು ದೊರೆಯುತ್ತವೆ, ಹೇಗೆ ಬದುಕಬೇಕು, ಹೇಗೆ ಮಾತನಾಡ್ಬೇಕು , ಹೇಗೆ ಮತ್ತು ಎಷ್ಟು ಊಟಮಾಡಬೇಕು, ಎಂದೆಲ್ಲ ಕಲಿಸುವದಕ್ಕೆ ಪುಸ್ತಕಗಳಿದ್ದಾವೆ, ಜನರಿದ್ದಾರೆ. ಮತ್ತು ಇವೆಲ್ಲುವುಗಳಿಂದ ಜನರನ್ನ ಹೇಗೆ ಗೆಲ್ಲಬಹುದು, ಸುದೀರ್ಘ ಜೀವನನಡೆಸಬಹುದು, ವೃತ್ತಿರಂಗದಲ್ಲಿ ಹೇಗೆ ಎಲ್ಲವನ್ನ ಗೆಲುವಿನತ್ತ ಬದಲಾಯಿಸಬಹುದು ಎಂದೆಲ್ಲ ಪ್ರತಿಪಾದಿಸಲಾಗುತ್ತದೆ. 

ಒಂದುಹಂತದವರೆಗೆ ಇವೆಲ್ಲ ಕೆಲಸಕ್ಕೆ ಬರುವದನ್ನು ನಾನು ಗಮನಿಸಿದ್ದೇನೆ. ಆದರೇ, ಇದೇ ಜೀವನವಲ್ಲವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಉದ್ದೇಶ, ಧ್ಯೇಯ, ಸನ್ನಿವೇಷ ಎಲ್ಲವೂ ಬದಲಾಗುತ್ತಿರುತ್ತವೆ . ಎಲ್ಲದಕ್ಕು ಇದೇ ತಕ್ಕ ಸೂತ್ರ ಅನ್ನುವ ಹಾಗಿಲ್ಲ. ಅಂತೆಯೇ ಹೀಗೆಯೇ ಬದುಕಬೇಕು, ಹಾಗೆ ಮಾತನಾಡಬೇಕು, ಇದನ್ನೇ ಓದಬೇಕು ಎಂದೆಲ್ಲ ನಿರ್ಣಯಿಸುವ ಹಕ್ಕಿಲ್ಲ ಅಲ್ಲವ. ಯಾಕೆಂದರೆ ಹಕ್ಕಿನ ಜೊತೆ ಬಾಧ್ಯತೆಗಳೂ ಇರುತ್ತದವಲ್ಲ.  

 ಯಾರದೋ ಅನುಭವವೇ ಸರಿಯಾದ ಮಾರ್ಗ ಅನ್ನಲಿಕ್ಕೂ ಆಗುವದಿಲ್ಲ. ನಾನು ನನ್ನ ವ್ಯಾಪ್ತಿಗೆ ಬಂದ ಅನುಭವದ ಮೂಲಕ ಒಂದು ಹಂತಕ್ಕೆ ನಿರ್ಣಯಿಸಬಹುದೇನೋ.

ಸಮಯ, ಸನ್ನಿವೇಶಗಳೇ ಇದನ್ನೆಲ್ಲ ನಿರ್ಧರಿಸಬೇಕು.ಪ್ರಕೃತಿಯ ಮುಂದೆ ನಾವೆಲ್ಲ ತುಂಬಾ ಚಿಕ್ಕವರು.ಇದನ್ನೆಲ್ಲ ಧೃತ್ ಬಾಯಿಯಿಂದ ಕೇಳಲಿಕ್ಕೆ ಬಹಳ ಚೆಂದ. ಆತ ಇತ್ತೀಚೆಗೆ ಮೌನದಕಡೆಗೆ ಬಹಳ ವಾಲಿದ್ದಾನೆ. ಮೌನ ಬಂಗಾರವಂತೆ!. 

ಮಳೆಗಾಲದ ಸಂಜೆ

ಮಳೆಗಾಲದ ಸಂಜೆ,
ಸಮುದ್ರ ನೋಡುವ ಮನಸಾಗಿತ್ತು.
ಅಪ್ಪಳಿಸುವ ಅಬ್ಬರದ ಅಲೆಗಳಿಲ್ಲ,
ಅಲೆಗಳ ಅಳಲ ಕೇಳುವ ಬಂಡೆಗಳೂ ಇಲ್ಲ
ತೇಲುವ ಹಡಗಿನ ಲಂಗರುಗಳಿಲ್ಲ,
ಹಾರುವ ಹಕ್ಕಿಯ ನೆರಳೂ ಇಲ್ಲ

ಅಲ್ಲಲ್ಲಿ ಬಾಗಿರುವ ತೆಂಗಿನ ಮರ,
ಅಪರೂಪಕ್ಕೊಮ್ಮೆ ಇಣುಕುವ ಸೂರ್ಯ,
ಹತ್ತಿರದ ಹುಣಿಮೆಯ ನೆನಪಿಸುವರ ಚಂದಿರ,
ತಂಪಿಲ್ಲದ,ಹದವಾದ ಗಾಳಿ

ಅದು ಮುಸ್ಸಂಜೆ, ಸೂರ್ಯ ತಂಪಾಗ್ವ ಹೊತ್ತು
ಮಳೆ ನಿಂತು, ಹನಿಯೊಂದು ಸಮುದ್ರಸೇರಿದ ಗಳಿಗೆ,
ಸಮುದ್ರ ಸೇರದ ಇನ್ನೊಂದು ಹನಿ ಮುತ್ತಾಗುವ,
ತಾಪಕ್ಕೆ ಬಳಲಿದ ಕಪ್ಪೆ ಮಳೆಗಾಗಿ ಧ್ಯಾನಿಸುವ
ಸುಯೋಗದ ಗಳಿಗೆ!

ಎಲ್ಲಿದ್ದವೋ ಆ ಕರಿಯ ಮೋಡ,
ಎಲ್ಲಿತ್ತೋ ಆಪರಿಯ ಗಾಳಿ
ಎಲ್ಲ ಒಟ್ಟು ಸೇರಿದಾಗಲೇ ಶುರುವಿಟ್ಟಿತು
ಭೋರ್ಗರೆವ ಜೋರು ಮಳೆ,‍ xyz ಬರೆವ ಕೋಲ್ಮಿಂಚು
ಮುಸ್ಸಂಜೆಯ ಮಳೆಯಜೊತೆ ಗುಡುಗು ರಾಯನ ಸ್ಪರ್ಧೆ!

ತಣ್ಣಗೆ ಕುಳಿತ ಸಮುದ್ರಕ್ಕೂ ಜೀವ ಬಂತು
ಮತ್ತೆ ಶುರುವಾಯ್ತು ಅಲೆಗಳ ಅಲೆದಾಟ,
ಅದು ಮಳೆಗಾಲದ ಸಂಜೆ!

ಭಾನುವಾರ

ಇನ್ನೂ ಹೆಸರಿಡದ್ದು

ಅದೊಂದು ಚಿಕ್ಕ ಊರು. ಅಲ್ಲಿನ ಜನರದ್ದು ಆರಕ್ಕೇರದ,ಮೂರಕ್ಕಿಳಿಯದ ಜೀವನ. ಬಸ್ ನಿಲ್ದಾಣದಿಂದ ಬಲಕ್ಕೆ ತಿರುಗಿ ಹಾಗೆಯೇ ನೇರ ನಡೆದರೆ ಇದುರಿಗೆ ಒಂದು ದೊಡ್ಡ ಅರಳಿ ಮರ ಕಾಣುತ್ತದೆ. ವಿಶಾಲವಾಗಿ ಹರಡಿಕೊಂಡಿದ್ದ ಆ ಮರದ ಕೆಳಗೆ ಇದ್ದುದು ಒಂದು ನಾಗರ ಕಲ್ಲು,ಅರಳಿ ಮರದ ಬುಡದಲ್ಲಿದ್ದ ಆ ನಾಗರ ಕಲ್ಲಿಂದಾಗಿ ಅರಳಿಮರದ ಮಹಿಮೆ ಹೆಚ್ಚಿತ್ತು ಅಂದರೆ ತಪ್ಪಿಲ್ಲವೇನೋ. ಊರವರೆಲ್ಲ ಅದಕ್ಕೊಂದು ಕಟ್ಟೆಕಟ್ಟಿಸಿಮರದ ಸುತ್ತಲೂ ಆ ನೀಲಗಿರಿ ಗಿಡದ ನಾಲ್ಕು ಕಂಬ ನೆಟ್ಟುಬಣ್ಣದ ಕಾಗದದ ತೋರಣ ಕಟ್ಟಿದ್ದರು. ಸುರಿವ ಮಳೆ, ಬೀಸುವ ಗಾಳಿಯಿಂದ ಅರಳಿಯ ಮರ ಆ ತೋರಣವನ್ನ ತನ್ನೆರಡೂ ಕೈಗಳಿಂದ ರಕ್ಷಣೆ ಮಾಡುತ್ತಿತ್ತು ಅನಿಸುತ್ತದೆ. ಅದೇನೇ ಇರಲಿ ಅರಳಿಮರ ಜನರ ಅಸ್ತಿತ್ವಕ್ಕೊಂದು ಗುರುತಾಗಿತ್ತು, ಆ ಊರಿನ ಹಗಲು ರಾತ್ರಿಗಳಿಗೆ ಕಣ್ಣಾಗಿತ್ತು.

ಆ ಮರವನ್ನ ದಾಟಿ ಮುಂದೆ ನಾಲ್ಕು ಹೆಜ್ಜೆ ಹಾಕಿದರೆಅಲ್ಲೊಂದು ದೊಡ್ಡ ಬಾವಿ. ಆ ಊರಿನ ಜನರ ನೀರಿನ ಮೂಲ ಆಕರ. 'ಸರಕಾರಿ ಬಾವಿ' ಎಂದೇ ಹೆಸರು. ಒಂದು ಕ್ಷಣವೂ ಬಾವಿಯನ್ನು ಬಿಟ್ಟು ಇದ್ದುದೇ ಇಲ್ಲ ಊರಿನವರು. ಆ ಹಾದಿಗುಂಟಾ ಹೋದರೆ ನೀವು ಕೇಳಿದ್ದ ನೀರೆತ್ತುವ ಶಬ್ಧ ನಿಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ ಹಗಲಲ್ಲೂ, ಇರುಳಲ್ಲೂ. ಹಾಗೇ ಆ ಕಪ್ಪು ಬಾವಿಯನ್ನ ದಾಟಿ ಮುಂದೆ ನಡೆದರೆ ಅಲ್ಲೊಂದು ಮನೆಯಿದೆಅದು ಕ್ಯಾಶಿಯರ್ ಮನೆ ಅಂದೆ ಪರಿಚಿತ. ಬಿಳಿಯ ತಾಜ್ಮಹಲ್ಲೇ ಅದು. ಮನೆಯ ಉದ್ದುದ್ದ ಗೋಡೆಗಳಿಗೆ ಬಿಳಿಯ ಸುಣ್ಣ ಬಡಿದಿದ್ದಕ್ಕೇ ಇರಬೇಕು ಅಥವಾ ಆ ಮನೆಗಿದ್ದ ಗಂಭೀರ ಕಳೆ ಊರವರಲ್ಲಿ ಒಂದು ಖಚಿತ ಅಭಿಪ್ರಾಯವನ್ನಂತೂ ಹುಟ್ಟುಹಾಕಿತ್ತು. ಆ ಮನೆಯ ಯಜಮಾನ ಕ್ರಷ್ಣಾ ಭಟ್ಟರು ಮತ್ತು ಅವರ ಪತ್ನಿ ಅನ್ನಪೂರ್ಣಮ್ಮ. ಕ್ರಷ್ಣಾ ಭಟ್ಟರು ಆ ಊರಿಂದ ಮೈಲಿ ದೂರದಲ್ಲಿರುವ ಮಲ್ಲಾಪುರದ ಬ್ಯಾಂಕ್ ನಲ್ಲಿ ಕ್ಯಾಶಿಯರ್ ಆಗಿದ್ದರು. ಆ ಕಾರಣ ಮನೆಗೂ ಅದೇ ಹೆಸರು.
 ಕ್ಯಾಶಿಯರ್ ಮನೆ ಅಥವಾ ವಟಾರದಲ್ಲಿ ಬಾಡಿಗೆಗೆಂದು ಇದ್ದವರಲ್ಲಿ ನಮ್ಮ ಸೋಮಸುಂದರ ರಾವ್ ಕೂಡ ಒಬ್ಬರು. ಅನ್ನಪೂರ್ಣಮ್ಮನವರ ಪ್ರಕಾರ ಆ ಮನುಷ್ಯಂಗೆ ೪೦ ಆಗಿರಬಹುದುತಮ್ಮ ಯಜಮಾನರಿಗಿಂತ ಇನ್ನೂ ನಾಲ್ಕು ವರ್ಷ ಕಿರಿಯವನೆಂದು ಅನಿಸಿಕೆ. ಇನ್ನು ಮದುವೆ ಮಾಡ್ಕೊಂಡಿಲ್ಲಾ ಅದಿಕ್ಕೆ ಆತ ಬ್ರಹ್ಮಚಾರಿಮನೆಗೆ ಬಂದ ಮೊದಲ ದಿನವೇ ತನ್ನ ಹೆಸರಿರುವ ನೀಲಿ ಬಣ್ಣದ ಬೋರ್ಡನ್ನ ಬಾಗಿಲಿಗೆ ತೂಗುಬಿಟ್ಟಿದ್ದ. ತಹಶೀಲುದಾರ್ ಕಛೇರಿಯಲ್ಲಿ ಈತನ ಕೆಲಸ. ಆತ ಪ್ರತಿ ದಿನ ಬೆಳಿಗ್ಗೆದ್ದುತಣ್ಣೀರಲ್ಲಿ ಸ್ನಾನ ಮಾಡಿಹಣೆಗೊಂದು ಕುಂಕುಮದ ಬೊಟ್ಟಿಟ್ಟುಕೃಷ್ಣಾರ್ಪಣಮಸ್ತು! ಎನ್ನುತ್ತಾ ತನ್ನ ಉದ್ದನೆಯ ಚೀಲ ತಗಲುಹಾಕಿ ಕೊಂಡು ಮನೆಯಿಂದ ಹೊರಬೀಳುತ್ತಿದ್ದ. ‍ತಿಂಡಿ ತೀರ್ಥದ ವಿಷಯ ಅನ್ನಪೂರ್ಣಮ್ಮನವರಿಗೆ ಅಷ್ಟಾಗಿ ತಿಳಿಯುತ್ತಿರಲ್ಲಿಲ್ಲ. ಭಾನುವಾರ ಮಾತ್ರಾ ಕೃಷ್ಣಾ ಭಟ್ಟರೊಡನೆ ಮಾತಿಗೆ ಸಿಗುತ್ತಿದ್ದ. ಈ ಪರಿಪಾಠ ಹಲವು ದಿನ ನಡೆದಿತ್ತು.

ಈಗಿನಂತೆ ಎಲ್ಲರ ಮನೆಗಳಲ್ಲಿ ದೂರದರ್ಶನದ ಸೌಲಭ್ಯಗಳಿಲ್ಲದ ಕಾಲ ಅದು.  ಮುಸ್ಸಂಜೆಯ ಹೊತ್ತಲ್ಲಿ ಊರ ಹೆಂಗಸರೆಲ್ಲ ಒಂದು ಕಡೆ ಕುಳಿತು ಹರಟುತ್ತಾರೆ. ಅರಳೀ ಕಟ್ಟೆ ಖಾಲಿ ಇದ್ದರೆ ಅಲ್ಲಿ, ಇಲ್ಲವಾದರೆ ಊರ ಮಧ್ಯದಲ್ಲಿನ ಆಂಜನೇಯ ದೇವಾಲಯದ ಕಟ್ಟೆ.ಅದೂ ಇಲ್ಲವಾದರೇ ಕ್ಯಾಶಿಯರ್ ಮನೆಯ ಉದ್ದನೆಯ ಜಗುಲಿ. ಅವರ ಮಾತುಗಳಲ್ಲಿ, ಮಳೆ, ಗಾಳಿ, ಬಿಸಿಲು,ಅಡುಗೆ, ನೆಂಟರು,ಮದುವೆ, ಇತ್ಯಾದಿಗಳದ್ದೆ ಮೇಲುಗೈ. ಲೋಕಾಭಿರಾಮವಾಗಿ ಹರಟುತ್ತಿದ್ದರು
 ಬೆಳಗ್ಗೆದ್ದು ಜ್ಯೊತಿಷ್ಯವನ್ನೋ,ಬ್ರೇಕಿಂಗ್ ಸುದ್ದಿಗಳನ್ನೋ  ನೋಡುವ ತರಾತುರಿ ಮನೆಯ ಗಂಡಸರಿಗಿರುತ್ತಿರಲಿಲ್ಲ, ಹಾಕುತ್ತಿರುವ ವಗ್ಗರಣೆಯನ್ನ ಅಲ್ಲೇ ಬಿಟ್ಟು  ಬೇರೆಯವರಿಂದ ಅಡುಗೆ ಕಲಿವ ಜರೂರತ್ತು, ಊಟ ಮಾಡುತ್ತಲೋ, ಮನೆಗೆಲಸ ಮಾಡುತ್ತಲೋ ಧಾರಾವಾಹಿಗಳನ್ನ ನೋಡುವ ಕಲ್ಪನೆ ಮನೆಯ ಹೆಂಗಸರಿಗಿರುತ್ತಿರಲಿಲ್ಲ. ನಮ್ಮೂರಿಗೆ ಟೀವಿ ಬಂದ ಕತೆ ಬಹಳ ಆಸಕ್ತಿದಾಯಕವಾಗಿದೆ.ಇನ್ನೊಮ್ಮೆ ನೋಡೋಣ ಅದರ ಬಗ್ಗೆ.ಬಹುಷ, ಘಟ್ಟದ ಮೇಲಿನ ಜನರ ಜೀವನವೇ ಹಾಗೆ ಅನ್ನಿಸುತ್ತದೆ, ಜಾಸ್ತಿ ಅನ್ನಿಸುವಷ್ಟೇ ಸುಖಕರ.ಅವರ ಜೀವನಕ್ಕೆ ಅಂತಹ ಗಿಲೀಟಿನ ಬೆರಗಿನ ಅಗತ್ಯ ಇಲ್ಲವಾಗಿತ್ತೆಂದೇ ನನ್ನ ಲೆಕ್ಕ.

ಕ್ರಷ್ಣಾ ಭಟ್ಟರು  ಮತ್ತು ಸೋಮಸುಂದರ ರಾವ್ ಕೂಡ ಕಟ್ಟೆಯ ಮೇಲೆ ಕುಳಿತು ಹರಟುತ್ತಿದ್ದರು. ಸೋಮಸುಂದರ ರಾವ್ ರ ಪ್ರಕಾರ ರಾಮ ದೇವರಲ್ಲ, ಕೃಷ್ಣ ಮಾತ್ರ ದೇವರಂತೆ. ಅವರದೇ ವಾದಗಳಿದ್ದವು ಅದನ್ನ ಸಮರ್ಥಿಸಲಿಕ್ಕೆ. ಅವರವರ ನಂಬಿಕೆ ಎನ್ನುತ್ತ ಸುಮ್ಮನಾಗಿದ್ದರು ಕ್ರಷ್ಣಾ ಭಟ್ಟರು. ಆತ ಮತ್ತೆ ಮತ್ತೆ ಅದನ್ನೇ ಹೇಳತೊಡಗಿದಾಗ, ಮಾತಾಡುವದನ್ನೇ ಕಡಿಮೆ ಮಾಡಿದ್ದರು ಕೂಡಾ. ರಾಮಾಯಣದ ಶ್ರೀ ರಾಮನಾಗಲೀ, ಮಹಭಾರತದ ಶ್ರೀ ಕೃಷ್ಣನಾಗಲೀ ಅವತಾರಗಳಲ್ಲವ. ಇವ ಎಂತ ಮಾತಾಡೋದು, ಅನ್ನುತ್ತಾ ಸುಮ್ಮನ್ನಿದ್ದರು. ಇವರ ಮನೆಯಲ್ಲಿ ರಾಮನವಮಿಯಂತೆ ಕೃಷ್ಣಷ್ಟಮಿಯೂ ನಡೆಯುತ್ತಿತ್ತು. ತಮ್ಮ ನಂಬಿಕೆಯ ಬಗ್ಗೆ ಎಂದೂ ಸಂಶಯ ಬಂದಿರಲೇ ಇಲ್ಲ.

ನಮ್ಮೂರಿನಲ್ಲಿ ಇರುವ  ದೇವಸ್ಥಾನಗಳಲ್ಲಿ, ಆಂಜನೇಯ ಸ್ವಾಮಿ ಬಹಳ ಶಕ್ತಿವಂತ ಎನ್ನುವ ಪ್ರತೀತಿ. ಪ್ರತಿ ಶನೀವಾರದಂದು ಅಲ್ಲಿ ಭಜನೆಗಳು, ವಿಶೇಷ ಪೂಜೆಗಳು ಜರುಗುತ್ತವೆ. ಊರಿನವರೆಲ್ಲ ಒಂದುಕಡೆ ಸೇರುವದೇ ಒಂದು ಸಂಭ್ರಮ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ, ಜನರನ್ನು ಒಟ್ಟಾಗಿಸಲಿಕ್ಕೆ ಬಹಳ ಸಹಾಯವಾಗಿರಲಿಕ್ಕೆ ಸಾಕು ಇಂತಹವುಗಳು. ರುಚಿಯಾದ ಪ್ರಸಾದ ಸಿಕ್ಕುತ್ತಿತ್ತು ಎಲ್ಲರಿಗೂ. ದೇವಾಲಯಗಳ ಪ್ರಸಾದಗಳಲ್ಲಿ ಏನೋ ಒಂದು ವಿಶಿಷ್ಟ ರುಚಿ ಇರುವದಂತು ನಿಜ. ಮೊನ್ನೆ ಇಲ್ಲಿನ(ಈಗ ನಾನಿರುವ ಊರಲ್ಲಿ)ಪೆರುಮಾಳ್ ಟೆಂಪಲ್ ನ ಪ್ರಸಾದ ತಿಂದಾಗಿನಿಂದಲೂ ನನ್ನ ನಂಬಿಕೆಗೆ ಇನ್ನೂ ಬಲ ಬಂದಿತ್ತು.

ಕ್ರಷ್ಣ ಭಟ್ಟರ ವತ್ತಾಯಕ್ಕೆ ಈತನೂ ಹೋಗುತ್ತಿದ್ದ ಅನಿಸುತ್ತದೆ. ಪ್ರಸಾದ ಕೈಯಲ್ಲಿ ಹಿಡಿದು ಅದೇನು ಯೊಚಿಸುತ್ತಿದ್ದನೋ, ಹಾಗೆಯೇ 
ಕೈಯಲ್ಲಿ ಹಿಡಿದು ಮನೆಯತ್ತ ಹೋಗಿಬಿಡುತ್ತಿದ್ದ. ತಿನ್ನುತ್ತಿದ್ದನೋ, ಹಾಗೆಯೇ ಚೆಲ್ಲುತ್ತಿದ್ದನೋ ಹೊರಗಿನವರಿಗೆ ತಿಳಿಯುತ್ತಿರಲಿಲ್ಲ. 
ಪುಣ್ಯಾತ್ಮನ ಕೃಷ್ಣ ಭಕ್ತಿ ದಿನೇ ದಿನೇ ಹೆಚ್ಚುತ್ತಿತ್ತು. ನಮ್ಮೂರಲ್ಲಿ ಒಂದೂ ಕೃಷ್ಣ ದೇವಾಲಯವಿಲ್ಲ ಎಂಬುದೂ ಈತನ ಅಸಮಾಧಾನಕ್ಕೆ 
ಕಾರಣವಾಗಿತ್ತು. ಆಗಾಗ್ಗೆ ಹೇಳುತ್ತಲೂ ಇದ್ದ.

ಶನಿವಾರ

ಮಳೆಗಾಲವೆಂಬುದು ಒಂದು ಸುಂದರ ಅನುಭವ

ಎಲ್ಲ ಕಡೆ ಕತ್ತಲುಆಕಾಶದಲ್ಲೆಲ್ಲ ಕರಿಮೋಡಜಿಟಿ ಜಿಟಿ ಮಳೆ ಥೇಟ್ ನಮ್ಮೂರಂತೆಯೇ ಇದೆ ಈದಿನ . ಮಳೆಗಾಲಕ್ಕೆ ಮಳೆಗಾಲವೇ ಸಮ.
ಸುಮ್ಮಗೆ ನನ್ನ ಪಾಡಿಗೆ ಕೂತಿದ್ದೆ ನೋಡಿ ಎಲ್ಲಿತ್ತೋ ಆ ಮಳೆಯ ಮೋಡಗಳ ಗಮನ, ಥಟ್ಟನೇ ನಮ್ಮ ಮನೆಯ ಸುತ್ತ ಇಣುಕಿ ನೋಡಿದ್ದೇ ನನ್ನ ಈಗಿನ ಖುಷಿಗೆ ಕಾರಣ.
ಮಳೆ ಒಂದು ವಿಸ್ಮಯ. ಮಳೆ ಮೊದಲಮೋಡ ಮೊದಲ ಅನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕೀತುಮೊದಲ ನೋಟಕ್ಕೆ ಮೋಡ ಮೊದಲೆನ್ನಿಸಿದರೂ, ಮಳೆಯ ನೀರಿಂದಲೇ ಅಲ್ಲವ ಮೋಡ. ಆ ಕರಿಮೋಡ ಬೇಧಿಸಿ,ದೊಡ್ಡ ಹನಿಯೊಂದು ಭುವಿ ಸೇರುವ ಹೊತ್ತಿಗೆ ಹಲವು ಹನಿಗಳಾಗಿ, ಮಳೆಯ ಮುತ್ತುಗಳಾಗಿ, ಬಿಸಿಯ ಬೇಗೆಯಲ್ಲಿ ಬೇಯುತ್ತಿರುವ ಈ ಭುವಿಯನ್ನ ಚುಂಬಿಸಿದ್ದು. ಅಷ್ಟೇ ಅಲ್ಲದೇಬಾಯ್ ತೆರೆದು ಕಾಯುತ್ತಿದ್ದ ಆ ಚಿಪ್ಪಿನಲ್ಲಿ ಸೇರಿ ಸ್ವಾತಿಯ ಮುತ್ತಾಗಿದ್ದು? ಏನೇ ಇರಲಿ, ಸುಮ್ಮಗೆ ತಣ್ಣಗೆ ಕೂತು ಸೆಖೆಯಿಂದ ಬೇಯುತ್ತಿರುವಾಗಬಿರು ಬೇಸಿಗೆಯ ಶುರುವಿಗೆ ಬಂದ ಈ ಮಳೆಯಿದೆಯಲ್ಲ ಅದೊಂದು ಅದ್ಭುತ ಲೋಕ ಕಟ್ಟಿಕೊಟ್ಟಿದೆ. ಕಿಟಕಿಯ ಪಕ್ಕದಲ್ಲಿ ಕೂತು ಮಳೆಹನಿಗಳ ಲೆಕ್ಕ ಬರೆಯುತ್ತಿದ್ದೇನೆ.
ನನ್ನ ಮಟ್ಟಿಗೆ ಮಳೆಗಾಲವೆಂಬುದು ಒಂದು ಸುಂದರ  ಅನುಭವ. ನಿಮ್ಮ ದಣಿವನ್ನ ಅಳಿಸಿಹಾಕುವ ತಾಕತ್ತಿದೆ.

ಗುರುವಾರ

ನಾನೂ ಸಮುದ್ರವಾಗಬಾರದಿತ್ತಾ?

ಹರಿಯುತ್ತಿದ್ದರೆ ನದಿ ಆಗುತ್ತಾ, ಯಾರಿಗೆ ಗೊತ್ತು, ಸಮುದ್ರವು ಅಗ್ಬಹುದಲ್ಲ?.ನಿಜ.
ಹೊಳೆಯೂ ಅಗಬಹುದು!
ನನ್ನ ಊರ ಕಡೆಯಲ್ಲ,'ಹೊಳೆ' ಎಂದೂ ಕರೆಯುತ್ತಾರೆ.
ನಾನೂ ಸಮುದ್ರವಾಗಬಾರದಿತ್ತಾ?!
(ಹರಿ , ಹೊಳೆ ಎರಡಕ್ಕೂ ಹಲವು ಅರ್ಥಗಳಿದ್ದಾವೆ ನಮ್ಮ ಕನ್ನಡದಲ್ಲಿ.)

ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಮತ್ತೆಲ್ಲಿಗೋ. ಹುಡುಕಾಟ ಕೆಲವರಿಗೆ ಹುಡುಗಾಟವೆನ್ನಿಸಬಹುದು.ಅದರೆ ಹಲವರಿಗೆ ?
ಗೊತ್ತಿಲ್ಲಾ. ಯಾಕೋ ಅಲ್ಲೊಂದು ಕೂಗು, ಇಲ್ಲೊಂದು ಅಳಲು, ಮನದ ಕದ ತಟ್ಟಿ ಹಾಗೆಯೇ ಹಾರಿಹೋಗುತ್ತಿವೆ. ಅಮ್ಮಂಗೆ ಅವತ್ತು ಅನಿಸಿದ್ದು ನನಗೆ ಇವತ್ತಿಗೂ ಸಲ್ಲುವಂತಿದೆ.

ಧೃತ್ ಯಾವಾಗಲೂ ಹೀಗೆಯೆ; ಮಾತಿಗೆ ಸಿಕ್ಕಿದರೆ, ಎಲ್ಲಿಂದ ಎಲ್ಲಿಗೋ ಹಾರಿ,ತೇಲಿ,ನೆಗೆದು,ಜಿಗಿದು ಹೋಗಿಬಿಡುತ್ತಾನೆ. ಬಿಡೊ ಮಾರಾಯ, ಒಂದಕ್ಕೊಂದು ತಾಳೆ ಅಗ್ಲಿಕ್ಕಿಲ್ಲ ನಿನ್ನ ಮಾತು ಅಂದರೆ ತಟ್ಟನೆ ಸುಮ್ಮನಾಗಿಬಿಡುತ್ತಾನೆ. ಅಲ್ಲೊಂದು ತಣ್ಣನೆಯ ಮೌನ ಆವರಿಸಿಬಿಡುತ್ತದೆ. ಅದೊಂದು ಅಸಹನೀಯ ಮೌನ, ಮತ್ತೆ ನಾನೇ ಕೆದಕಿ ಕೇಳಬೇಕು, ಏನಾಯ್ತೋ ನಿಂಗೆ?

ಏನಿಲ್ಲಾಕ್ಕ, ಹಾಗೆ ಸುಮ್ಮನೆ, ಅಂದು ಸುಮ್ಮನಾಗಿಬಿಟ್ಟ. ಯಾಕೋ ಎಲ್ಲೋ ಏನೋ ಎಡವಟ್ಟಾಗಿದೆ, ಎಂಬ ಸೂಚನೆ ಆಗಲೆ ಸಿಕ್ಕಿಯಾಗಿತ್ತು ನನಗೆ.

ಅಕ್ಕಾ, ಬಂಗಾಳ ಕೊಲ್ಲಿಯತರ ನೀನು ಅಂದ. ಅಬ್ಬರ ಜಾಸ್ತಿ, ಅದಕ್ಕೆ ನೀನು ಹೇಳುವದಕ್ಕೆ, ಮಾತಿಗೆ  ಇಲ್ಲವೆನುವದಕ್ಕಾಗುವದಿಲ್ಲ.
ಮೊನ್ನೆ ನೋಡಿಬಂದೆ.ಯಾಕೋ ಆ ಸಮುದ್ರ ನನ್ನ ನಿದ್ದೆ ಗೆಡಿಸಿದೆ, ಆ ಸಂಜೆಯ ಹೊತ್ತಲ್ಲಿ, ಫ್ಲೊರೆಸೆಂಟ್ ದೀಪದ ಬದಿಯಲ್ಲಿ ಕುಳಿತು ಸಮುದ್ರ ನೋಡುವದಿದೆಯಲ್ಲಾ..ಅಹ್.

ಯಾವದಕ್ಕೋ ಪೀಠಿಕೆ ಅನ್ನಿಸಿತ್ತು.
ಅಕ್ಕ, ಸರಯು ಸಿಕ್ಕಿದ್ದಳು ಅಂದ.
ಯಾವ ಸರಯೂ? ಅಂದೆ.ಗೊತ್ತಿಲ್ಲದವಳಂತೆ.
ಆ ಕಲ್ತುಡ್ಕ ನಿಂಗನ ಮಗಳು..
ಯಾಕೋ ಅಷ್ಟು ಹೊತ್ತು ಇದ್ದ ಉತ್ಸಾಹ ಧೃತ್ ನಲ್ಲಿ ಮಾಯವಾಗಿತ್ತು.

'ಸಿಟ್ಟು ಮಾಡಿ ಹಿಂದೆ ಹೋದ ಸಮುದ್ರದ ಅಲೆಗಳು ಮತ್ತೆ ದಡಕ್ಕೆ ಬಾರದಿರುತ್ತವೆಯೇ',ಅಂದೆ. ಅಪರೂಪದ 'ತಮ್ಮ' ಬಿಡು ನೀನು.

'ಹಿಂದೆ ಕಳೆದು ಹೋದ ಅಲೆಯೇ ಅದು, ಅಂತ ಸಾರಿ ಹೇಳಲಿಕ್ಕೆ ಯಾವ ಬಂಡೆಗೆ ಮಾತು ಬರುತ್ತದೆ ಹೇಳು ಅಕ್ಕಾ', ಅಂದ.

ಅದು ಹೌದು, ಬಂಡೆಗಳಿಗೆ ಮಾತಾಡುವ ತಾಳ್ಮೆ ಎಲ್ಲಿಂದ ಬರಬೇಕೋ ಮಾರಾಯ, ದಿನವಿಡೀ ಅಬ್ಬರ ಸಹಿಸಿ ಸಾಕಾಗಿರುತ್ತದೆ ಅಂದೆ. ಜೊತೆಗೆ ಮರಳಿ ಬರುವ ಅಲೆಗಳೇನು ಶಾಂತವಾದುದವಾ? ಹೊಸದು ಹೊಸದು ಬಂದಂತೆ, ಅಬ್ಬರ ಹೆಚ್ಚುತ್ತಾ ಪೌರ್ಣಮಿಯ ಇದುರು ಬಂದಾಗ ಮಹಾ ಕಾಳಿಯ ಅವತಾರವೇ ಅಲ್ಲವ?

ಕಾಳಿಯೋ ಚಂಡಿಯೋ ನನ್ನ ವ್ಯಾಪ್ತಿ ಮೀರಿದ್ದು ಅನ್ನಿಸಿದೆ. ಅದಿಕ್ಕೆ ಹೇಳಿದ್ದು, ನಾನೂ ಸಮುದ್ರವಾಗಬಾರದಿತ್ತಾ? ಸದಾ ಹರಿಯುತ್ತಲೇ ಇರಬಹುದಿತ್ತು.

ಹೋಗಿ ಆ ಮರಳುಗಳನ್ನು ಕೇಳು ನನಗೇನು ಗೊತ್ತು,ಅಂದೆ. ಎಷ್ಟೇ ಹರಿಯುತ್ತಿದ್ದರು ಒಂದು ದಿನ ದಡ ಸೇರಲೇ ಬೇಕಲ್ಲ ಅಂದೆ. ಅಲ್ಲಿಗೆ ಒಂದು ಅಲ್ಪವಿರಾಮ ಬಿದ್ದಿತ್ತು ನಮ್ಮ ಮಾತಿಗೆ.

ಬಿಡಿಸಿ ಹೇಳುತ್ತಾನೆಂದು ಕಾದೆ, ಅದೇನೆಂದು ಕೊನೆಗೂ ಹೇಳಲೇ ಇಲ್ಲ. ಅವ ಯಾವಾಗಲೂ ಹಾಗೆಯೇ.

ಶುಕ್ರವಾರ

ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ

ಏಕಾಂತದಷ್ಟು ಪ್ರಿಯವಾದದ್ದು ಜೀವನದಲ್ಲಿ ಇನ್ನೇನು ಇರಲಿಕ್ಕಿಲ್ಲ ನನಗೆ. ನನ್ನದೊಂದು ಪುಟ್ಟ ಲೋಕವೇ ತೆರೆದುಕೊಳ್ಳುತ್ತದೆ. ದಿನದ ಗದ್ದಲದ ದಣಿವಾರಿಸಿ, ಮುಂದಿನ ದಿನಕ್ಕೆ ಬೇಕಾಗುವಷ್ಟು ಶಕ್ತಿ ತುಂಬಿಸಿಕೊಳ್ಳಲಿಕ್ಕೆ ನನಗಿರುವ ಸಾಧನವೇ ಇದು.


ಅದಕೆಂದೇ ವೀಕೆಂಡ್ ಗಳಂದು ಮನೆಯಿಂದ ಹೊರಬೀಳುವದಕ್ಕೂ ಯೋಚನೆ ಮಾಡುತ್ತೇನೆ, ತೀರಾ ಅನಿವಾರ್ಯವಾದರೆ ಮಾತ್ರ ಹೋಗುವದು, ಮಿಕ್ಕೆಲ್ಲ ಸಮಯ ನನ್ನ ಪುಟ್ಟ ಗೂಡೊಳಗೆ ಬಚ್ಚಿಟ್ಟುಕೊಳ್ಳಲಿಕ್ಕೆ ಹಂಬಲಿಸುತ್ತೇನೆ.

ಅಲ್ಲೊಂದು ಪುಟ್ಟ ಸಂವಾದ ನಡೆಯುತ್ತದೆ, ಚಿಂತನ, ಮಂಥನಗಳೆರಡೂ ನಡೆಯುತ್ತದೆ. ಯಾವತ್ತೋ ಪೂರ್ತಿ ಓದಲಾಗದ ಪುಸ್ತಕವೊಂದು ನೆನಪಾಗುತ್ತದೆ, ಪದೆ ಪದೇ ಕೂತು ನೋಡಿದ ಸಿನೆಮಾದ ಸಂಭಾಷಣೆಯೊಂದು ನೆನಪಾಗುತ್ತದೆ.
ಮುಂದೆ ಓದಲಾಗದೆ ಅರ್ಧಕ್ಕೆ ಬಿಟ್ಟ, ರುಚಿ ಇಲ್ಲದ ಪುಸ್ತಕವೊಂದು ಕಣ್ಣಿಗೆ ಬಿದ್ದು, ತಥ್,ಸುಮ್ನೆ ನಾನ್ನೂರು ರುಪಾಯಿ ದಂಡಮಾಡಿದೆ ಎನ್ನುವ ಕೊರಗೊಂದು ಹೊಕ್ಕಿಹೋಗುತ್ತದೆ.

ಇವತ್ತು ಅಲ್ಲೆಲ್ಲ ಹರಡಿದ್ದ ಎಲ್ಲ ವಸ್ತುಗಳನ್ನು ಎತ್ತಿ ಸರಿಯಾಗಿ ಇಡಬೇಕು, ಸ್ನೇಹಿತೆ ಮೀರಾಳಲ್ಲಿ ಮನೆಯ ಒಳಾಂಗಣ ಅಲಂಕಾರದ ಬಗ್ಗೆ ಸಲಹೆ ಕೇಳಿ ಮನೆಯಲ್ಲ ಅಲಂಕರಿಸಬೇಕು.

ಅದು ಇದು, ಅದು ಇದು, ಅದು ಇದು ಅಹಾ, ಇದು ಮುಗಿಯುವದೆ ಇಲ್ವಲ್ಲಾ...!
ಅದರೂ ಅದರಿಂದ ನನಗೊಂದಿಷ್ಟು ನೆಮ್ಮದಿ ಸಿಗುತ್ತದೆ
ಮನಸಿಗೆ ಬಂದಾಗ ಒಂದಿಷ್ಟು ದಿನ ಕೆಲಸಕ್ಕೆ ರಜೆ ಹಾಕಿ ಸುಮ್ಮನೆ ಮನೆಯೊಳಗೆ ಇರುತ್ತೇನೆ. ನಡುಬೇಸಗೆಯ ಮಧ್ಯಾನ್ಹ, ಆಫಿಸಿಂದ ಎದ್ದು ಮನೆಯೊಳಗೆ ಓಡಿಬಿಡುತ್ತೇನೆ, ಮೊಬೈಲ್ ಬಂದ್ ಮಾಡಿ ಕುಳಿತು ಆನಂದಿಸುತ್ತೇನೆ. ಆವತ್ತು ಯಾವುದೇ ಕೆಲಸ ಮಾಡದೇ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತೇನೆ. ಯಾರಿಗೂ ಹೇಳದೇ,ಮಾತಾಡದೇ ಸುಮ್ಮನೆ ಕುಳಿತಿರುವದಷ್ಟೇ ನಾ ಮಾಡುವ ಕೆಲ್ಸ. I recharge myself by this!

ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.
ಖಾಲಿಯಾಗಿ ಇರಬೇಕೆನಿಸುತ್ತದೆ, ಅದಕೊಂದು ಏಕಾಂತ ಬೇಕು ನನಗೆ, ಎಲ್ಲಾ ಮಾಡುವದು ಏಕಾಂತಕ್ಕಾಗಿ!! ಯಾರ್ಗೂ ಹೇಳದ ಗುಟ್ಟು, ಓದ್ತಿರೋ ನೀವುಗಳು ಯಾರ್ಗು ಹೇಳೊದಿಲ್ಲಾಂತ ಅಂದುಕೊಂಡಿದೀನಿ.

ಸೋಮವಾರ

ಆಯ್ಕೆ

ಅಕೆಗೆ ಆಯ್ಕೆಯೆಂದರೆ ಏನೆಂಬುದೇ ಗೊತ್ತಿರಲಿಲ್ಲ.ಹೆಸರಿಲ್ಲದವರೂ ಇರಬಹುದೇನೋ, ಅದರೆ ಅಯ್ಕೆಯಿಲ್ಲದವರು? ಪ್ರಪಂಚ ವಿಶಾಲವಾದುದಲ್ಲ ಇದ್ದರು ಇರಬಹುದಲ್ಲಾ? ಆಂತರ್ಯ ಹೊಕ್ಕಿ ನೋಡಿದವರಾರು?
ಅಂತಹ ಅವಳು ಇಂದು ಒಂದು ಅಮೇರಿಕನ್ ಡೈಮಂಡ ನ ಕಿವಿಯೋಲೆ ಕೊಂಡಿದ್ದಳು. ಆ ಬಂಗಾರದ ಅಂಗಡಿಯಲ್ಲಿ ಅವ ಕೊಟ್ಟ ಕನ್ನಡಿ ಹಿಡಿದು ಕೈಯಲ್ಲಿ ಕಿವಿಯೋಲೆ ಹಿಡಿದು ಮತ್ತೆ ಮತ್ತೆ ಕಿವಿಗಿಟ್ಟು ನೋಡಿಕೊಳ್ಳುತ್ತಿದ್ದಳು. ಆ ಓಲೆಯ ಹರಳಿಗೆ ಸವರಿ ಮತ್ತೆ ಹಿಂದಿರುಗಿದ್ದ ಆ ಬೆಳ್ಳನೆಯ ಬೆಳಕಿಂದ ಆಕೆಯ ಕಣ್ಣು ಹೊಳೆವ ವಜ್ರವಾಗಿತ್ತು ಎಂದರೆ ಅತಿಶಯೋಕ್ತಿಯೇನಿಲ್ಲ.

ಮನೆ ದೊಡ್ಡದಿತ್ತು, ಮನೆ ತುಂಬ ಜನರಿದ್ದರು, ಉಡಲಿಕ್ಕೆ, ಉಣ್ಣಲಿಕ್ಕೆ ಬೇಕಿದ್ದದೆಲ್ಲ ಅಲ್ಲಿತ್ತು.ಆದರೆ ಅಲ್ಯಾರಿಗೂ ದೊಡ್ಡ ಮನಸಿರಲಿಲ್ಲ.ಮಾತಡಲಿಕ್ಕೆ ಜನರಿರಲಿಲ್ಲ.ಹೊಟ್ಟೆತುಂಬ ಉಂಡಿರಲಿಲ್ಲ ಆಕೆ, ಮೆತ್ತನೆಯ ಹಾಸಿಗೆಯಮೇಲೆ ತಲೆ ಇಟ್ಟರು ಕಣ್ತುಂಬ ನಿದ್ದೆ ಇರಲಿಲ್ಲ. ಆಕೆಗೆ ಎಲ್ಲದಕ್ಕೂ ತಲೆ ಆಡಿಸಿ ಗೊತ್ತಿತ್ತೇ ವಿನಃ, ತಲೆ ಎತ್ತಿ ನಡೆದು ಗೊತ್ತೇ ಇರಲಿಲ್ಲ

ಆಕೆ ಇಂದು ಕುಶಿಯಿಂದ ಇದ್ದಾಳೆ, ಬಾಯಿತುಂಬ ನಗುತ್ತಿದ್ದಾಳೆ ಮನಸಿಂದ..

ದೀಪದಂತೆ ಬೆಳಗುತ್ತಿರಲಿ ಎಂಬ ಭಾವದೊಂದಿಗೆ

ಹೀಗೇ ಎತ್ತು ಏರಿಗೆ ಎಮ್ಮೆ ನೀರಿಗೆ ಎಳೆದರೆ,ಬದುಕು ಕಟ್ಟೋದು ಸಾಧ್ಯವಾ?ಅಂತದೊಂದು ಪ್ರಶ್ನೆ ಬಹುದಿನದಿಂದ ಕಾಡತೊಡಗಿತ್ತು. ಅದಕಿಂತ ಮುಂಚೆ, ಇಂತದೊಂದು ಬದುಕು ಕಟ್ಟಲೇ ಬೇಕಾ? ಎಂಬ ಹೋಯ್ದಾಟ ಮನಸಲ್ಲಿ. ಯಾಕೆಂದರೆ ಅದರ ಅಗತ್ಯ ಯಾಕೋ ದಿನೇ ದಿನೇ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿತ್ತು.ಅಂವ ಇರೋದೆ ಹಿಂಗೆ,ನೀನೆ ಸ್ವಲ್ಪಾ ಹೊಂದಾಣಿಕೆ ಮಾಡಿಕೊ ಎಂಬ ಬೇಕಾಬಿಟ್ಟಿ ಹಿತವಚನಗಳ ಧಾಳಿ ತಳಮಳಿಸುವಂತೆ ಮಾಡಿತ್ತು. ನಾ ಮಾಡಿದ್ದು ಸರಿ ಎಂಬ ನಂಬಿಕೆ ಎಷ್ಟೇ ಇದ್ದರೂ, ಇಂತಹ ಸ್ವಹಿತ ಚಿಂತಕರ ಮಾತುಗಳು ಅಷ್ಟಷ್ಟೇ ಅಧೀರಳಾಗಿಸಲಿಕ್ಕೆ ಸಾಕಲ್ಲ.
- ಎಂದ ಅವಳ ಮಾತಿಗೆ ತಲೆ ಆಡಿಸಿದ್ದೆ. ಕೈಯಲ್ಲಿದ್ದ ಹಣತೆಗೆ ಎಣ್ಣೆ ಸುರಿಯುತ್ತಿದ್ದಳು ಆಕೆ. ದೀಪಾವಳಿಗೆ ಊರಿಗೆ ಬಂದಿದ್ದ ನಾನು, ಅವಳನ್ನ ನೋಡುವ ಸಲುವಾಗೇ ಬಂದಿದ್ದೆ.

"ಹೀಗೆ ಅದೆಷ್ಟು ದಿನಾಂತ ಬದುಕುವದು? ಹೀಗೆಯೆ ಮೂಲೆಯಲ್ಲಿ ಅಳುತ್ತಾ ಕುಳಿತರೆ ಮನಸ್ಸು ಗಬ್ಬೆದ್ದು ನಾರಲಿಕ್ಕೆ ಶುರುವಾಗಿಬಿಡುತ್ತದೆ,ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ನಂಬಿಕೆ ಕಡಿಮೆ ಅಗಲಿಕ್ಕೂ ಸಾಕು,ಈಗಲೇ ಭವಿಷ್ಯ ಪ್ರಶ್ನಾರ್ಥಕವಾಗಿದೆ, ಹೀಗೆಯೇ ಕುಳಿತರೆ ಭವಿಷ್ಯ ಕಾಣುವದಾದರೂ ಹೇಗೆ? ಹ್ಮ್ ಹೇಗಾದರೂ ಇದರಿಂದ ಹೊರ ಬರಬೇಕು. ಜೀವನದಲ್ಲಿ ಕೋಲ್ಮಿಂಚು ಕಾಣಲಿಕ್ಕೆ, ಅಬ್ಬರದ ಮಳೆ ಗುಡುಗುಗಳೇ ಬೇಕು ಅಲ್ಲವ" ಅಂದೆ ಹಣತೆಯನ್ನ ನೋಡುತ್ತಾ.

ಹೌದು ಅನ್ನು, ಎಲ್ಲವನ್ನ ಬುಡಮೇಲು ಮಾಡುವ ಸಾಮರ್ಥ್ಯ ಇರುವದು ನಮ್ಮ ಮನಸ್ಸಿಗೆ ಅಲ್ವ? ಯಾವುದೋ ಸಮಯಕ್ಕೆ 'ಇದೇ ಅದು' ಎಂದು ಅನಿಸಿಬಿಡುತ್ತದೆ, ಭಾವವೊಂದು ಬದಲಾಗಿ ಬಿಡುತ್ತದೆ. ಅಂತಹ ಘಟನೆಗಳೆಲ್ಲ ನಡೆಯುವದು 'ಕ್ಷಣಗಳಲ್ಲಿ'. ನಿರ್ಧಾರವೊಂದು ಮನದಲ್ಲಿ ನಿಶ್ಚಲವಾಗಿಬಿಡುತ್ತದೆ. ವರ್ಷಗಳಲ್ಲಿ ಅಳೆದು ಸುರಿದು ಮಾಡಿದ ಕೆಲಸ,ಯೋಚನೆ ಹೊಸ ದಿಗಂತದತ್ತ ವಾಲಿಬಿಡುತ್ತದೆ. ಅದಕೊಂದು ಭಾವಬಂದು, ಜೀವತುಂಬಿ, ನಾನಿದ್ದೇನೆ, ಹೀಗೆಯೇ ಮಾಡು ಅಂತ ನಮ್ಮ ಮನಸ್ಸೇ ನಮ್ಮನ್ನ ನಿರ್ದೆಶಿಸತೊಡಗುತ್ತದೆ’ ಅಂದಳು ಅವಳು ದೀಪ ಹಚ್ಚುತ್ತಾ.

ಆಕೆಯ ಮನದಲ್ಲಿ ನಿರ್ಧಾರವೊಂದು, ಗುರಿಯೊಂದು ಸ್ಪಷ್ಟವಾದ ಎಲ್ಲ ಕಳೆಗಳು ಇದ್ದವು.

ಆ ಗಳಿಗೆಯಲ್ಲಿ ರಾಮಾಯಣದ ರಾಮ ನೆನಪಾಗುತ್ತಾನೆ.ಆಕೆಯ ಗಂಡನ ಮೇಲಿನ ಸಿಟ್ಟು ರಾಮನ ಬಗ್ಗೆ ತಿರುಗುವ ಎಲ್ಲ ಚಿಹ್ನೆಗಳೂ ಆಕೆಯ ಮುಖದಲ್ಲಿ ಫ್ಲೋರೆಸೆಂಟ್ ದೀಪದಷ್ಟೆ ನಿಚ್ಚಳ.ಸೀತೆ ಪಾಪ ಅನ್ನಿಸತೊಡಗುತ್ತಾಳೆ.ಸೀತೆಯನ್ನ ಕಾಡಿಗಟ್ಟುವಾಗಿನ ರಾಮನ ಮನಸು ಇಂದಿಗೂ ಆಕೆಯರಿವಿಗೆ ಮೀರಿದ್ದು ಅನ್ನಿಸಿ,ಥುತ್,ಈ ಗಂಡಸು ಜಾತಿಯೇ ಇಷ್ಟು ಅಂದುಕೊಳ್ಳುತ್ತಾಳೆ.ಅಕೆಯ ಅಜ್ಜಿ ಹೇಳಿದ್ದ ಪುರಾಣ ಕತೆಗಳಲ್ಲಿ ಬರುವ ಎಲ್ಲ ಮಹಿಳೆಯರ ಪಾಡು ನೆನೆದು ಅಯ್ಯೋ ಅನಿಸುತ್ತದೆ.ಎಲ್ಲ ನೋವು 'ಇವಳಿ'ಗೇ ಏತಕ್ಕೆ ಎಂಬ ಪ್ರಶ್ನೆಯೂ ಹಾಗೇ ಬಂದು ಹೀಗೆಯೇ ಮಾಯವಾಗುತ್ತದೆ ಅವಳಲ್ಲಿ. 'ತಾನು ಸೀತೆಯಲ್ಲ, ದ್ರೌಪದಿಯೂ ಅಲ್ಲ! ಅಹಲ್ಯೆ, ಊರ್ಮಿಳೆಯರಂತೂ ಅಲ್ಲವೇ ಅಲ್ಲ' ಎಂಬ ಸತ್ಯ ಯಾಕೋ ಅರಿಯದ ನೆಮ್ಮದಿ ಕೊಡುತ್ತಿದೆ ಅನಿಸುತ್ತದೆ. ತಾನು ಅವರ ಹಾಗೆ ಅಗುವದೂ ಇಲ್ಲ ಎಂದು ಖಚಿತವಾಗಿ ಹೇಳೇಬಿಟ್ಟಳು. ಕಾಲಘಟ್ಟವನ್ನ ಮೀರಿದ್ದು ಇದು ಅನ್ನಿಸಿ ಸುಮ್ಮನಾಗುತ್ತೇನೆ.

ನನಗೇನು ಕಮ್ಮಿ ಇದೆ? ಓದಿಲ್ಲವಾ? ಭಾಷೆ ಬರೋದಿಲ್ಲವಾ? ಏನಂತ ತಿಳ್ಕೊಂಡಿದಾನೆ ಅವ ನನ್ನ, ‘ಬದುಕಿ ತೋರಿಸ್ತೇನೆ ಅಂತ ಹೇಳು ಅವಂಗೆ’ ಅಂತ ಸ್ವಲ್ಪ ಆವೇಶದಲ್ಲೇ ಹೇಳಿದ್ದು ನನ್ನರಿವಿಗೆ ಬಂದಿತ್ತು

ತನ್ನ ಬದುಕ ಬೆರೆಯವರ ಸಹಾಯ ಪಡೆದು ಕಟ್ಟುವ ಅಗತ್ಯ ತನಗಿಲ್ಲ ಎಂದಾಗ ನನಗೆ ಆಕೆಯ ಮುಖದಲ್ಲಿ ಕಂಡಿದ್ದು ಬದುಕಿನ ಇನ್ನೊಂದು ಮುಖದ ದರ್ಶನ.ನನ್ನ ಮಟ್ಟಿಗೆ ಅದೊಂದು ಸತ್ಯ ದರ್ಶನ.ತನ್ನ ಬದುಕ ಸ್ವತಂತ್ರವಾಗಿ ಕಟ್ಟುವ ನಿರ್ಧಾರವನ್ನ ನನ್ನ ಮನವೂ ಅನುಮೋದಿಸುತ್ತಿದೆ. ದೀಪಾವಳಿಯ ಹಣತೆಯ ಬೆಳಕಲ್ಲಿ ಆಕೆಯ ನಿರ್ಧಾರ ಪ್ರತಿಫಲಿಸತೊಡಗುವದನ್ನ ನೋಡಿ ಆನಂದಿಸುವ ಭಾಗ್ಯ ನನ್ನದು. ಏನೇ ಇರಲಿ ಆಕೆ ನಗುತ್ತ ಇರಲಿ ಖುಷಿಯಾಗಿರಲಿ,
ಹಣತೆಯ ದೀಪದಂತೆ ಬೆಳಗುತ್ತಿರಲಿ, ಮೇಣದ ಬತ್ತಿಯಂತೆ ಕರಗದಿರಲಿ ಎಂಬ ಭಾವ ಮನತುಂಬಿದೆ.

ಭಾನುವಾರ

ಹಲಗೆ ಬಳಪ ಕೈಯಲ್ಲಿ ಹಿಡಿದು...

ಬಹಳ ಹಿಂದಿನ ಕತೆ. ನನಗೆ ಅದರೊಳಗೆ ಏನಿರಬಹುದೆಂಬ ಕೆಟ್ಟ ಕುತೂಹಲ.ಅದರ ಆಕಾರ, ಬಣ್ಣ ನೋಡಿದರೆ ಅದು ಬಹಳ ಹಳೆಯ ಪೆಟ್ಟಿಗೆಯೆಂದು ಸುಲಭವಾಗಿ ಹೇಳಬಹುದಿತ್ತು. ಆಗ ನನಗೆ ಸುಮಾರು ಆರೇಳು ವಯಸ್ಸಿರಬಹುದೇನೋ. ಥೇಟ್ ಮಂಗನಂತೆಯೇ ಇದ್ದನಂತೆ. ಕುಂತಲ್ಲಿ ಕೂಡದ, ಕೈಗೆ ಸಿಕ್ಕಿದ್ದನ್ನು ಸುಮ್ಮನೆ ಬಿಡದ ನಾನು, ಜಗುಲಿಯಿಂದ ಅಂಗಳಕ್ಕೆ ಹಾರುತ್ತಾ, ಅಂಗಳದಿಂದ ಜಗುಲಿಗೆ ನೆಗೆಯುತ್ತಾ, ಕುಂತಲ್ಲೇ ಬಿದ್ದು, ನಿಂತಲ್ಲೇ ಅತ್ತು,ಹಾಗೇ ಒಮ್ಮೆ ನಕ್ಕು, ಅಪ್ಪ ಅಮ್ಮರನ್ನ ಹೈರಾಣ ಮಾಡುತ್ತಿದ್ದನಂತೆ.

ಅಮಿತ, ರಂಜನರೊಟ್ಟಿಗೆ ಜಗಳವಾದಾಗಲೆಲ್ಲ ನನಗೆ, ನನ್ನ ದುಃಖಕ್ಕೆ ಜೊತೆಯಾಗುತ್ತಿದ್ದುದು ಅದೇ ಪೆಟ್ಟಿಗೆ. 'ನನ್ನ ಅಪ್ಪನ ಹತ್ರ ದೊಡ್ಡ ಪೆಟ್ಟಿಗೆ ಇದ್ದು ಒಹೋ'ಎಂದು ಕೋಣೆಗೆ ಹೋಗಿ ಪೆಟ್ಟಿಗೆ ಇದೆಯೋ ಇಲ್ಲವೋ ಎಂದು ಮತ್ತೊಮ್ಮೆ ಖಾತರಿ ಪಡಿಸಿ ಕೊಳ್ಳುತ್ತಿದ್ದೆ. ಬಹುಷಃ ನನಗೆ ಗೊತ್ತಿದ್ದ ಪುಟ್ಟ ಲೋಕಕ್ಕೆ ಆ ಪೆಟ್ಟಿಗೆ ಬಹಳ ದೊಡ್ಡದಾಗಿ ಕಂಡಿರಬೇಕು.

ಅಪ್ಪ ಎಂದೂ ಪೆಟ್ಟಿಗೆಯನ್ನ ಮುಟ್ಟಲಿಕ್ಕೆ ಬಿಡುತ್ತಿರಲಿಲ್ಲ. ಎಲ್ಲೋ ಒಮ್ಮೆ ಅತ್ತಾಗ, ಸುಮ್ಮನೆ ಹಟ ಮಾಡಿದಾಗ, ಆಗೊಂದು ಈಗೊಂದು ಎಂದು ಬಣ್ಣದ ಪೆನ್ಸಿಲ್ ಗಳು ಹೊರಗೆ ಬರುತ್ತಿದ್ದುದ ನೋಡಿ, ಅಪ್ಪ ಹೇಳುತ್ತಿದ್ದ ಕತೆಯಲ್ಲಿ ಬರುವ 'ಮಾಯ ಪೆಟ್ಟಿಗೆ'ಯೇ ಇರಬಹುದು ಎಂದೆಲ್ಲ ಅನಿಸಿತ್ತು. ಆದರೂ ಪೆಟ್ಟಿಗೆಯೊಳಗೆ ಏನಿದೆ ಎಂಬುದನ್ನ ನೋಡಿಯೇ ಬಿಡಬೇಕೆಂಬ ಆಸೆ ಬಹಳ ಇತ್ತು.

ದೊಡ್ಡವಳಾಗುತ್ತ ಬಂದ ಹಾಗೆ, ಆ ಪೆಟ್ಟಿಗೆ ವಿಸ್ಮಯವಾಗಿ ಕಾಡಿದ್ದು ನಿಜ. ಒಂದು ದಿನ ಅಪ್ಪ ಮನೆಯಲ್ಲಿಲ್ಲದಾಗ ಪೆಟ್ಟಿಗೆ ತೆರೆಯುವ ವ್ಯರ್ಥ ಪ್ರಯತ್ನ ಮಾಡಿದಾಗಲೇ ಸಿಕ್ಕಿದ್ದು 'ಮಲ್ಲಿಗೆ'. ನಾ ನೋಡಿದ ಮೊದಲ ಪತ್ರಿಕೆ 'ಮಲ್ಲಿಗೆ', ಅದರ ನಂತರ, ನಮ್ಮ ಮನೆಗೆ ಬರುತ್ತಿದ್ದುದು 'ಸುಧಾ' ವಾರಪತ್ರಿಕೆ. ಜಗತ್ತೇ ನನ್ನ ಕೈಲಿದ್ದಂತೆ ಸಂಭ್ರಮಿಸುತ್ತಿದ್ದೆ. ನಾನು ಮೂರನೇ ತರಗತಿಯಲ್ಲಿದ್ದಾಗ ಬರುತ್ತಿದ್ದಾಗಿನ ಪತ್ರಿಕೆಯನ್ನ ಇನ್ನೂ ಓದುತ್ತಿದ್ದೇನೆ. ಅದರೆ ಈಗೀಗ ಯಾಕೋ ಕುಶಿ ಕೊಡುತ್ತಿಲ್ಲಾ, ಬಹುಷಃ ನಾನು ನೋಡುತ್ತಿರುವ ಜಗತ್ತಿಗೆ ಅದು ಸಾಕಾಗುತ್ತಿಲ್ಲ ಅನಿಸುತ್ತದೆ. ಆದರೂ 'ಸುಧಾ' ಪತ್ರಿಕೆ ನನ್ನ ಮನಸ್ಸಿಗೆ ತೀರ ಹತ್ತಿರದ್ದು. ಪತ್ರಿಕೆಯ ಹಿರಿಯರಾದ ಅಂತರಾಮು ಅವರ ನೆನಪಿದೆ.

ಬಹುಷಃ ಕೈಗೆ ಸಿಕ್ಕಿದ್ದೆಲ್ಲವನ್ನೂ ಓದಿದೆ. ಭಾಸ್ಕರ್ ಮಾಮನ ಪುಸ್ತಕದ ಅಂಗಡಿಯಿಂದ ನನಗೆ ಓದಲಿಕ್ಕಾಗಿಯೇ ಎಲ್ಲ ದಿನಪತ್ರಿಕೆಗಳೂ, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಸಿಗುತ್ತಿತ್ತು. ಓದಿ ಮತ್ತೆ ಅಂಗಡಿಗೆ ಕಳುಹಿಸುತ್ತಿದ್ದೆ, ಆ ಪುಸ್ತಕ ಅಂಗಡಿಯಿಂದಾಗಿ ಕನ್ನಡದ ಎಲ್ಲ ಪತ್ರಿಕೆಗಳನ್ನು ಪ್ರತಿ ದಿನವೂ ಓದುವ ಭಾಗ್ಯ ನನ್ನದಾಗಿತ್ತು. ಹಾಗೆ ಓದುತ್ತಿದ್ದಾಗ ನನ್ನ ಮನಸ್ಸಿಗೆ ಯಾವುದೇ 'Prejudice' (ಪೂರ್ವಗ್ರಹ) ಇರಲಿಲ್ಲ. ಲೇಖಕ ಯಾರೆಂಬುದು ನನಗೆ ಮುಖ್ಯವಾಗಿರಲೇ ಇಲ್ಲ, ಯಾಕೆ ಓದಬೇಕೆನ್ನುವ ಪ್ರಶ್ನೆ ಯಾವತ್ತೂ ಕಾಡಿರಲೇ ಇಲ್ಲಾ. ಸತತ ಹದಿಮೂರು ವರುಷ ಹಾಗೆಯೇ ಓದಿದೆ.

ಇನ್ನು, ಶಾಲೆಯಲ್ಲಿ ಪುಸ್ತಕ ಓದುವ ಹುಚ್ಚಿರುವ ಕೆಲವು ಸ್ನೇಹಿತರಿದ್ದರು, ಕೆಲವೊಮ್ಮೆ ಅವರಿಗಿಂತ ಮುಂಚೆ ಓದಿರಬೇಕೆನ್ನುವ ಮನೋಭಾವವು ಮತ್ತೂ ಓದಲ್ಲಿಕ್ಕೆ ಹಚ್ಚಿದ್ದು ದಿಟ. ಹೈ ಸ್ಕೂಲ್ & ಕಾಲೇಜುಗಳ ಗ್ರಂಥಾಲಯದಲ್ಲಿನ ಯಾರೂ ಓದದೆ ಇದ್ದ, ಒಮ್ಮೆಯೂ ಯಾರ ಹೆಸರನ್ನೂ ತನ್ನ ಬೆನ್ನಮೇಲೆ ಬರೆಯಿಸಿ ಕೊಳ್ಳದ ಪುಸ್ತಕಗಳಿಗೆಲ್ಲ ನನ್ನ ಮತ್ತು ನನ್ನ ಕೆಲವು ಸ್ನೇಹಿತೆಯರ ಹೆಸರಿದೆ.

ಅಪ್ಪ ಎಂದೂ ನನಗೆ ಪುಸ್ತಕ ಓದೆಂದು ಹೇಳಿರಲಿಲ್ಲ.ಮತ್ತೂ ಇಂದಿಗೂ ನಾ ಆ ದೊಡ್ಡ ಪೆಟ್ಟಿಗೆಯ ಬಾಗಿಲು ಪೂರ್ತಿ ತೆರೆದು ನೋಡಿಲ್ಲ. ಅಪ್ಪ ನನ್ನನ್ನು ಓದಲು ಹಚ್ಚಿದ ರೀತಿಯೇ ಅಂತದ್ದು. ಮನೆಗೆ ಬರುವಾಗ ಚೀಲದಲ್ಲಿ ತರುತ್ತಿದ್ದ ಪುಸ್ತಕಗಳು ಅವಾಗಿಯೇ ತಮ್ಮತ್ತ ಸೆಳೆದುಕೊಂಡಿದ್ದವು. ನನ್ನ ಪುಟ್ಟ ಟೇಬಲ್ಲಿನ ಮೇಲೆ ಬಣ್ಣದ ಪುಸ್ತಕಗಳು , ಮತ್ತು ಮನೆಗೆ ಬಂದ ಅಪ್ಪ ಆರಾಮ ಕುರ್ಚಿಯಲ್ಲಿ ಓದುತ್ತ ಕುಳಿತ್ತಿರುತ್ತಿದ್ದ ಭಂಗಿ ಬಹುಷಃ ನನ್ನ ಸೆಳೆದಿರಬೇಕು. ದಿನಕಳೆದಂತೆ ಬೇರೆ ಬೇರೆ ಪುಸ್ತಕಗಳನ್ನು ಒಂದೇ ಬೈಠಕ್ ನಲ್ಲಿ ಓದುವದು ಅಪ್ಪನಂತಾಗಬೇಕೆನ್ನುವ ನನ್ನ ಜೀವನದ ಭಾಗವಾಯಿತೆನ್ನಿ. ಅಲ್ಲದೇ ಸ್ನೇಹಿತರ ಮುಂದೆ ಜಂಭ ಕೊಚ್ಚಿಕೊಳ್ಳುವದಕ್ಕು ಸಹಾಯವಾಯಿತು. ಜನಮಾಧ್ಯಮ ಪತ್ರಿಕೆಯ ಬೆನ್ನೆಲುಬಾಗಿದ್ದ ಜಯರಾಮ್ ಹೆಗಡೆಯವರು ಕನ್ನಡದಲ್ಲಿದ್ದ ಕುರಾನ್ ಪುಸ್ತಕವನ್ನು ಕಳುಹಿಸಿದ್ದರು. ಅಪ್ಪನೊಟ್ಟಿಗೆ ಅದನ್ನೂ ಓದಿದೆ.

ನಮ್ಮ ಕಾಲೇಜಿನಲ್ಲಿ, 'ಓದು ಕಮ್ಮಟ' ಎಂಬ ತರಬೇತಿಯನ್ನ ಏರ್ಪಡಿಸಿದ್ದರು. ಘಟಾನುಘಟಿಗಳೆಲ್ಲ ಸೇರಿದ್ದರು. ಕಾರ್ಯಕ್ರಮ ಉದ್ಘಾಟಿಸಿದವರ ಮಾತೊಂದನ್ನು ಬಿಟ್ಟು ಮತ್ತೆಲ್ಲವು ಬೆಳಗಿಂದ ಸಂಜೆಯಾಗುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು, ನಮಗಿರುವ ಓದುವ ಹುಚ್ಚನ್ನು ಬಿಡಿಸಿಯೇ ಬಿಡುತ್ತಾರೆಂದು ನಾನು ಮತ್ತು ಸ್ನೇಹಿತೆ ಪಲ್ಲವಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದೆವು.

ಓದುವದೆಲ್ಲ, ಹೀಗೆಯೇ ಓದಬೇಕೆಂದರದು ಹೇಗೆ ಸಾಧ್ಯಾ? ಅವೆಲ್ಲ ಸ್ವಂತಕ್ಕೆ ಬಿಟ್ಟಿದ್ದು, ಓದುವದು, ಬರೆಯುವದು ಎಲ್ಲ ಬಹಳ ವಯಕ್ತಿಕವಾದದ್ದು ಕೂಡ. ಹೀಗೆಯೇ ಓದು, ಹೀಗೆಯೇ ಬರೆ, ಎಂದರೆ ಅದು ವೈವಿಧ್ಯತೆ ಕಳೆದುಕೊಳ್ಳುತ್ತದೆ ಎಂಬುದಾಗಿತ್ತು ನಮ್ಮ ಅಭಿಪ್ರಾಯ. ನಾವೇನು ಇವರನ್ನು ಹೇಗೆ ಓದಬೇಕೆಂಬುದನ್ನು ಕೇಳಿದ್ದೆವ ಎಂಬ ಉದ್ಧಟತನವೂ ನಮ್ಮಲ್ಲಿತ್ತು.

ಅದರೆ ಅಂದು ಪರಿಚಯವಾದ ಮಾನ್ಯರು ಇಂದಿಗೂ ಓದಲಿಕ್ಕೆ ಸ್ಪೂರ್ತಿಯಾಗಿದ್ದಾರೆ. ಇವರೇನು ಗುರುತದವರಾ? ನಮ್ಮ ನೋಡಿದ ಕೂಡಲೇ ನಗೆಯಾಡಿದರಲ್ಲ ಎಂದು ನಾನು,ಪಲ್ಲವಿ ಅಂದುಕೊಂಡ ಹಿರಿಯ ಸಾಹಿತಿಗಳು, ಇಂದಿಗೂ ಗುರುತಿಟ್ಟು ಸಿಕ್ಕಿದಾಗಲೆಲ್ಲ ಪಕ್ಕದಮನೆಯವರಂತೆ ಮಾತಾಡುತ್ತಾರೆ. ತುದಿಯಲ್ಲಿ ಮತ್ತೆಲ್ಲ ಆರಾಮ್ ಅಲ್ದಾ, ಮಗಳ ಕರ್ಕಂಡು ಬರಲಿಕ್ಕೆ ಹೋಗಬೇಕು ಅನ್ನುತ್ತ ಕಾರ್ ಹತ್ತಿ ಕೈ ಆಡಿಸುತ್ತಾ ನಡೆದುಬಿಡುತ್ತಾರೆ.

ಅಂದಿಗೆ ಹೋಲಿಸಿದರೆ ನನ್ನ ಓದಿನ ಓಘ ಕಡಿಮೆ ಆಗಿದೆ.ಅದರೂ ಘಮ ಕಡಿಮೆಯಾಗಿಲ್ಲ ಬಿಡಿ. ಜೋಗಿಯವರ ಪುಸ್ತಕ ‘ಹಲಗೆ ಬಳಪ’ ಕೈಯಲ್ಲಿ ಹಿಡಿದು ಇಷ್ಟೆಲ್ಲ ನೆನಪಾಯಿತು. ಪುಸ್ತಕ ಇನ್ನು ಓದಿ ಮುಗಿದಿಲ್ಲ.
(ಅಂದಹಾಗೆ, ಇದ್ಯಾವುದು ನನ್ನ ಬಗ್ಗೆ ಹೇಳಿಕೊಳ್ಳಲಿಕ್ಕೆ ಬರೆದುದಲ್ಲ,ನನಗೆ ಇವತ್ತು ದಕ್ಕಿದ್ದು ಇಷ್ಟು.)

ಮಂಗಳವಾರ

ಅಪರೂಪಕ್ಕೆ ಸಿಕ್ಕ ಖಾಲಿತನ

ಅಪರೂಪಕ್ಕೆ ಸಿಕ್ಕ  ಖಾಲಿತನ ಅದೇ ಇವತ್ತಿನ ವಿಶೇಷ. ಬರೆಯದೇ ಅದೆಷ್ಟೋ ದಿನಗಳೇ ಸಂದಿವೆ, ಅದೆಷ್ಟೆಂದರೆ ನಾನು ಬರೆಯಬಹುದಾದ ಸಾಧ್ಯತೆಗಳ ಬಗ್ಗೆ ನನಗೇ ಅನುಮಾನ ಬರುವಷ್ಟು ದಿನಗಳು.

ನಿಜ ಹೇಳಬೇಕೆಂದರೆ, ಇಷ್ಟು ದಿನ ಓಡುತ್ತಲೇ ಇದ್ದೆ ಅನ್ನಿಸುತ್ತದೆ, ಹಗಲಲ್ಲೂ, ರಾತ್ರಿಯಲ್ಲೂ,ಮುಂಜಾವಿನಲ್ಲೂ! ಮುಸ್ಸಂಜೆಯಲ್ಲೂ.ಕೊನೆಗೆ ನಿದ್ದೆಯಲ್ಲೂ ಕೈ ಕಾಲು ಬಡಿಯುತ್ತ ಒಡುತ್ತಿದ್ದೆ ಇರಬೇಕು, ಹಾಗೆಯೇ  ಓಡುತ್ತಾ ಕನಸುಗಳನ್ನೂ ಹಿಂದೆ ಸರಿಸಿ ಓಡಿರಬೇಕು. ಯಾಕೆಂದರೆ ಒಳ್ಳೆಯ ಕನಸುಗಳು ಬೀಳದೆ ತಿಂಗಳುಗಳೇ ಸರಿದಿವೆ.

ಆದರೇ, ಇವೆಲ್ಲವುಗಳ ಮಧ್ಯದಲ್ಲು ಮತ್ತೆ ಹೊರಳಿ ಬರುವ ಯತ್ನ ನಡೆಸಿದ್ದೇನೆ ಅನ್ನುವದಂತು ಸತ್ಯ.೬ ವರುಷಗಳ ನಂತರ ಮತ್ತೆ ಕುಂಚ ಹಿಡಿದೆ,೨ ನನಗೆ ಖುಶಿ ಅನ್ನಿಸುವ ಚಿತ್ರ ಬಿಡಿಸಿದೆ, ಹಲವಾರು ಛಾಯಚಿತ್ರ ಕ್ಲಿಕ್ಕಿಸಿದೆ.ಅದನ್ನ ನನ್ನ ಈ ತೇಲಿ ಬಂದ ಪುಟಗಳ ಜೊತೆಗೆ ಸೇರಿಸಿದ್ದೇನೆ.



ಶನಿವಾರ

ಅಲ್ಪ ವಿರಾಮ


ಆಕೆಯ ಕವನಗಳನ್ನ ಓದುತ್ತಿದ್ದೆ;  ಆಕೆಯ ಮನತಟ್ಟುವ ಕವನದ ಸಾಲುಗಳ ತೀವ್ರತೆಗೆ ಬೆರಗಾಗಿದ್ದೇನೆ. ಭಾವ ತೀವ್ರತೆ ಇದೆ, ನೋವಿದೆ.....ಇನ್ನು ಏನೆಲ್ಲಾ..

ಕೆಳಗಿನ ಸಾಲುಗಳನ್ನು ನಿಮಗಾಗಿ ಕೊಟ್ಟಿದ್ದೇನೆ.

......................................
"I want you to stare out of train windows
Agonising over women who look like me,"

ಆಕೆ ಇತ್ತಿಚೆಗೆ ತುಂಬ ಬರೆಯುತ್ತಿರುವ ನನ್ನ ಮೆಚ್ಚಿನ ಭಾರತೀಯ ಯುವ ಲೇಖಕಿ. ಈ ವಾರ ಪೂರ್ತ ಓದುತ್ತಾ ಕಳೆಯ ಬೇಕೆಂದು ನಿರ್ಧರಿಸಿದುದರ ಫಲ, ಅನೇಕ ಉತ್ತಮ ಪುಸ್ತಕಗಳನ್ನ ಓದುವಂತಾಯಿತು ,ಹಲವು ಉತ್ತಮ ಲೇಖರನ್ನ ಭೇಟಿಯಾದೆ, ಒಳ್ಳೆಯ ಪುಸ್ತಕಗಳ ವಿನಿಮಯವೂ ಆಯಿತೆನ್ನಿ.



ಶಾಲ್ಮಲೆ ನಕ್ಕಳಾ?

ಶಾಲ್ಮಲೆ ಯಾವತ್ತೂ ಹಾಗೇ, ಮುನಿಸಿಕೊಂಡದ್ದೇ ಇಲ್ಲ ಅಂದರೆ ತಪ್ಪಾಗುತ್ತದೆ. ‍ಅಲ್ಲದೇ, ಇದನ್ನು ಆಕೆಯ ಅವನು’ ಒಪ್ಪನು.
'ಸಿಟ್ಟು ಒಂದು ಸೊಬಗಂತೆ, ಆಕೆಯ ಪ್ರಕಾರ!
ಆಕೆಯ ಅವನು ಮೌನ ಬಂಗಾರ ಅನ್ನುವದರಲ್ಲೇ ಜೀವನ ಕಳೆಯಬೇಕೆಂದಿದ್ದವ.
ನೋಡು ಸುಮ್ಮನೆ ನೋಡು ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು !
ಅದರೊಳೊಂದಾಗುವದೆ ಪರಮ ರಸಿಕತೆ! ಅದಕೆ
ಮಿಗಿಲಿಹ ರಸಾನಂದ ಮತ್ತೆ ಬೇರೊಂದಿಲ್ಲ” - ಕುವೆಂಪು
ಎನ್ನುತ್ತಾ ಆತ ಬರಿದೇ ನಕ್ಕು ಬಿಡುತ್ತಾನೆ. ಅರ್ಥವಾಗುವದಿಲ್ಲ ಇಬ್ಬರೂ!

ತತ್ ಈ ಶಾಲ್ಮಲೆಯೊಂದಿಲ್ಲದಿದ್ದರೆ ..ರೇ ರೇ ಉಹುಮ್..ಮುಂದೆ ಮಾತು ಹೊರಡುವದೇ ಇಲ್ಲ.ಇದುರಿಗೆ ಶಾಲ್ಮಲೆ ನಿಂತಾಗ,ಮಾತು ಹೊರಕ್ಕೆ ಬರುವದೇ ಇಲ್ಲ. ಅದು ಹಾಗೇ.ಆಕೆಯೆಂದರೆ ಗೌರವವಾ,ಅತಿಯಾದ ಪ್ರೀತಿಯ? ಅದು ಆಕೆಗೂ ಅರ್ಥವಾಗಿಲ್ಲ.
ಬದುಕುತ್ತಾ ಹೊಗಬೇಕು ಇದು ಅವನ ಸಿದ್ಧಾಂತ.ಹಾನ್, ಸಿದ್ಧಾಂತವೆಂದೆಲ್ಲ ಕರಿಯಲಿಕ್ಕೆ ಅವ ತಯಾರಿಲ್ಲ.

ಜೀವನಕ್ಕೊಂದು ಗುರಿ ಇರಬೇಕು, ಸಿದ್ಧಾಂತ ಇರಬೇಕು, ನಂಬಿಕೆ ಇರಬೇಕು,ಬಾಳಲಿಕ್ಕೆ Scientific Reason ಬೇಕು, ಯಾಕೆಂದು ಪ್ರಶ್ನಿಸಬೇಕು,ಇಲ್ಲವಾದರೆ ಅದು ಮೌಢ್ಯವಾಗುತ್ತದೆ. ಇದೆಲ್ಲ ಏನಿದ್ದರು ನಮ್ಮ ಶಾಲ್ಮಲೆಯದು.

 ಕೆಲವೊಮ್ಮೆ, ಪ್ರಶ್ನೆಯೂ ಮುಖ್ಯವಲ್ಲ, ಉತ್ತರವೂ ಮುಖ್ಯವಲ್ಲ, ಅವೆರಡರ ನಡುವಿನ ಗೊಂದಲ,ತಳಮಳ ದ್ವಂದ್ವ ಮತ್ತು ಮೌನ ಬಹಳ ಮುಖ್ಯವಾದುದು ಅನ್ನಿಸುತ್ತದೆ & ಬದುಕಲಿಕ್ಕೆ Scientific Reason ಬೇಕಿಲ್ಲ ಅಲ್ಲವಾ? -ಇದು ಶಾಲ್ಮಲೆಯ ಅವನದ್ದು.

ನನಗಂತು ನೂರಕ್ಕೆ ನೂರು ಸತ್ಯ ಅನ್ನಿಸಿತ್ತು.ಅವನ ಮಾತನ್ನೆ ಹಾಗೆಯೇ ಫೇಸ್ ಬುಕ್ ವಾಲ್ನಲ್ಲಿ ಹಾಕಿದಾಗ, ನನ್ನ ಹಲವು ಸ್ನೇಹಿತರುಗಳಾದ ಪಲ್ಲವಿ,ಕವಿತಾ,ಪ್ರಸಾದು ,ಹೌದೆಂದಿದ್ದರು. ಶಾಲ್ಮಲೆಯ ಸಿಟ್ಟು ಈಗ ನನ್ನ ಮೇಲೆ ತಿರುಗಿರಬೇಕು.ಸಧ್ಯ ಮಾತಿಗೆ ಸಿಕ್ಕಿಲ್ಲ.
ಶಾಲು, ಬೇಕುಗಳಲ್ಲೆ ಜೀವನ ತುಂಬಿಸ್ಕೋತೀಯೇನೆ ಹುಚ್ಚಿ, ಅನ್ನುತ್ತಾನೆ.
ತಿಂಗಳದ ಆ ನಾಲ್ಕು ದಿನಗಳಲ್ಲಿ ಶಾಲುವಿನವದ್ದಾಟ ಆಕೆಯ ಅವನನ್ನ ಕಂಗೆಡಿಸುತ್ತದೆ. Painkiller ತೆಗೆದು ಕೊಳ್ಳದೆ ಹಾಗೆಯೇ ಒದ್ದಾಡುವ ಆಕೆಯನ್ನ ನೋಡುತ್ತ ಸುಮ್ಮನೆ ಕುಳಿತುಬಿಡುತ್ತಾನೆ, ಹೆಣ್ಣಿಗಿಂತ ಮೃದುವಾಗಿ ಬಿಡುತ್ತಾನೆ,ತಾನೇನು ಮಾಡಬೇಕೆಂದು ತಿಳಿಯದೆ ಶಾಲುವಿನ ಹಿಂದೆಯೇ ಸುತ್ತುತ್ತಾನೆ,ಬಾಲ ಸುಟ್ಟ ಬೆಕ್ಕಿನಂತೆ.ಆಕೆಗೆ ಅದು ಅರ್ಥವಾಗುವದೆ ಇಲ್ಲ. ಅರ್ಥವಾಗುವದಿಲ್ಲವೋ, ಅರ್ಥಮಾಡಿಕೊಳ್ಳಲಿಕ್ಕೆ ಯತ್ನಿಸುವದಿಲ್ಲವೋ, ನನಗಂತು ಬಗೆಹರಿಯುವದಿಲ್ಲ.

ನೋವು ಸಹಿಸುವ ಆಕೆ ಆತಂಗೆ ವಿಸ್ಮಯವಾಗಿ ಕಾಣುತ್ತಾಳೆ. ಒಂದು ಗುಳಿಗೆನುಂಗಿ ನಗಲಿಕ್ಕೆ ಆಗುವದಿಲ್ಲವ ಅಂದರೆ, ಇಲ್ಲ ಅಂತವುಗಳನೆಲ್ಲ ನುಂಗಬಾರದು, ಆರೋಗ್ಯಕ್ಕೆ ಒಳ್ಳೆಯದಲ್ಲ, ಮುಂದೆ ಏನೇನೊ ಆಗಿಬಿಡುತ್ತದಂತೆ, ಶಾಲು ನಿಜಕ್ಕು ಆತನನ್ನು ಹೆದರಿಸುತ್ತಿದ್ದಾಳೆ ಅನ್ನಿಸುತ್ತದೆ.

ತನ್ನ ಮಿತಿಗೆ ಬಗೆಹರಿಯದ್ದು ಎಂದು ಸುಮ್ಮನಾಗುತ್ತಾನೆ.
ಮುಂದೆ ಎಂದೋ,ಎನೇನೋ ಆಗಿಬಿಡುತ್ತದೆಯೆಂದು ಇಂದು ಯೋಚಿಸುವ ಶಾಲ್ಮಲೆ ಆತಂಗೆ 'ಪ್ರಶ್ನೆ'ಯಾಗಿದ್ದಾಳೆ.
ಶಾಲು ಯಾಕೇ ಹೀಗೆ ನೀನು ?
ಅಳು ಬಂದಾಗ ಅತ್ತುಬಿಡು, ನಗು ಬಂದಾಗ ನಕ್ಕುಬಿಡು ಎನ್ನುವ 'ಅವ' ಶಾಲ್ಮಲೆಯ ಆ ನಗುವಿಗಾಗಿ ಕಾಯುತ್ತಿದ್ದಾನೆ. ಶಾಲ್ಮಲೆ ನಕ್ಕಳಾ?

ಭೂಮಿ,Annie ಮತ್ತು ಕ್ರಿಸ್ಮಸ್

ಭೂಮಿ
ಒಟ್ಟು ಹದಿಮೂರು ತಾಸಿನ ಪ್ರಯಾಣ.ಈ ಸಾರೆಯೂ ಕಿಡಕಿಯ ಪಕ್ಕವೆ.ಕಿಡಕಿಯ ಪಕ್ಕ ಕೂತು ಮೇಲಿಂದ ಕೆಳಗೆ ನೋಡುವದೆಂದರೆ ಅಂದಿನಿಂದಲೂ ಮೆಚ್ಚು.ಅಜ್ಜಿ ಹೇಳುತ್ತಿದ್ದ ಕೈಲಾಸ ಲೋಕದ ದರ್ಶನವಾಗುತ್ತಿತ್ತಲ್ಲ.ನನ್ನ ಮುಂದಿನ ಸೀಟಿನಲ್ಲಿ ,ಮಕ್ಕಳಿಬ್ಬರು ಪ್ರಯಾಣದುದ್ದಕ್ಕು ಬೋರಾಗದಂತೆ ನೋಡಿಕೊಂಡರು ಅಂದರೆ ತಪ್ಪಿಲ್ಲ.ಸೀಟ್ ಬೆಲ್ಟ್ ಕಟ್ಟಿಕೊಳ್ಳುವಂತೆ ಗಗನಸಖಿ,ಸುಂದರವಾಗಿ ಉಲಿಯುತ್ತಿದ್ದಳು.ಕ್ಯಾಪ್ಟನ್ ಸೌರಭ್ ಕುಮಾರ್ ಮತ್ತು ಅವರ ಸಿಬ್ಬಂದಿ  ವಿಮಾನ ಇಳಿಸುವತ್ತ ಕಾರ್ಯೋನ್ಮುಖ ರಾಗಿದ್ದರು.
ದೇವನಹಳ್ಳಿ ವಿಮಾನ  ನಿಲ್ದಾಣದಲ್ಲಿ ಬಂದಿಳಿದಿದ್ದೆ.ಬೆಂಗಳೂರಿಗೆ ಬಂದಿದ್ದು ಇದೇ ಮೊದಲಲ್ಲವಾದರು, ನನಗೆ ಬೆಂಗಳೂರು ಇನ್ನೂ ಒಗ್ಗಿಲ್ಲವಾಗಿತ್ತು. ಒಂದು ವಾರದ ಮಟ್ಟಿಗೆ ಅಲ್ಲವಾ, ಅಂದುಕೊಳ್ಳುತ್ತ ೨ ಸಲ್ವಾರು,೨ ಜೀನ್ಸ್,ಒಂದು ಸೀರೆಯನ್ನಷ್ಟೇ ತುಂಬಿಸಿಕೊಂಡಿದ್ದೆ.ಗಂಟೆ ೫  ಆಗಿದೆ,ಮೊದಲು ಬಂದಿದ್ದು ೫ ವರ್ಷಗಳ ಹಿಂದೆ.ಮಳೆ,ಮುಸ್ಸಂಜೆ,ಟ್ರಾಫಿಕ್ಕು,ನಗರಕ್ಕೆ  ಬರುತ್ತಿರುವ ಮೆಟ್ರೊ, ಎಲ್ಲ ಬೆಂಗಳೂರನ್ನ ಹೈರಾಣ ಮಾಡಿಬಿಡುತ್ತದಂತೆ, ಹಾಗಂತ  ಅವ ಹೇಳಿದ್ದ.ಥತ್ ಜೆಟ್ ಲಾಗ್ ,ಕಣ್ಣುಗಳು ತಾವೇ ಮುಚ್ಚುತ್ತಿದ್ದವು.ನನ್ನ ಪುಟ್ಟ ಬ್ಯಾಗನ್ನ ಎಳೆದುಕೊಂಡು,ಹೊರಗಿನ ಕುರ್ಚಿಯಲ್ಲಿ ಕುಳಿತೆ.ಅವ ಇನ್ನೂ ಬಂದಿಲ್ಲವಾಗಿತ್ತು.ಹೊಟ್ಟೆ ಛುರುಗುಟ್ಟುತ್ತಿತ್ತು.ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಲ್ಲಿ ವೆಜ್ ರೋಲ್ ಖರಿದಿಸಿ ತಿನ್ನತೊಡಗಿದೆ.ಬೆಂಗಳೊರಲ್ಲಿ ಮಳೆ ಅಂದಿದ್ದ ಅವ.ಹೊರಗೆ ಕುಳಿತವಳಿಗೆ ಚಳಿಯಾಗತೊಡಗಿತ್ತು.ಸುಡುಗಾಡು ಮಳೆ ಅನ್ನುತ್ತಲೇ ಒಂದೇ  ಸಮನೆ ಸುರಿಯುತ್ತಿದ್ದ ಮಳೆಯನ್ನ ಎಂಜೊಯ್ ಮಾಡುತ್ತಿದ್ದೆ.
ಅವನ ಬಗ್ಗೆ ಹೇಳೋಕೆ ಏನಿದೆ? ಉಹ್ ಹಾಗಲ್ಲ,ಹೇಳೋಕೆ ಏನೆಲ್ಲ ಇದೆ..ಮಾತಾಡುವ ಮನಸ್ಸು ಬಂದರೆ ಮಾತಾಡುತ್ತಾನೆ,ಹೊತ್ತಿಗೆ ಲೆಕ್ಕವಿಲ್ಲ.ನಾನು ಇದ್ದಿದ್ದು  ಹೌಸ್ಟ್ನನ್ ನಲ್ಲಿ ,ಇವ ಬೆಂಗಳೂರಲ್ಲಿ.

ಓದಿದ್ದು  ಒಂದೇ ಶಾಲೆಯಲ್ಲಿ, ಅನ್ನುವದರೊಟ್ಟಿಗೆ ಶಾಂತತ್ತೆಯ ಮಗ ಅನ್ನುವ ಪರಿಚಯ.
ಹೆಸರು ಹೇಳಬೇಕಾ? ಗೋಪಾಲ,ನನ್ನ ಮಟ್ಟಿಗೆ ಗೋಪಣ್ಣ..ಅಗಷ್ಟ ಹದಿನೈದು ,ಜನವರಿ ಇಪ್ಪತ್ತಾರು ,ಗಾಂಧೀ ಜಯಂತಿ ಇದಕ್ಕೆಲ್ಲ ಭಾಷಣ ಬರೆದು ಕೊಡಲು ಗೋಪಣ್ಣ ಇದ್ದ.ಗೋಪಣ್ಣ ಬರೆಯುತ್ತಿದ್ದ ಸಾಲುಗಳು ಹೊಸದೆನಿಸುತ್ತಿದ್ದವು.ಇನ್ನು ನೆನಪಿದೆ,ಹಿಂದೆ ಗುರುವಿಲ್ಲ,ಮುಂದೆ ಗುರಿಯಿಲ್ಲ ಸಾಗುತ್ತಿದೆ ಪುಂಡರ ದಂಡು'ಎಂಬ ಸಾಲುಗಳು ನನಗೆ ಮೊದಲ ಬಹುಮಾನ ತಂದು ಕೊಟ್ಟಿದ್ದವು.

ಇಂತಿರ್ಪ ಗೋಪಣ್ಣ ಎಸ್ ಎಸ್ ಎಲ್ ಸೀ ಪಾಸಾಗಿದ್ದು ಊರಲ್ಲೆಲ್ಲ ಸುದ್ದಿಯಾಗಿತ್ತು.ಆವಾಗೆಲ್ಲ ಅದೆ ದೊಡ್ಡ ಸುದ್ದಿ.ಶಾಂತತ್ತೆ ಮನತುಂಬಿ ನಗೆಯಾಡಿದ್ದು ಆವತ್ತೆ ಅಂತ ಅಮ್ಮ ಹೇಳಿದ್ದ ನೆನಪು.
ನನ್ನ ಅಪ್ಪನದ್ದು ಊರಿಂದ ಊರಿಗೆ ಎತ್ತಂಗಡಿ ಆಗುವ ಸರಕಾರಿ ಕೆಲಸ.ಮುಂದೆ ಗೋಪಣ್ಣ ನೋಡಿದ್ದೂ ನನಗೆ ನೆನಪಿಲ್ಲ. ಒಮ್ಮೆ ಗೋಪಣ್ಣ ಇಂಗ್ಲಿಷ್ ನಲ್ಲಿ ಎಮ್ ಎ ಓದುತ್ತಿದ್ದ ವಿಷಯ ಅಮ್ಮ ಹೇಳಿದ್ದಳು.ಮುಂದಿನ ಕತೆ  ಗೊತ್ತಿರಲಿಲ್ಲ.
ನಾನು ಪಿಎಚ್ ಡಿ ಮಾಡುತ್ತಿದ್ದೆ  ಹೌಸ್ಟ್ನನ್ ಯುನಿವರ್ಸಿಟಿಯಲ್ಲಿ.ಒಂದು ದಿನ ಅಚಾನಕ್ ಆಗಿ ಫೇಸ್ ಬುಕ್ ನಲ್ಲಿ ಗೋಪಣ್ಣ ಕಂಡಂತಾದ. ಕಂಡಂತಾದ ಏನು, ಸಿಕ್ಕೇ ಬಿಟ್ಟ
ಹೀಗೆ ಗೋಪಣ್ಣ ಮತ್ತೆ ಸಿಕ್ಕಿದ. ನಾಲ್ಕೈದು ವರ್ಷಗಳ ಹಿಂದೆ.

ಆತ
ಅಣ್ಣಾ, ನವಿಲು ಮರಿ ಹುಟ್ಟುತ್ತಾ? ಎಂದು ಮುದ್ದಾಗಿ ಕೇಳಿದ್ದಳು,ಆಕೆಯ ಪುಟ್ಟ ಮುಖಕ್ಕೆ ಆ ಕಣ್ಣುಗಳು ಎದ್ದು ಕಾಣುತಿದ್ದವು.ಕೈಯಲ್ಲಿನ ಆ ನವಿಲುಗರಿಯನ್ನ ನೋಡುತ್ತ ಇಲ್ಲ ಪುಟ್ಟಾ ಅಂದಿದ್ದೆ. ಕೆಲವರ ಮುಖ ನೋಡಿದಾಗಲೇ ಅವರ ಬಗ್ಗೆ ಗೌರವ/ಪ್ರೀತಿ/ಕಾಳಜಿ ಬಂದುಬಿಡುತ್ತದೆ.ಅದರಲ್ಲೂ ನನಗೆ ಸ್ವಂತ ತಂಗಿ ಇರಲಿಲ್ಲ. ಈ ಪುಟ್ಟ ಕೂಸು ನಮ್ಮ ಮನೆಯವಳೇ ಆಗಿದ್ದಳು. ಆಗಾಗ ಗೋಪಣ್ಣಾ ಎಂದು ಕರೆಯುತ್ತ ತನ್ನ ೨೭ ಮತ್ತೊಂದು ಹಲ್ಲು ತೋರಿಸುತ್ತ ನಮ್ಮ ಮನೆಯತ್ತ ಸವಾರಿ ಆಗಮಿಸುತ್ತಿತ್ತು. ಆಕೆಯ ಅಪ್ಪನಿಗೆ ಮತ್ತೊಂದು ಊರಿಗೆ ವರ್ಗವಾಗಿ ಹೊರಟು ನಿಂತಾಗ,ನಂಗಂತು ಅಳುವೇ ಬಂದಿತ್ತು,ಗಂಡು ಹುಡುಗ ಅಲ್ಲವ ಅತ್ತರೆ ಮರ್ಯಾದೆ ಅಂದುಕೊಂಡು ಸುಮ್ಮನಿದ್ದೆ.
ಆಕೆಯನ್ನ ಮತ್ತೆ ನೋಡಿದ್ದು ಫೇಸ್ ಬುಕ್ ನಲ್ಲಿಯೆ.
ಹ್ಮ್,ಅವುಳು ಹಾಗೆ ಸದಾ ಹರಿವ ನದಿಯಂತೆ ಹರಿಯುತ್ತಲೇ ಇರಬೇಕೆನ್ನುವವಳು.ಒಂದು ಖಾದಿಯ ಕುರ್ತ/ ಟೀ ಶರ್ಟ್, ಮಾಸಿದ ಜೀನ್ಸ್ ಹಾಕಿ ನಿಂತರೆ ಮುಗಿಯಿತು ಅವಳ ಅಲಂಕಾರ.ತುಂಡು ಕೂದಲಿಗೊಂದು ಕಪ್ಪನೆಯ ರಬ್ಬರ್ ಬ್ಯಾಂಡು.ಚರ್ ಪರ್ ಎಂದು ಫ್ಲೋಟಸ್ ಹಾಕಿಕೊಂಡರೆ,ಕಾಲಿನ ಬಗೆಗಿನ ಕಾಳಜಿ ಮುಗಿಯಿತು.ಸದಾ ಏನನ್ನಾದರು ಹಲುಬುವವಳಿಗೆ  ತಿನ್ನಲಿಕ್ಕೆ ಅದೇ ಆಗಬೇಕೆನ್ನುವದೇನೂ ಇಲ್ಲ , ಏನಾದರೂ ನಡಿದೀತು. ಕಳೆದ ಎರಡ್ಮೂರು ವರ್ಷಗಳಿಂದ ಇವಳ ಬಗ್ಗೆ ಅರಿತಿದ್ದು ಇಷ್ಟೇ.
ಆಕೆ ಇರೋದೆ ಹಾಗೆ. ಆ ಊರಿನ ತಳಕು ಈಕೆಯನ್ನ ತಟ್ಟಲ್ಲ,ಹತ್ತಿರಕ್ಕು ಸೇರಿಸಲ್ಲ. ಆ ಊರನ್ನ ಆಕೆ ಒಗ್ಗಿಸಿಕೊಂಡಿಲ್ಲ ಅನ್ನಿಸಿತ್ತು ಮೊನ್ನೆ.
ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಈ ಸಮಯದಲ್ಲಿ ಗೋಪಣ್ಣಾ ‘Don’t worry’ ಅಂದಿದ್ದು ಈಕೆಯೇ.

ಭೂಮಿ
ಇದುರಿನಲ್ಲಿ ಗೋಪಣ್ಣನ್ನ ಕಂಡು ನನ್ನ ಯೋಚನೆಗಳಿಗೆಲ್ಲ ತಡೆ ಬಿತ್ತು. ಗೋಪಣ್ಣ ಮನೆಗೆ ಕರೆದೊಯ್ದ. ಶಾಂತತ್ತೆಯ ಮುಖದಲ್ಲಿ ಕುಶಿ ಇತ್ತು. ತುಂಬಿದ ಮನಸಿನಿಂದ ಸ್ವಾಗತಿಸಿದ್ದರು.
ಯಾಕೋ ಗೊತ್ತಿಲ್ಲ,ಮರಳಿದ ಮುಸ್ಸಂಜೆ ನಿರಾಸೆಯನ್ನ ಕಟ್ಟಿಕೊಂದು ಬಂದಿಲ್ಲವೆಂಬುದಷ್ಟೇ ಖಾತರಿ.ತೀರಾ ಮಂದ ಬೆಳಕಿರುವ ನಮ್ಮೂರಿನ ರಸ್ತೆಯ ದೀಪ,ಮಿಂಚಿ ಮರೆಯಾಗುವ ಆ ಮಿಂಚು ಹುಳುವಿನ ಮಿಂಚು, ಇದುರಿನ ಆಂಜನೇಯ ದೇವಾಲಯ,ರಸ್ತೆಗೆ ಅಂಟಿಕೊಂಡಿದ್ದ ಗಟಾರ,ಮನೆಯ ಗೋಡೆಗೆ ಆತುಕೊಂಡಿದ್ದ ಪೇರಲೆಯ ಗಿಡ ಮತ್ತು ಅಲ್ಲಿ ತನ್ನ ಪುಟ್ಟ ಗೂಡು ಕಟ್ಟಿರುವ ಆ ಜುಟ್ಟಪಿಕಳಾರ,ಪಕ್ಕದಲ್ಲೇ ಹಬ್ಬಿದ್ದ ನೆಹ್ರು ಗುಲಾಬಿಯ ಗಿಡ, ಮೈ ತುಂಬ ಮುಳ್ಳಿದ್ದರೂ ಬೇಸರಿಸದೆ ಗುಲಾಬಿಯ ಗಿಡಕ್ಕೆ ಹಬ್ಬಿದ್ದ ಶಂಖಪುಷ್ಪ ಹೂವಿನ ಬಳ್ಳಿ,ಅಲ್ಲೇ ಪಕ್ಕದಲ್ಲಿ ಶಾಂತತ್ತೆ ನೆಟ್ಟಿದ್ದ ಚಿಕ್ಕ ತುಳಸಿಯ ಗಿಡ, ಅದಕ್ಕೆ ಹಚ್ಛಿದ್ದ ಅರಿಶಿಣ,ಕುಂಕುಮ ಆ ಮಬ್ಬು ಬೆಳಕಲ್ಲೂ ಎದ್ದು ತೋರುತ್ತಿತ್ತು.
ಅಂತಹ ಮಬ್ಬುಬೆಳಕಲ್ಲಿ,ಮನೆಯಂಗಳದಲ್ಲಿ ಕುರ್ಚಿ ಹಾಕಿ ಕೂತು ತಲೆ ಎತ್ತಿ ಆಕಾಶ ನೋಡುವದೆಂದರೆ ಪರಮ ಸುಖ.ಅಂದು ನಾವು ಕೂತದ್ದು ಹಾಗೆಯೆ.


ಆತ
ಮಾತಿಗಿಂತ ಮೌನವೇ ಪ್ರಿಯವಾದಾಗ.
ಹಲವರನ್ನ ಗಮನಿಸಿದ್ದೀನಿ ಮಾತಾಡ್ತಲೇ ಇರ್ತಾರೆ ಸಾಕು ಅನ್ನುವವರೆಗೂ,ಸಾಕೆನ್ನಿಸುವವರೆಗೂ,ಸಾಕಪ್ಪಾ ಅನ್ನುವ ವರೆಗೂ.ಹೀಗೂ ಅಗುತ್ತೆ,ಕೆಲವೊಮ್ಮೆ ಕೆಲವರ ಮಾತು ಸಿಂಫನಿಯೇ ಹೌದು.(ಸಿಂಫನಿ = ಸಿಂಪು + ಹನಿ -ಸ್ವಾತಿ ಯ ಮಳೆಯ ಹನಿ ಸಿಂಪಿನಲ್ಲಿ ಮುತ್ತಗುತ್ತಲ್ಲಾ ಹಾಗೆ, ಸ್ವರಮೇಳ ಅಂತಲೂ ಹೇಳಬಹುದು.)ಮುತ್ತಿನಂತ ಮಾತು.ಕೆಲವರ ಮಾತಿಗಾಗಿ ತಾಸುಗಟ್ಟಲೆ ಕಾಯುತ್ತೇನೆ.ಮಾತಾಡುತ್ತಲೇ ಕಣ್ಣೀರಾಗಿಬಿಡುತ್ತೇನೆ.ಕೆಲವೊಮ್ಮೆ ಎದುರಿನವರನ್ನೂ ಅಳಿಸಿ ಕೊನೆಗೆ 'I am sorry' ಎಂದು ಹೇಳಿ ನನ್ನ ಪಾಡಿಗೆ ನಾನು ಸ್ವಲ್ಪ ಹೊತ್ತು ಹಾಗೆ ಇದ್ದುಬಿಡುತ್ತೇನೆ.
ಎಲ್ಲಾ ಮಾತಿಂದ, ಮಾತಿಗಾಗಿಯೇ.

ಅಪರೂಪಕ್ಕೆ ಸಿಕ್ಕಿದ ನಮಗೆ ಮಾತಾಡಲಿಕ್ಕೆ ಬಹಳ ವಿಷಯವಿತ್ತು,ಆದರೆ ಮಾತೇ ಹೊರಡುತ್ತಿರಲಿಲ್ಲ.
‘Annie’ ಪರಿಚಯಿಸಿದ್ದಕ್ಕೆ ಆಕೆಗೊಂದಿಷ್ಟು ಧನ್ಯವಾದ ಹೇಳಬೇಕಿತ್ತು.  Annie, ನನ್ನ ಹೆಂಡತಿ. ಮೂಲ ಇಂಗ್ಲೆಂಡಿನವಳು. ಕಳೆದ ವರ್ಷವಷ್ಟೇ ನಮ್ಮ ಮದುವೆ ಆಗಿತ್ತು.ಹಾಗಾಗಿ ಈಗ ನಮ್ಮದೊಂದು ಅಂತರ್ಜಾತೀಯ,ಅಂತರ್ದೇಶೀಯ,ಸಂಸಾರ. ಇದು ಸಾಕಾರಗೊಂಡಿದ್ದೆ ನಮ್ಮ ಈ ಪುಟ್ಟ ಕೂಸಿನ ಸಹಾಯದಿಂದ.ಈಗ ಆಕೆ ಪುಟ್ಟ ಕೂಸಲ್ಲ, Dr.ಭೂಮಿ.
ನಮ್ಮ ಮನೆಯಲ್ಲಿ ಕ್ರಿಸ್ಮಸ್ ನ ಸಂಭ್ರಮ.Annie ಯ ಸಂತಸ ಮುಗಿಲು ಮುಟ್ಟಿತ್ತು. ಭೂಮಿ ಆಕೆಯ ಆಪ್ತ ಗೆಳತಿ.
ಕೇಕ್ ತಯಾರಿಯಲ್ಲಿ ಸಾತ್ ನೀಡಲಿಕ್ಕೆ ಭೂಮಿಗೆ  ಅಡುಗೆ ಮನೆಯಿಂದ ಕರೆ ಬಂದಿತ್ತು.

Merry Christmasssss!! Annie ಎಂದು ಕೂಗುತ್ತಾ ಭೂಮಿ ಒಳಗೋಡಿದ್ದಳು


ಶುಕ್ರವಾರ

ಧಿಕ್ಕಾರವಿರಲಿ ಕ್ರೌರ್ಯಕ್ಕೆ


ಡಿಸೆಂಬರಿನ ಚಳಿ ಜೋರಾಗುತ್ತಿರುವಂತೆಯೇ,ಕ್ರಿಸ್ ಮಸ್ ನ ಸಂಭ್ರಮ, ಹೊಸವರುಷದ ಆಗಮನದ ದಿನಗಣನೆ ಶುರುವಾಗಿದೆ. ಯಾವತ್ತಿನಂತೆ,ನಿಟ್ಟುಸಿರು ಬಿಡುತ್ತಾ,'ಅಯ್ಯೊ ಅದೆಷ್ಟು ಬೇಗ ಈ ವರ್ಷ ಕಳೀತಪ್ಪ' ಅಂತ ಹೇಳಲು ಶುರುಮಾಡಿದ್ದಾಗಿದೆ.

ಹರಸಾಹಸ ಪಟ್ಟ ಒಸಾಮ ಮೇಲಣ ಧಾಳಿ, ಅಲ್ಲೊಂದು ಭೂಕಂಪ,ಇಲ್ಲೊಂದು ಪ್ರವಾಹ,
ಮುಂಬೈ ನ ಜನರ ಧೈರ್ಯ,ಬದುಕನ್ನ ಪ್ರೀತಿಸುವ ಕಲೆ,ಉಗ್ರರ ಕ್ರೌರ್ಯ,ಅಣ್ಣಾ ಹಜಾರೆ, ಅಮಿತಾಬ್ ಬಚ್ಚನ್ ರ ಮೊಮ್ಮಗಳು,ವಿದ್ಯಾ ಬಾಲನ್,ಸುದ್ದಿ ಮಾಡದೆ ಭೇಶ್ ಅನ್ನಿಸಿಕೊಂಡ ಕಿರಣ್ ಮತ್ತು ಅಮಿರ್ ಖಾನ್,ಖಾಲಿ ಡಬ್ಬಾ ಸೇರಿ ಹಿಟ್ಟಾದ ಶಾರುಕ್ ನ 'ರಾ ಒನ್', ಹೇಳದೇ,ಕೇಳದೆ ಸುದ್ದಿ ಮಾಡಿದ 'ಕೊಲಾವೇರಿ ಡಿ',
ಕೊಳೆತು ನಾರುತ್ತಿರುವ ಕರ್ನಾಟಕದ ರಾಜಕಾರಣ, ವಿಪರೀತಕಕ್ಕೇರುತ್ತಿರುವ ಮಾನಹಾನಿ,ಪ್ರಾಣಹಾನಿ ಪ್ರಕರಣಗಳು,

- ಇವೆಲ್ಲಾ ಈ ವರ್ಷದ ಕೆಲವು ಹೈ ಲೈಟ್ಸ್ ಅಷ್ಟೇ.

ಇವೆಲ್ಲವುಗಳ ಮಧ್ಯೆ, ಬೆಳಿಗ್ಗೆದ್ದು ಪೇಪರ್ ಓದಲಿಕ್ಕೆ ಮನಸ್ಸಾಗುವದಿಲ್ಲ.ಮಾನಹಾನಿ,ಪ್ರಾಣಹಾನಿ ಪ್ರಕರಣಗಳ ಸಂಖ್ಯೆ ಯಲ್ಲಾಗುತ್ತಿರುವ ಏರಿಕೆ ನನಗೆ ನಿಜಕ್ಕು ಅಸಹ್ಯ ಅನಿಸುತ್ತಿದೆ.ಮನುಷ್ಯ ಇನ್ನೊಬ್ಬ ಮನುಷ್ಯನನ್ನ ವಸ್ತುವಾಗಿ ಪರಿಗಣಿಸುತ್ತಿರುವದು ಖೇದಕಾರಿಯಾಗಿದೆ.

ಧಿಕ್ಕಾರವಿರಲಿ ಕ್ರೌರ್ಯಕ್ಕೆ.ಮಾನವನ ವಿಕೃತ ಮುಖಕ್ಕೆ ತೆರೆ ಬೀಳಲಿ.

ಗುರುವಾರ

ಖಾಲಿ



 A:ಯಾಕೋ ಸೋತು ಹೋದೆ ಅನ್ನೋ ಫೀಲಿಂಗು ಕಣೆ. ೩೦ ವರುಷಗಳ ವೃತ್ತಿ ಬದುಕಲ್ಲಿ ಹೀಗೆ ಅನ್ನಿಸಿದ್ದೇ ಇಲ್ಲ.

 B:ಹಮ್ ಅರ್ಥಾ ಆಗುತ್ತೆ.ನಿನಗೆ ಬೇಕಾದುದ್ದೆಲ್ಲ ಸಿಕ್ತು ಅದಿಕ್ಕೆ ಹಾಗಿರಬೇಕು.

A:ಈಗ ನನ್ನರಿವಿಗೆ ಬರುತ್ತಿಲ್ಲ,ಏನು ಬೇಕಾಗಿತ್ತು ನಂಗೆ?

B:ಇಲ್ನೋಡೆ,ಸ್ವಲ್ಪ ದಿನ ಅಷ್ಟೇ.ಈ ಒಂಟಿತನ ಇದೆಯಲ್ಲ,ಒಮ್ಮೆ ರೂಢಿ ಆಗಿ ಬಿಟ್ಟರೆ ಅಷ್ಟೆ ಮುಗೀತು,ಒಂಟಿತನವನ್ನ ನಾವು ಪ್ರೀತಿಸಲು ಶುರುಮಾಡಿ
ಬಿಡುತ್ತೇವೆ,ಹಾಗೆಯೇ ಒಂಟಿತನವೂ ಕೂಡ.

A:ಅದು ಹಾಗಲ್ಲ.

B:ಹಾಗೂ ಇಲ್ಲ ಹೀಗೂ ಇಲ್ಲ.ನಿನಗೆ ನೀನೆ.

A:ಹ್ಮ್ ನೀನಂದಿದ್ದು ಸರಿ,ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಆದರೂ..
ಎಷ್ಟು ವಿಚಿತ್ರ ಗೊತ್ತ,ನಮ್ಮ ಮೊಬೈಲಿನಲ್ಲಿ ಸಾವಿರ ನಂಬರ್ ಗಳಿರಲಿ,ನಮಗೆ ಬೇಕಾದಾಗ ಮಾತಾಡಲಿಕ್ಕೆ ಯಾರೂ ಸಿಕ್ಕುವದೇ ಇಲ್ಲ.ಎಲ್ಲವೂ ಕಾರ್ಯನಿರತವಾಗಿರುತ್ತವೆ,ಇಲ್ಲಾ ಸದ್ದಿಲ್ಲದೆ ಎಲ್ಲೋ ಬಿದ್ದಿರುತ್ತವೆ ಜೀವ ಕಳೆದುಕೊಂಡು.

B:ಅದಿಕ್ಕೆ ಹೇಳಿದ್ದು,ಯಾರಿಗೋ ಕಾಯುವದರಲ್ಲಿ ಅರ್ಥವಿಲ್ಲ

A:ಅದು ಹಾಗಲ್ಲ,ಎಲ್ಲೋ ಒಂದುಕಡೆ ಸಣ್ಣ ಭರವಸೆ.

B:ಭರವಸೆ ಇರಬೇಕು ನಿಜ, ಆದರೆ ಬೇರೆಯವರ ಮೇಲಲ್ಲ,ನಮಗೆ ನಮ್ಮ ಮೇಲೆ.

A:ಈ ಬೇಜಾರು,ನಿರೀಕ್ಷೆ ಗಳೆಲ್ಲ ಹಾಗೆ ಕಾಡುತ್ತವೆ, ಕಾಡಿಸುತ್ತವೆ.ಮಾಡಲಿಕ್ಕೆ ಕೆಲಸವಿಲ್ಲದಾಗ ನೆನಪಾಗುತ್ತವೆ.ಹಿಂದಿಲ್ಲ ಮುಂದಿಲ್ಲ,ಹೋಗಲಿ ಅರ್ಥವಾದರು ಇದೆಯ? ಅದೂ ಇಲ್ಲ.Just Like that…

B:ಯಾಕೆ ಅನ್ನಿಸುವದಿಲ್ಲ ಗೊತ್ತಾ, ಯಾರು ಆಪ್ತರಾಗುವದೇ ಇಲ್ಲ,ಎಲ್ಲರಿಗೂ ಧಾವಂತದ ಬದುಕಿನ ಹೋರಾಟ ದಿಕ್ಕೆಟ್ಟಿಸಿರುತ್ತದೆ.ಅವರವರ ಬದುಕು ಅವರವರಿಗೆ .

A:ಇಂದಿನ ಬದುಕೊಂದೇ ನಿಜ ಅಲ್ಲ ಅಲ್ಲವ, ನಾಳೆಯೂ ಬದುಕಬೇಕು,ಅದ್ಯಾಕೆ ಅರ್ಥವಾಗುವದಿಲ್ಲ?

B:ಅಯ್ಯೊ ಮಂಕೆ,ಇವತ್ತು ಬದುಕಿದರೆ, ನಾಳೆ ತಾನೆ? ಅಲ್ಲಿಯವರೆಗು ನಾಳೆಯ ಯೋಚನೆ ಯಾತಕ್ಕೆ.ಇವರೆಲ್ಲ ಜನಸಾಮಾನ್ಯರು ಕಣೆ,ಇಂದು ಮುಖ್ಯ.ಕಾಣದ ನಾಳೆಯಲ್ಲ.

A:ಹ್ಮ್ಮ್ ಆದರೂ ಕಾಣದ ನಾಳೆಯ ಬಗ್ಗೆ ಕನಸು ಕಟ್ಟಿದಾಗ,ಎಷ್ಟು ಕುಶಿಯಾಗುತ್ತದಲ್ಲ.

B:ನನ್ನ ಕತೆ ಕೇಳು

ಇಷ್ಟು ವರ್ಷ ಕೆಲಸ ಮಾಡಿ, ಒಂದೇ ಸಾರಿ ನಿನಗಿನ್ನು ವಯಸ್ಸಾಯಿತು ಮನೆಗೆ ಹೋಗು ಎಂದಾಗ,ಇವರಿಗು ನನಗೂ ಇನ್ನು ಏನು ಸಂಬಂಧ ಉಳಿದಿಲ್ಲ ಎಂದು.ಈ Retirement  ಹಾಗೆ.ಎಲ್ಲರಿಗೂ ವಯಸ್ಸಾಗುತ್ತದೆ,ಆದರೆ ಅದನ್ನ ಬೇರೆಯವರ ಬಾಯಿಯಿಂದ ಕೇಳಿದಾಗ , ನಿಜಕ್ಕೂ ನನಗೆ ವಯಸ್ಸಾಯಿತು ಅನ್ನಿಸಿಬಿಡುತ್ತದೆ.

A:ಹೌದು…ಅದು ಹಾಗೆ ಕಣೆ

B:ಅದು ನನ್ನದೇ ಕಂಪನಿ, ನಾ ಕಟ್ಟಿ ಬೆಳೆಸಿದ್ದು.ನನಗೆ ನಿನ್ನ ಸೇವೆ ಸಾಕು ಇನ್ನು ನೀನು ಹೋಗಿ ವಿಶ್ರಾಂತಿ ತೆಗದುಕೊ ಅಂದಾಗ, ಇದನ್ನ ಕಟ್ಟಲು ಪಟ್ಟ ಪಾಡೆಲ್ಲ ಕಣ್ಮುಂದೆ ಬಂದು,ಯಾಕೋ ನಾ ಬೇರೆಯವ,ಒಂಟಿ ಅನ್ನಿಸಿಬಿಡುತ್ತದೆ.ಇನ್ನು ಅವರ ಆಡಳಿತದಲ್ಲಿ ತಲೆ ಹಾಕಬಾರದಂತೆ.ಯುವಕರಿಗೆ ಅವಕಾಶ ಕೊಡಬೇಕಂತೆ.ಕಂಪನಿ ಬೆಳೆಯಿಸುತ್ತಾ,ಸಾವಿರ ಸಾವಿರ ಯುವಕರಿಗೆ ಕೆಲಸ ಕೊಟ್ಟಿದ್ದು ಕಾಣುವದೇ ಇಲ್ಲ.

A:ಹುರುಳಿಲ್ಲದ್ದು ಕಣೆ.ಸಂಜೆ ಆಗ್ತ ಇದೆ ಮನೆಗೆ ಹೋಗಬೇಕಲ್ಲಾ.ಅಲ್ಲಾ ನೀ ಅದೆನೋ ಹೊಸ ಕಂಪನಿ ಕಟ್ಟುತ್ತೀಯಂತೆ?

B :ಹ್ಮ್ ,ಸುಮ್ಮನೆ ಮನೆಯಲ್ಲಿ ಕುತಿರ್ಲಾ? ಶುದ್ಧ ಸೋಂಬೇರಿಯಾಗಿ?

A: ಯಾಕಾಗಬಾರ್ದು? ಒಂದಷ್ಟು ದಿನ ಹಾಗೆ,ಖಾಲಿ,ಏನನ್ನೂ ಯೋಚಿಸದೇ.ಪಾರ್ಕಿಗೆ ಬಾ ,ಸುತ್ತಲಿದನ್ನು ನೋಡು,ಬೇರೆಯದೇ ಲೋಕ.ಹೊಸ ಹೊಸ ವಿಚಾರಗಳು ಬಂದಪ್ಪಳಿಸಿಯಾವು.

B: Let me try Out..


ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.

ಖಾಲಿತನ ಅನುಭವಿಸಿದವರಿಗಷ್ಟೆ ಗೊತ್ತು,ಖಾಲಿತನಕ್ಕಾಗಿ ಜನರಿಲ್ಲದ ಪ್ರದೇಶವೇ ಆಗಬೇಕಿಲ್ಲ,ನೀವೆಲ್ಲಿದ್ದೀರೋ ಅಲ್ಲೇ ದಕ್ಕಬಹುದು.
ತ್ವಮೇವ ಕರ್ತಾಸಿಯಿಂದ 'ಅವನೇ ನಾನು'  ವರೆಗೂ.

ಭಾನುವಾರ

ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ

ಇಂದಿನ ಬೆಳಗು ಶುರುವಾದದ್ದೇ ಬಿಸಿಬಿಸಿ ಕಾಫಿಯಿಂದ. ಭಾನುವಾರವಾದರು ನಾನು ನಿದ್ದೆಗೆ ಶುಭೋದಯ ಹೇಳುವದು ಬೆಳ್ಳಂಬೆಳಗ್ಗೆಯೇ .ದೊಡ್ಡ ಕಪ್ ನ ತುಂಬ ತುಂಬಿಸಿ ಸೊರ್ ಸೊರ್ ಎಂದು ಕುಡಿಯುತ್ತ ಕುಳಿತರೆ ಹೊತ್ತೇರುತ್ತಿರುವದನ್ನ ಮರೆಯಿಸುವ ನಷೆ ಆವರಿಸಿಬಿಟ್ಟಿದೆ. ಮೂಡಣದ ನಸುಕು ಕತ್ತಲೆಯ ಕಳೆ ಕಳೆಯುತ್ತ,ಮುಂಜಾವಿನ ಮಂಜು ಇಳಿಯುತ್ತಿದ್ದರೆ,ಅದನ್ನೆ ನೋಡುತ್ತ ,ಬಿಸಿಬಿಸಿ ಕಾಫಿಯ ಒಂದೊಂದೇ ಗುಟುಕು ಹೊಟ್ಟೆ ಸೇರಿದ ಆ ಗಳಿಗೆಗಳು ಗೊತ್ತೇ ಅಗುವದಿಲ್ಲ. ರುಚಿ ಸವಿವ ಕೈಂಕರ್ಯ ದಲ್ಲಿ ಬಹಳ ಬ್ಯೂಸಿಯಾಗಿರುವ ನಾಲಿಗೆ, ಆ ಬಿಸಿಗೆ ಚುರುಗುಟ್ಟಿದರು ಎನನ್ನೂ ಹೇಳುವದೇ ಇಲ್ಲ.ಕಾಫಿಯ ಮಟ್ಟಿಗೆ ಹೇಳುವದಾದರೆ ಮೊದಲು ಸುದ್ದಿ ಮುಟ್ಟುವದು ಮೂಗಿಗೆ ಸರಿ.ಮೂಗು ಮಿಕ್ಕವರನ್ನ ಬಡಿದೆಬ್ಬಿಸಿ,ಬೆಳಗಾಗಿದ್ದನ್ನ ಸಾರಿ ಹೇಳಿದ್ದು ದಿಟ.
ಆ ಗುಬ್ಬಿಗೂ ಹಾಗೇ ಆಗಿರಬೇಕು.ನನ್ನ ಪ್ರೀತಿಯ ಗುಬ್ಬಿ/ ಗುಬ್ಬಚ್ಚಿ ನಾ ಕಾಫಿ ಕುಡಿಯುವದನ್ನ ನೋಡಲಿಕ್ಕೆ ಬೇಗ ಎದ್ದಿರಬೇಕು,ಅಥವ ಅದಕ್ಕು ರುಚಿ ಸವಿವ ಮನಸ್ಸಾಗಿರಬೇಕು,ಚಿವ್ ಚಿವ್ ಎನ್ನುತ್ತ ಇಲ್ಲೇ ಸುತ್ತುತ್ತಿದೆ, ನನ್ನಿದುರಿನ ಕಟಾಂಜನದ ತುದಿಯಲ್ಲಿ ಕೂತು ತನ್ನ ಚೊಂಚಿನ ಎರಡು ಬದಿಯನ್ನು ಅನುಕ್ರಮವಾಗಿ ಉಜ್ಜುತ್ತ ಕಾಫಿಯ ಸೇವನೆಗೆ ನಾ ಸಿದ್ಧ ಎಂದು ಸಾರಿ ಹೇಳುತ್ತಿರುವದು ನನಗೆ ಕಾಣಿಸುತ್ತಿಲ್ಲ. ಈ ಗುಬ್ಬಿ ಏನ ಹೇಳ ಹೊರಟಿದೆಯೆಂಬುದು ಕಾಫಿಯ ಸವಿರುಚಿಯ ನಷೆಯಲ್ಲಿ ತೇಲುತ್ತಿದ್ದ ನನಗೆ ತಿಳಿಯುವದೇ ಇಲ್ಲ

ಯಾಕೋ ನನ್ನ ದಿವ್ಯ ನಿರಾಸಕ್ತಿ ತನಗೆ ನೋವು ತಂದಿದೆ ಎಂದು ನನಗೆ ತಿಳಿಯಲೆಂದು ಕುಂತಲ್ಲಿಂದ ರೆಕ್ಕೆ ಬಡಿಯುತ್ತ ಹಾರಿ,ಚಿವ್ ಚಿವ್ ಎಂದುಲಿದು ನನ್ನನೊಂದು ಸುತ್ತು ಹಾಕಿ ಮತ್ತೆ ಬಂದು ಅಲ್ಲೇ ತುದಿಯಲ್ಲಿ ಕುಳಿತು ಮೌನದ ಪಾಲಾಗಿಬಿಟ್ಟಾಗ, ತಟ್ಟನೆ ಇಹದ ಅರಿವಾಗಿ, ನನಗೆ ಖೇದವೆನಿಸಿಬಿಡುತ್ತದೆ. ಸಾವಧಾನ ಭಂಗಿಯಲ್ಲಿ ಕುಳಿತ ಆ ಗುಬ್ಬಿಯ ಆ ಚೂಪು ಚೊಂಚು ಮತ್ತೂ ಚೂಪಗಾದಂತೆ,ರೆಕ್ಕೆಗಳೆಲ್ಲ ಸೇರಿ ನನ್ನ ವಿರುದ್ಧ ಸಮರ ಸಾರಿದಂತೆ ನಾನು ಅಂದುಕೊಳ್ಳುತ್ತೇನೆ.
ಆದರೆ ನಡೆದದ್ದು ಹಾಗಲ್ಲ.ಅಲ್ಲೇ ಎಲ್ಲೋ ಹತ್ತಿರದಲ್ಲಿ ಅಡಗಿ ಕುಳಿತಿದ್ದ ಕೀಟವೊಂದರ ಮೂಗು ಸೇರಿದ ಕಾಫಿಯ ಪರಿಮಳ ಪ್ರಾಣಭಯವನ್ನೂ ಲೆಕ್ಕಿಸದಂತೆ ಮೂಲದೆಡೆಗೆ ಎಳೆದು ತಂದಿರುತ್ತದೆ. ಕಾಫಿಯ ಪರಿಮಳದ ಮೂಲ ಅರಸಿ ಬಂದ ಆ ಪುಟ್ಟ ಕೀಟ,ಕಾಫಿಯ ರುಚಿ ನೋಡಲು ಆಗದೆ ಚಡಪಡಿಸುತ್ತಿರುವ ಆ ಪ್ರೀತಿಯ ಗುಬ್ಬಚ್ಚಿಯ ಆಹಾರವಾಗಿ ಬಿಡುತ್ತದೆ.ಕಾಫಿ ಸಿಕ್ಕದಿದ್ದರೇನು ಎನ್ನ ಹೊಟ್ಟೆ ತುಂಬಿತಲ್ಲ, ಎಂದು ತನಗೇ ತಾ ಸಮಧಾನಿಸಿಕೊಳ್ಳುತ್ತ ಕುಂತಲ್ಲಿ ಕೂಡದ ಗುಬ್ಬಚ್ಚಿ ಅಲ್ಲಿಂದ ಮರೆಯಾಗಿ ಬಿಡುತ್ತದೆ.ಪಾಪ ಗುಬ್ಬಿ,ಎಂದು ಅಂದುಕೊಳ್ಳುತ್ತ,ರುಚಿ ಸವಿಯುವಲ್ಲಿ ತಲ್ಲೀನಳಾಗಿಬಿಡುತ್ತೇನೆ ನಾನು.

ಚೂರು ಸಕ್ಕರೆ ಹೆಚ್ಚಿದ್ದರೂ ನಡೆಯುತ್ತಿತ್ತು ಎಂಬಲ್ಲಿಗೆ ಕಾಫಿಯ ಲೋಟದಲ್ಲಿ ಕೊನೆಯ ಆ ಗುಟುಕೊಂದೇ ಉಳಿದುಬಿಡುತ್ತದೆ.ಬಿಸಿ ತಣಿದ ಆ ಕೊನೆಯ ಗುಟುಕು,ತಳ ಸೇರಿ ಅಡಗಿದ್ದ ಚೂರು ಸಕ್ಕರೆಯ ಜೊತೆ ಬೆರೆತು ಸಿಹಿಯ ಸಿಹಿ ದುಪ್ಪಟ್ಟಾಗಿ, ಅಬ್ಬಾ ಸಕ್ಕರೆ ಕಮ್ಮಿ ಅನಿಸಿದ್ದರೂ ಪರವಾಯಿಲ್ಲ ಇಷ್ಟೆಲ್ಲ ಸಿಹಿ ಇರಬಾರದಪ್ಪ ಅನ್ನಿಸಿ ಹೋಗುವಂತೆ ಮಾಡಿಬಿಡುತ್ತದೆಯಲ್ಲಾ.
ಏನೇ ಅಂದರು, ಮತ್ತೊಂದು ಲೋಟ ಕಾಫಿ ಕುಡಿವ ತನಕ ಉಳಿಯುವದು ಆ ದುಪ್ಪಟ್ಟಾದ ಸಿಹಿಯೆ, ಅದರ ಸವಿಯೇ, ಅದರ ನೆನಪೆ, ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ ಏನಂತೀರಿ?

ಬುಧವಾರ

ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ


ಸುರಿವ ಮಳೆ  ಸುರಿದು ಬರಿದಾಗಿತ್ತು,ನನ್ನ ಕಣ್ಣೀರಿನಂತೆಯೇ.ಯಾಕೊ ಅತ್ತು ಹಗುರಾಗೋಣವೆಂದರೆ ಅಳುವು ಬರುತ್ತಿಲ್ಲಾ.ಮಾಡಂಚಿನಿಂದ ಮಳೆ ನೀರು ಬಿದ್ದು ಬಿದ್ದು ನೆಲ ಸವೆದಿತ್ತು,ಕೊರಕಲಾಗಿತ್ತು,ನನ್ನ ಬದುಕಿನಂತೆಯೆ.ಬಿದ್ದ ನೀರು ಆ ಇಳೆಯ ಒಡಲೊಳಕ್ಕೆ ಇಳಿಯಲೇ ಇಲ್ಲ ಆತನ ಪ್ರೀತಿಯಂತೆ.ಕೊರಕಲ ಸಂದಿಯನ್ನೂ ಬಿಡದೇ ಅಂಗಳದ ಮಣ್ಣ ಸಮೇತ ಹಾಗೆಯೇ ಕೊರೆದು, ತರೆದು ಮಳೆಯ ನೀರು ಕೆಂಪಾಗಿ ದೂರ ಹರಿದಿತ್ತು ನಮ್ಮ ಪ್ರೀತಿಯಂತೆಯೆ.ಮಣ್ಣ ಸಾರವೆಲ್ಲ ಮಳೆಯ ನೀರಿನೊಟ್ಟಿಗೆ ಹರಿದು ದೂರ ದೂರ ಸರಿದು ಸಾಗರವ ಸೇರಿತ್ತು ಉಪ್ಪಾಗಲು,ಮರಳಾಗಲು,ಥೇಟ್ ನನ್ನ ಕಣ್ಣಿರಿಂತೆಯೇ, ನನ್ನ ಬದುಕಿನಂತೆಯೇ.

ಅಂವ ಕಂಡಿದ್ದು ನಮ್ಮ ಮಲೆನಾಡಿನ ಆ ರಪ್ಪನೆ ಬಾರಿಸುವ ಮಳೆಗಾಲದಲ್ಲಿಯೇ.ನಾನು ಆಗ ಧಾರವಾಡದಲ್ಲಿ ಎಮ್ ಎ ಓದುತ್ತಿದ್ದೆ.ಇಂಗ್ಲಿಷ್ ನನ್ನ ಮೆಚ್ಚಿನ ವಿಷಯ. ಅವಗೆ ಹೇಗೋ ತಿಳಿದಿತ್ತು ಅನ್ನಿಸುತ್ತದೆ.ಆತ ಮಾತ ಶುರುವಲ್ಲಿಯೇ,
I'm Nobody! Who are you?
Are you – Nobody – too?

Then there's a pair of us?

Don't tell! they'd advertise – you know!
How dreary – to be – Somebody!

How public – like a Frog –

To tell one's name – the livelong June –

To an admiring Bog!



ಅಂದಿದ್ದ. ಎಮಿಲಿ ಡಿಕಿನ್ಸೊನ್ ರ ಪದ್ಯ.

ಇಲ್ಲಿ ಯಾರು ಯಾರಿಗು ಒತ್ತಾಯಿಸುವ ಅಗತ್ಯವಿಲ್ಲ, ಯಾರೋ ಅಗುವದಕ್ಕೆ ಹೋಗಿ ಎನೇನೊ ಆಗುವ ಅನಿವಾರ್ಯತೆ ಇಲ್ಲ,ನೀನು ನೀನಾಗಿರಲಿಕ್ಕೆ,ನಿನಗನಿಸಿದ್ದನ್ನ ಹೇಳಲಿಕ್ಕೆ ಯಾರ ಭಯವು ಇಲ್ಲ ಅಂದ.

ಕುಶಿ ಅನ್ನಿಸಿತು,ಮಹಿಳೆಯರ ಮೆಲೆ ಗೌರವವಿರುವವರನ್ನ ಕಂಡರೆ ನನಗೆ ಗೌರವ ಜಾಸ್ತಿ. ಹೀಗೆ ಪರಿಚಯ ೪ನೆ ವರುಷಕ್ಕೆ ಬಂದಿತ್ತು.ಮನೆಯಲ್ಲಿ ಮದುವೆಯ ಮಾತುಕತೆ ನಡೆದಿತ್ತು.ಜಾತಿ,ಆಚಾರ,ಗ್ರಹ ಗತಿಗಳೆಲ್ಲ ಪ್ರತಿಕೂಲವಾಗಿದ್ದವು.ಮನೆಯಲ್ಲಿ ಧಾರವಡದ ಬಿಸಿಲಲ್ಲಿ ಕಂಡ ಅವನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಕೊನೆಗು ಒಪ್ಪಲೆ ಇಲ್ಲ, ಆ ಮಳೆಗಾಲದಲ್ಲೂ.

ಅಂದು ನಮ್ಮನೆಯ ಕೆರೆ ದಂಡೆಯ ಮಗ್ಗುಲಲ್ಲಿ ಕೊನೆಯ ನಿರ್ಧಾರ.ಅದೆ ಸಿನಿಮೀಯ ತಿರುವುಗಳಿಗಾಗುವ ಅಂತ್ಯ ನಮ್ಮ ಜೀವನದ್ದು. ಬೇಜಾರಿನದ್ದು.
I cannot live with you,

It would be life,

And life is over there

Behind the shelf

………….



So we must keep apart,

You there, I here,

With just the door ajar

That oceans are,

And prayer,

And that pale sustenance,

Despair! -

Emily Dickinson

ಆ ಸಾಲುಗಳನ್ನ ಹೇಳಿಯೇ ಆತ ದೂರಸರಿದಿದ್ದು.

ಹ್ಮ್ಮ್ ಅಂದೇ ಮಳೆಗಾಲ ಶುರುವಾಗಿತ್ತು,ಜಡಿಮಳೆ. ಕನಸಾಗಿರಲಿ ಎಂದು ಕೈ ಚಿವುಟಿ ನೋಡಿಕೊಂಡಿದ್ದೆ.ಉರಿಯಲಿಲ್ಲ,ಉರಿಯಲಿಕ್ಕೆ ನೋವು ಗೊತ್ತಾಗುವದಾದರೂ ಹೇಗೆ? ಆ ನೋವೇ ಈ ನೋವ ನುಂಗಿದರೆ?
ಮತ್ತೆ ಅದೇ ಮಳೆಗಾಲ, ಅದೇ ಕಿಡಕಿಯ ಪಕ್ಕ ಅಂತೆಯೇ ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ.
ಉಸಿರು ಎಲ್ಲೋ ಕಳೆದು ಹೋಗಿದೆ,ಕಾಣದ ಅವನಂತೆ ಕಣ್ತುಂಬ ನಿದ್ರೆ ಬರದೆ ವರುಷಗಳಾಗಿದೆ,ಅಂದಿನ ದಿಟ್ಟತನ ಅವನೊಟ್ಟಿಗೇ ಮರೆಯಾಗಿದೆ ಮತ್ತೆ ಬಾರದಂತೆ.ಮತ್ತೆ ಮಳೆ ಶುರುವಾಗಿದೆ ಒಂದೇ ಸಮನೆ ಕಾಡುವ ನೆನಪುಗಳಂತೆ.

ಗುರುವಾರ



ನಾಕೇ ನಾಕು ತಂತಿ.....



ಅಬ್ಬಾ ಎಷ್ಟೋ ದಿನಗಳು ಅಲ್ಲಲ್ಲ ತಿಂಗಳುಗಳೆ ಸರಿದು ಹೋಗಿದ್ದಾವೆ ಏನನ್ನು ಬರೆಯದೇ. ಮಳೆಗಾಲ ಕಳೆದು ,ಚಳಿಗಾಲ ಮುಗಿದು ಬಿರು ಬೇಸಿಗೆಯೂ ಕೈಬೀಸಿ ಹೋಗಿಬರುತ್ತೇನೆ ಅನ್ನುತ್ತಿದೆ. ಮತ್ತೆ ವರುಣ ದೇವರ ಕೃಪೆಯಿಂದ ಆಗಸದಲ್ಲಿ ಮೋಡಗಳು ತೇಲಿ ಕುಬೇರನ ಲೋಕದ ನೆನಪನ್ನ ತರುತ್ತಿವೆ(ಕುಬೇರನ ಲೋಕವನ್ನ ಯಾವತ್ತು ನೋಡಿದ್ದೀಯಾ ಎಂದು ಕೇಳಬೇಡಿ, ಹಾಗೆ ಸುಮ್ಮನೇ..),ಆಗಾಗ ಆಂಗ್ಲ x, y, z, ಬರೆಯುವ ಕೋಲ್ಮಿಂಚುಗಳು, ನೆನ್ನೆ ಮೊನ್ನೆಯ ಗುಡುಗುಗಳು,ಬೆಂಗಳೂರಲ್ಲಿ ಮಳೆಗಾಲ ಶುರುವೇ ಆಗಿಬಿಟ್ಟೀತೇನೋ ಎಂಬ ಫೀಲ್ ಕಟ್ಟಿಕೊಟ್ಟಿವೆ.
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ನೆಗೆದಂತೆ ದಿನಗಳೆಲ್ಲ ಕಳೆದೆ ಹೋಗಿವೆ.ಇಷ್ಟೆಲ್ಲಾ ದಿನಗಳಲ್ಲಿ ಎಷ್ಟೆಲ್ಲಾ ಘಟನೆಗಳು ನಡೆದು ಹೋಗಿದ್ದಾವೆ
ಒತ್ತಡದ ಜೀವನಕ್ಕೊಂದು ತಡವಾದ ವಿಶ್ರಾಂತಿ ದೊರಕಿದೆ.ಬಹಳ ದಿನಗಳಿಂದ ಹಲವು ಅನಿಸಿಕೆಗಳು ತೇಲಿ ಬರುತ್ತಲೇ ಇದ್ದವು, ಎಲ್ಲವನ್ನು ಕೂಡಿಹಾಕಲಿಕ್ಕಾಗಿರಲಿಲ್ಲವಷ್ಟೇ.



*****ಒಂದು*****

ಬಿಡುವಿನ ವೇಳೆಯಲ್ಲಿ ಹಲವು ಪುಸ್ತಕಗಳನ್ನು ಓದಿ ಮುಗಿಸಿದೆ ಎನ್ನುವದು ಒಂದು ಸಾಧನೆಯ ಅಧ್ಯಾಯ. ಹಾಂ ಹೇಳಬೇಕೆಂದರೆ, ಬೇಂದ್ರೆಯವರ ಕವನ ಸಂಕಲನಗಳನ್ನು ಮತ್ತೆ ಓದಿದೆ ಈ ಬಾರಿ ಹೊಸದೊಂದೇ ಅರ್ಥ ಹುದುಕಿದೆ.ಹುಡುಕಿದೆ ಅನ್ನುವದಕ್ಕಿಂತ ದೊರಕಿದೆ ಅನ್ನುವದೇ ಸೂಕ್ತವಾದೀತು. ಪುಸ್ತಕಗಳನ್ನು ನೋಡಿದಾಗ ರುಚಿಕಟ್ಟಾದ ಭೋಜನ ದ ಚಿತ್ರ ಕಣ್ಮುಂದೆ ಬರುತ್ತದೆ ನನಗೆ. ಇದುವರೆಗೂ ಪುಸ್ತಕಗಳು ನೀಡಿದ ಕುಷಿಯನ್ನ ಮತ್ತೆಲ್ಲೂ ಹುಡುಕಲಿಕ್ಕಾಗಲಿಕ್ಕಿಲ್ಲ ಅನ್ನುವದು ಕುಷಿಯೂ ಅಲ್ಲದ ಬೇಜಾರು ಇಲ್ಲದ ಸಂಗತಿ .ಒಂದೇ ಉಸಿರಿನಲ್ಲಿ ಓದಿದ, ಖಲೆದ್ ಹೋಸೆನಿಯ 'Thousand Splendid Suns ಕಾದಂಬರಿ - ಸುಂದರ ಆಫ್ಘಾನಿಸ್ತಾನಕ್ಕಾದ ಗತಿಗಾಗಿ ಮರುಗುತ್ತದೆ, ಮತ್ತು ನಾನು ಭಾರತದಲ್ಲಿ ಜನಿಸಿದ ಬಗ್ಗೆ ಬಹಳ ಕುಶಿಯಾಗುತ್ತದೆ. ಆ ಕಾದಂಬರಿ ಓದಿದ ಕೂಡಲೇ ಅನಿಸಿದ್ದು ಇಷ್ಟೇ -'ನಾನು ಆಫ್ಘಾನ್ ದೇಶದಲ್ಲಿ ಹುಟ್ಟಲಿಲ್ಲವಲ್ಲ ಸಧ್ಯ'.ಅಫಘಾನಿನ ಜನರ ಬಗ್ಗೆ ಮರುಕ ಹುಟ್ಟಿಸುತ್ತದೆ,ಕತೆಯಲ್ಲಿನ ಮರಿಯಂ ಮತ್ತು ಲೈಲ ಎಂಬ ಇಬ್ಬರು ಮಹಿಳೆಯರು ಅಫಘಾನಿನ ಮಹಿಳೆಯರನ್ನ ಪ್ರತಿನಿಧಿಸುತ್ತಾರೆ, ಅಲ್ಲಿನ ಬಡತನ, ಯುದ್ಧ ಮತ್ತು ಅದರ ಪರಿಣಾಮಗಳು,ಮಹಿಳೆ ಗಿರುವ ಸ್ಥಾನಮಾನಗಳು ಎಲ್ಲವನ್ನ ಜಾಹೀರು ಮಾಡಿದೆ ಈ ದೊಡ್ಡ ಕಾದಂಬರಿ.ಖಲೆದ್ ಹೋಸೆನಿ , ಕೊಡುವ ವಿವರಣೆ, ಮರಿಯಂ ಪಾತ್ರವನ್ನ ಚಿತ್ರಿಸಿದ ಬಗೆ, ಮರಿಯಂನ ತಲೆಯಲ್ಲಿ ಬಂದು ಹೋಗುವ ವಿಚಾರಗಳ ನಿರೂಪಣೆ,ಎಲ್ಲವನ್ನ ಓದಿ ಮುಗಿಸುವ ಹೊತ್ತಿಗೆ, ನಿಮ್ಮಿದುರಲ್ಲಿ ,ಕಾಬೂಲ್, ಮರಿಯಂ,ಮತ್ತು ಎಲ್ಲ ಸಂಘರ್ಷಗಳಿಂದ ಎರಡು ದಿನಕ್ಕಾಗುವ 'hangover' ತಯಾರಾಗಿ ಬಿಡುತ್ತದೆ.



*****ಎರಡು*****


ಹಲವು ಒಳ್ಳೆಯ ಚಲನ ಚಿತ್ರಗಳನ್ನ ನೋಡುತ್ತೇನೆ , ಒಂದು ಸಾರೆಯಲ್ಲ ಹಲವು ಸಾರೆ.... ಮೊದಲ ಬಾರಿ ನೋಡುವಾಗ ಕಣ್ಣು ಬಿಟ್ಟುಕೊಂಡು,ಬಾಯೀ ಮುಚ್ಚಿಕೊಂಡು ನೋಡಿದರೆ ಮುಂದಿನ ಬಾರಿಯೆಲ್ಲ ಇವ ಈ ಕತೆಯನ್ನ ಒಂದು ಚೂರು ಹಿಂಗೆ ಮಾಡಿದ್ರೆ ಛೋಲೋ ಇತ್ತಲ್ಲ, ಈ ನಾಯಕನ ಚಿತ್ರಣ ಹೀಗಿದ್ದರೆ ಚೆನ್ನ, ನಾಯಕಿಗೆ ಅವಕಾಶ ಕಡಿಮೆ ಆದಹಾಗೆ ಅನಿಸುತ್ತಿದೆ, ಕತೆಯಲ್ಲಿ ಗಟ್ಟಿತನವಿಲ್ಲ,ಈ ಕತೆ ಮುಗಿಯದ ಹ್ಯಾಂಗೋವರ್ ಉಳಿಸಿದೆ ಅಲ್ಲ, ಎಂದೆಲ್ಲ ಯೋಚಿಸುತ್ತಾ, ಚಲನ ಚಿತ್ರದ ಕೊನೆಯ ಭಾಗಕ್ಕೆ ಕಾಯತೊಡಗುತ್ತೇನೆ : ಹಲವು ಚಲನ ಚಿತ್ರಗಳ 'ಮುಕ್ತಾಯ' ಬಹಳ ಸೂಕ್ಷ್ಮವಾಗಿರುತ್ತವೆ (ನಾನು ಹೇಳುತ್ತಿರುವದೆಲ್ಲ ಕಲಾತ್ಮಕ ಚಿತ್ರಗಳ ಬಗ್ಗೆ ನೆನಪಿರಲಿ.) ಅಷ್ಟೇ ಅಲ್ಲದೇ ಮನತಟ್ಟುವಂತಿರುವ, ಚಿತ್ರಗಳೆ ಮಾತಾಡುವ 'ಅಂತಿಮ' ಭಾಗವೇ ಕೆಲವು ಸಾರೇ ಚಲನ ಚಿತ್ರದ ಯಶಸ್ಸಿಗೆ ಕಾರಣ ವಾಗುತ್ತದೆ.ಇಲ್ಲಿ ಯಶಸ್ಸು ಎನ್ನುವದು ಪ್ರೇಕ್ಷಕರ ಮೆಚ್ಚುಗೆ ಮಾತ್ರ ಸೀಮಿತ.'ಮಡಗಾಸ್ಕರ್ ೩' ಬೆಂಗಳೂರಲ್ಲಿ ತಯಾರಾಗುತ್ತಿದೆ ಎಂಬುದನ್ನು ಕೇಳಿ ಬೆಂಗಳೂರಿಗೆ 'ಹಾಲಿವುಡ್ ವ್ಯಾಲ್ಯೂ' ವಾಹ್ ಎಂದು ಕುಶಿ ಪಡುತ್ತೇನೆ.'Cow' ಚಲನಚಿತ್ರ ದಂತಹ ಚಿತ್ರಗಳನ್ನು ನೋಡುವಾಗ ಅದೇ ಗುಂಗಿನಲ್ಲಿ ಎರಡು ದಿನಾ ಹಾಗೆ ಕಳೆದು ಹೋಗುತ್ತದೆ.


***** ಮೂರು*****

ಅದರೊಟ್ಟಿಗೆ,

ಬಂಗಾಲದಲ್ಲಿ ಸೂರ್ಯೋದಯವಾಗಿದೆ, ಚಟ-ಪಟ ಮಾತಾಡುವ ಸರಳ ಜೀವಿ 'ದೀದಿ' ಮಮತ ಅಧಿಕಾರಕ್ಕೆ ಬಂದಿದ್ದಾರೆ. ಪಕ್ಕದ ತಮಿಳುನಾಡಲ್ಲಿ 'ಅಮ್ಮ' ವಿಜಯ ಭೇರಿ ಬಾರಿಸಿದ್ದಾರೆ,ಮಹಿಳಾ ಮಣಿಗಳ ಯಾತ್ರೆ ಹೀಗೆ ಮುಂದುವರಿಯಲಿ. ವಾರ್ತಾ ವಾಹಿನಿಗಳು ಇನ್ನು ಸಾಕೆಂದು ಒಸಾಮ ಮತ್ತು ಓಬಾಮರ ಸುದ್ದಿಗಳನ್ನು, ತಕ್ಕಮಟ್ಟಿಗೆ ನಿಲ್ಲಿಸಿದ್ದಾರೆ. ವಾರಗಟ್ಟಲೆ ಅದೇ ಅದೇ ಸುದ್ದಿಯನ್ನ, ವಿಕಾರಗೊಂಡ ಭಯಾನಕ ಛಾಯಾಚಿತ್ರಗಳನ್ನ ನೋಡಿ ನೋಡಿ ಬೇಸತ್ತಿದ್ದ ಮನಕ್ಕೆ 'ಕೆನ್ಸ್ ಚಲನ ಚಿತ್ರೋತ್ಸವ' ಸ್ವಲ್ಪ ತಂಪು ತಂದಿದೆ:). ಐ ಪಿ ಲ್ ಮತ್ತು ಬೇಸಿಗೆಯ ರಜ ಮುಗಿಯುತ್ತಿದೆ.




ಭಾನುವಾರ

ಬಲ್ಲೀರೇನಯ್ಯಾ ಸಂಬಂಧಗಳ ಮೂಲವ?

ಅಕ್ಕಾ,ಒಂದು ಮೊಳ ಮಲ್ಲಿಗೆ ಕೊಡಲಾ? ಅಂದಳು ಅವಳು,ಹೂ ಮಾರುವವಳು.'ಅಕ್ಕಾ' ಎಂದು ಕರೆಯುವದರ
 ಮೂಲಕ, ಆಕೆಯ ಅರಿವಿಗೆ ಬರದ, ನನ್ನ ಪರಿಧಿಗೂ  ಬರದ ಸಂಬಂಧದ ಎಳೆಯೊಂದನ್ನು  ಕಟ್ಟಿಬಿಟ್ಟಿದ್ದಳು.ನಾನು ಮೊಳ ಮಲ್ಲಿಗೆ ಕೊಂಡೆನೋ, ಬಿಟ್ಟೆನೋ ಅದು ಈ  ಲೇಖನದ ವ್ಯಾಪ್ತಿಗೆ ಹೊರತಾಗಿದ್ದು.


ಸಂಬಂಧಗಳೆ ಹಾಗೆ! ಕ್ಷಣದಲ್ಲಿ ಹುಟ್ಟಿಬಿಡುತ್ತವೆ,ಪೋಷಿಸಿದಲ್ಲಿ ಬೆಳೆಯುತ್ತವೆ,ತೀರಾ ಸೂಕ್ಷ್ಮವಾಗಿ ಗುರ್ತಿಸುತ್ತಾ, ಅವರವರ ಮನೋಗುನಕ್ಕನುಗುಣವಾಗಿ ಸ್ಪಂದಿಸುತ್ತಾ ಇದ್ದರೆ ಅಂತಹ ಸಂಬಂಧಗಳು ಬತ್ತದ ಅನುಭಾವದ ಪಯೋನಿಧಿಯೇ ಸರಿ.ನಡುವೆ ತೇಪೆ ಹಾಕುವದು,ಕತ್ತರಿಸುವದು,ಇತ್ಯಾದಿ ಎಲ್ಲ ತರಹದ ನಿಯಂತ್ರಣಗಳು ನಮ್ಮ ಕೈಯಲ್ಲಿರ ಬೇಕಾದುದು ಅಗತ್ಯ,ಅದು ಬೇರೆ ವಿಷಯ.

ಪಕ್ಕದ ಮನೆಯ ಪುಟ್ಟ ಕೂಸು'ರಕ್ಷಾ'  ನಮ್ಮ ಮನೆಗೆ ದೋಸೆ ತಿನ್ನಲು ಪ್ರತಿದಿನ ಬರುತ್ತಿದ್ದಳು,ಬೆಳಿಗ್ಗೆ ದೇವರಪೂಜೆಯ ಗಂಟೆಯ ಶಬ್ಧ ಆಕೆಗೆ ಕೇಳಿದ ಕೂಡಲೇ  ಆಕೆಯ ಅಮ್ಮನ ಸೀರೆ ಎಳೆದು ನಮ್ಮ ಮನೆಯ ದಿಕ್ಕಿನತ್ತ ಕೈ ತೋರಿಸುತ್ತಿದ್ದಳಂತೆ,ಅವಳ ಅಮ್ಮ ನಮ್ಮ ಮನೆಗೆ ಕಳಿಸಿಬಿಟ್ಟರೆ ಆಯಿತು,ಅಂಬೆಗಾಲಿಕ್ಕುತ್ತಾ, ದೋಚೆ ಮಮ್ ಮಮ್ ಎಂದು ಪುಟ್ಟ ಬಾಯಿಯಲ್ಲಿ  ಆಕೆ ನಗುತ್ತಿದ್ದರೆ ನನ್ನ ಅಮ್ಮನಿಗೂ ದೋಸೆ ಮಾಡಲು ಉತ್ಸಾಹ.ಬೆಲ್ಲ ತುಪ್ಪದಲ್ಲಿ ಅದ್ದಿದ ದೋಸೆ ಯನ್ನು ತಿಂದು, ನಮ್ಮೊಟ್ಟಿಗೆ ಸ್ವಲ್ಪ ಆಟವಾಡಿ,ಸವಾರಿ ಮನೆಯತ್ತ  ತಿರುಗಿಬಿಡುತ್ತಿತ್ತು..ಆಕೆ ಬರದೇ ಇದ್ದರೆ ನಮಗೆಲ್ಲ ಒಂದು ತರಹದ  ಕಸಿವಿಸಿ,ಅಮ್ಮನಂತೂ,ಕೂಸು ಬೈಂದೆ ಇಲ್ಯಪ,ನೀನಾದ್ರೂ ಹೋಗಿ ದೋಸೆ ಕೊಟ್ಟಿಕ್ಕೆ ಬಾ' ಎಂದು ನನ್ನನ್ನು ಆಕೆಯ ಮನೆಗೆ ಕಳಿಸುತ್ತಿದ್ದರು.ಈ ಪುಟ್ಟ ಕೂಸು ನಮಗಾವ ಬಂಧುವು ಅಲ್ಲ.ಆಕೆಯ ಬೊಚ್ಚುಬಾಯ ನಗೆ,ತುಂಟಾಟಗಳಿಂದ ನಮ್ಮ ಜೊತೆಗೊಂದು ಬಂಧ ಗಟ್ಟಿಗೊಳಿಸಿದ್ದಳು.
ಹಾಮ್..ಹೀಗೆ ಹುಟ್ಟಿಬಿಡುತ್ತದೆ ಸಂಬಂಧದ ಎಳೆಯೊಂದು!
ಮಾನವ ಸಮಾಜಮುಖಿ,ಬಂಧ,ಬಂಧನ ಮನುಷ್ಯನ ಮೂಲಭೂತ ತುಡಿತ;
ದಿನವೂ ಅದೇ ಬಸ್ಸಿನಲ್ಲಿ ಆಕೆ ಸಿಕ್ಕಾಗ,ನಮ್ಮ್ ಕಣ್ಣುಗಳು ಆಕೆಯನ್ನ ಗುರುತಿಸಿಬಿಡುತ್ತವೆ,ಒಂದು ಚಿಕ್ಕ ನಗೆ ನಗದೇ ಮುಂದೆ ಹೋಗಲು ಬಿಡಡು ಈ ಮನ,ಹಾನ್,ಸಂಶೋಧನೆಯೊಂದರ ಪ್ರಕಾರ ಅಪರಿಚಿತ ಪರಿಚಿತ ನಗೆ ನಗಲು ಅಂದರೆ,ಅದೇ ಬಸ್ಸಿನಲ್ಲಿ ದಿನವೂ ಸಿಗುವ ಆಕೆಯತ್ತ ಪರಿಚಯದ ನಗೆ ಬೀರಲು ೪-೫ ದಿನಗಳು ಸಾಕಂತೆ.(ಮಾತಾಡಲು, ಸುದ್ದಿ ಹೇಳಲು ಎಷ್ಟು ದಿನಗಳು
ಬೇಕು ಅದೆಲ್ಲ ನನಗೆ ಗೊತ್ತಿಲ್ಲಾಪ್ಪ..)


ಇನ್ನೊಂದು ವರ್ಗವಿದೆ, ಅದು ಮಿಸ್ಡ್ ಕಾಲ್ ಸಂಬಂಧಗಳು.
ಆಕೆಯನ್ನ ದಿನವೂ ಗಮನಿಸುತ್ತಿದ್ದೆ,ಫೋನಿನಲ್ಲಿ ತಾಸುಗಟ್ಟಲೇ ಹರಟುತ್ತಿದ್ದಳು ,Bio Data ಗಳ ವಿನಿಮಯ ನಡೆಯುತ್ತಿತ್ತು, ಒಂದು ಸಾರೇ ಆಗಿದ್ದರೆ ಓಕೇ , ಆಕೆಗೆ ಹತ್ತೋ ಹನ್ನೊಂದು ಮಿಸ್ಡ್ ಕಾಲ್ ಸ್ನೇಹಿತರುಗಳಿದ್ದರು. ಇಂತಹವರನ್ನೆಲ್ಲ ಹೇಗೆ ನಂಬಿಕೊಳ್ತಾರೋ ಜನರು,ಸುಮ್ಮನೇ ಟೈಮ್ ಪಾಸ್ ಮಾಡುವ ಮಾರ್ಗವಿರಬೇಕು ಅಂದು ಕೊಂಡಿದ್ದೆ.ಆಕೆಯ ಮನೆಯ ವಾತಾವರಣ ಸರಿ ಇಲ್ಲದಿದ್ದು ದು ಇನ್ನೊಂದು ಕಾರಣ ಅನ್ನಿಸಿತ್ತು ನನಗೆ.ಇನ್ನೊಮ್ಮೆ ಬರೆಯೋಣ ಇದರ ಬಗ್ಗೆ.

ನನ್ನ ಹಲವು ಸ್ನೇಹಿತರಿದ್ದಾರೆ, ನಮ್ಮ ಮನೆಗಳ ಸುದ್ದಿ ಹಂಚಿಕೊಳ್ಳುತ್ತೇವೆ, ಸಮಸ್ಯೆಗಳು ಬಂದಾಗ ಸಲಹೆ ಪಡೆಯುತ್ತೇವೆ, ನೋಡೇ ಇವತ್ತು  ಒಂದು ಕೂಸನ್ನು ನೋಡಲೇ ಹೋಗಿದ್ದೆ, ಎಂದು  ಸ್ನೇಹಿತನೊಬ್ಬ ಆಕೆಯ ಫೋಟೋ ವನ್ನು ಮೈಲ್ ಮಾಡುತ್ತಾನೆ,ಮದುವೆಗೆ ಎರಡು ದಿನ ಮುಂಚೇನೆ ಬರೋ ಎಂದು ಆಕೆ ಒತ್ತಾಯಿಸುತ್ತಾಳೆ, ಇವರಾರು ರಕ್ತ ಸಂಬಂಧಿಗಳಲ್ಲ, ಆದರೂ ಬಂಧುಗಳು  ಅದೇ ಗಾದೆಯಿದೆಯಲ್ಲ, 'ಸಮಯಕ್ಕಾದವರೇ ಬಂಧುಗಳು' ಅನ್ನಿಸಿಬಿಡುತ್ತದೆ.

ಒಂದುತರ ರಾಬಿನ್‌ಸನ್ ಮತ್ತು ಕ್ರಸೋ ಕತೆಯನ್ನ ಹೋಲುತ್ತದೆ ನಮ್ಮ ಈ ಬದುಕು. ಪರಿಚಯವಿಲ್ಲ, ನಾನು ಕರ್ನಾಟಕದವಳು, ನಾನು ಬಿಹಾರಿ, ನಾನು ಭಾರತೀಯ,ನೀನು ಪರಂಗಿಯವ  ಅನ್ನುವ ಮಾತೇ ಇಲ್ಲ, ಯಾಕೆ ಗೊತ್ತಾ ಮಾತನಾಡಲು ಮಾತೇ ತಿಳಿದಿಲ್ಲ. ಹೀಗಿದ್ದಾಗಲು, ಹೇಳಬೇಕೆನಿಸಿದ್ದನ್ನ ಹೇಳುತ್ತ, ಕೇಳಿಸಿಕೊಳ್ಳುತ್ತ, ನಮ್ಮದೇ ಲೋಕ ಕಟ್ಟುತ್ತಾ, ಪರಿಚಯದ ಬಂಧಗಳಿಸುತ್ತಾ ಜೀವನದಲ್ಲಿ ಮುನ್ನಡೆಯುತ್ತೇವಲ್ಲ ಇಂತಹ ಸಂಬಂಧಗಳಿಗೆ  ಎಣೆಯುಂಟೆ?ಬೆಲೆಕಟ್ಟಲಾದೀತೇ?
ಇಂತಹ ಸಂಬಂಧಗಳ ಮೂಲ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ,ಅಲ್ಲವ?

ಶುಕ್ರವಾರ

ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ !

ನೀಲಿ ಬಣ್ಣದ ವಸ್ತ್ರದ ಅಲಂಕಾರ,ಅದರೊಳಗೆ  ಚಿನ್ನದ ಬಣ್ಣದ ಇನ್ನೊಂದು ಅಂಗಿ, ಸಾಥ್ ಕೊಡಲಿಕ್ಕೆಂದೇ ಬಿಳಿಯ ಬಣ್ಣ,  ಚಿಕ್ಕದು ,ದೊಡ್ಡದು,ಇನ್ನೂ ದೊಡ್ಡದು ,ಹೀಗೆ ತಹೇವಾರಿ ಗಾತ್ರಗಳಲ್ಲಿ.. ನೀಲಿ ಬಣ್ಣದ್ದು,ಬಂಗಾರದ ಬಣ್ಣದ್ದು
ಒಮ್ಮೆ ನೋಡಿದರೆ ಮತ್ತೆ ತಿರುಗದೆಯೆ ಹಾಗೆ ಹೋಗಲಿಕ್ಕಾಗುವದಿಲ್ಲ,ಅಂತಹ ಸೆಳೆತ ಆ ನೀಲಿ ಮಾಟಗಾತಿಯದು. ಸುಂದರಿ ಅನ್ನಲಿಕ್ಕಾಗದಿದ್ದರು ಸೆಳೆವ ಸ್ನಿಗ್ಧತೆ ಆ ನೀಲಿ ಮಾಟಗಾತಿಯಲ್ಲಿ ,ಅದೇಕೋ ಏನೋ ,ನೋಡುವವರು ಕುರುಬಿಯಾರೆಂದೋ ಏನೋ ಈ ಮಾಟಗಾತಿ ಯ ಬಣ್ಣ ಕಪ್ಪು- ಅಮ್ಮ ಹೇಳೋ ಹಾಗೆ, ಅದೇ ಕಾಫೀ  ಕಲರ್ರು. 'ಕಬ್ಬು ಡೊಂಕಾದರೆ ಸಿಹಿ ಡೊಂಕೆ' ಅನ್ನುವ ಗಾದೆ ಇದೆಯಲ್ಲಾ,ಅದೇ ತರ ಓಡಳೊಳಗೆ ಮುಗಿಯಲಾರದಷ್ಟು ಸಿಹಿ ಹಾಂ..ಡಬ್ಬಿ ತುಂಬಿಸಿಡುವಷ್ಟು .
ಪುಟ್ಟಿ ನೀನು ಊಟ  ಬೇಗ ಮಾಡ್ಬಿಟ್ರೆ, ಹೋಮ್‌ವರ್ಕ್ ಎಲ್ಲ ಬೇಗ ಮುಗ್ಸಿ ಬಿಟ್ರೆ, ಹಟ ಮಾಡದೇ ಇದ್ರೆ ...ಎನ್ನುವ ಎಲ್ಲ  'ಟ್ರೇ,ದ್ರೆ' ಗಳಿಗೆ ಪರಿಹಾರ ಆ ಮಾಟಗಿತ್ತಿಯೇ ...ನಂಗೂ ಅಮ್ಮಂಗೂ ಎಂದಿಗೂ ಗೊತ್ತಿದ್ದುದು.
ಇನ್ನೊಂದು ಮತ್ತೊಂದು ,ಈ ಕೈಗೊಂದು ಇನ್ನೊಂದು ಕೈಗೆ ಇನ್ನೊಂದು ...ಮುಗಿಯದ ಕತೆ ಎಂದು ಅಮ್ಮ ಅರಿತಾಗ, ನಾಳೆಗೆ ಮತ್ತೊಂದು ಎಂದು ಸಮಾಧಾನ ಮಾಡಿದ್ದು ಅಮ್ಮನ ಜಾಣ್ಮೆ.
ಅದು -------->Cadbury Dairy Milk

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...