ಶನಿವಾರ

ಭೂಮಿ,Annie ಮತ್ತು ಕ್ರಿಸ್ಮಸ್

ಭೂಮಿ
ಒಟ್ಟು ಹದಿಮೂರು ತಾಸಿನ ಪ್ರಯಾಣ.ಈ ಸಾರೆಯೂ ಕಿಡಕಿಯ ಪಕ್ಕವೆ.ಕಿಡಕಿಯ ಪಕ್ಕ ಕೂತು ಮೇಲಿಂದ ಕೆಳಗೆ ನೋಡುವದೆಂದರೆ ಅಂದಿನಿಂದಲೂ ಮೆಚ್ಚು.ಅಜ್ಜಿ ಹೇಳುತ್ತಿದ್ದ ಕೈಲಾಸ ಲೋಕದ ದರ್ಶನವಾಗುತ್ತಿತ್ತಲ್ಲ.ನನ್ನ ಮುಂದಿನ ಸೀಟಿನಲ್ಲಿ ,ಮಕ್ಕಳಿಬ್ಬರು ಪ್ರಯಾಣದುದ್ದಕ್ಕು ಬೋರಾಗದಂತೆ ನೋಡಿಕೊಂಡರು ಅಂದರೆ ತಪ್ಪಿಲ್ಲ.ಸೀಟ್ ಬೆಲ್ಟ್ ಕಟ್ಟಿಕೊಳ್ಳುವಂತೆ ಗಗನಸಖಿ,ಸುಂದರವಾಗಿ ಉಲಿಯುತ್ತಿದ್ದಳು.ಕ್ಯಾಪ್ಟನ್ ಸೌರಭ್ ಕುಮಾರ್ ಮತ್ತು ಅವರ ಸಿಬ್ಬಂದಿ  ವಿಮಾನ ಇಳಿಸುವತ್ತ ಕಾರ್ಯೋನ್ಮುಖ ರಾಗಿದ್ದರು.
ದೇವನಹಳ್ಳಿ ವಿಮಾನ  ನಿಲ್ದಾಣದಲ್ಲಿ ಬಂದಿಳಿದಿದ್ದೆ.ಬೆಂಗಳೂರಿಗೆ ಬಂದಿದ್ದು ಇದೇ ಮೊದಲಲ್ಲವಾದರು, ನನಗೆ ಬೆಂಗಳೂರು ಇನ್ನೂ ಒಗ್ಗಿಲ್ಲವಾಗಿತ್ತು. ಒಂದು ವಾರದ ಮಟ್ಟಿಗೆ ಅಲ್ಲವಾ, ಅಂದುಕೊಳ್ಳುತ್ತ ೨ ಸಲ್ವಾರು,೨ ಜೀನ್ಸ್,ಒಂದು ಸೀರೆಯನ್ನಷ್ಟೇ ತುಂಬಿಸಿಕೊಂಡಿದ್ದೆ.ಗಂಟೆ ೫  ಆಗಿದೆ,ಮೊದಲು ಬಂದಿದ್ದು ೫ ವರ್ಷಗಳ ಹಿಂದೆ.ಮಳೆ,ಮುಸ್ಸಂಜೆ,ಟ್ರಾಫಿಕ್ಕು,ನಗರಕ್ಕೆ  ಬರುತ್ತಿರುವ ಮೆಟ್ರೊ, ಎಲ್ಲ ಬೆಂಗಳೂರನ್ನ ಹೈರಾಣ ಮಾಡಿಬಿಡುತ್ತದಂತೆ, ಹಾಗಂತ  ಅವ ಹೇಳಿದ್ದ.ಥತ್ ಜೆಟ್ ಲಾಗ್ ,ಕಣ್ಣುಗಳು ತಾವೇ ಮುಚ್ಚುತ್ತಿದ್ದವು.ನನ್ನ ಪುಟ್ಟ ಬ್ಯಾಗನ್ನ ಎಳೆದುಕೊಂಡು,ಹೊರಗಿನ ಕುರ್ಚಿಯಲ್ಲಿ ಕುಳಿತೆ.ಅವ ಇನ್ನೂ ಬಂದಿಲ್ಲವಾಗಿತ್ತು.ಹೊಟ್ಟೆ ಛುರುಗುಟ್ಟುತ್ತಿತ್ತು.ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯಲ್ಲಿ ವೆಜ್ ರೋಲ್ ಖರಿದಿಸಿ ತಿನ್ನತೊಡಗಿದೆ.ಬೆಂಗಳೊರಲ್ಲಿ ಮಳೆ ಅಂದಿದ್ದ ಅವ.ಹೊರಗೆ ಕುಳಿತವಳಿಗೆ ಚಳಿಯಾಗತೊಡಗಿತ್ತು.ಸುಡುಗಾಡು ಮಳೆ ಅನ್ನುತ್ತಲೇ ಒಂದೇ  ಸಮನೆ ಸುರಿಯುತ್ತಿದ್ದ ಮಳೆಯನ್ನ ಎಂಜೊಯ್ ಮಾಡುತ್ತಿದ್ದೆ.
ಅವನ ಬಗ್ಗೆ ಹೇಳೋಕೆ ಏನಿದೆ? ಉಹ್ ಹಾಗಲ್ಲ,ಹೇಳೋಕೆ ಏನೆಲ್ಲ ಇದೆ..ಮಾತಾಡುವ ಮನಸ್ಸು ಬಂದರೆ ಮಾತಾಡುತ್ತಾನೆ,ಹೊತ್ತಿಗೆ ಲೆಕ್ಕವಿಲ್ಲ.ನಾನು ಇದ್ದಿದ್ದು  ಹೌಸ್ಟ್ನನ್ ನಲ್ಲಿ ,ಇವ ಬೆಂಗಳೂರಲ್ಲಿ.

ಓದಿದ್ದು  ಒಂದೇ ಶಾಲೆಯಲ್ಲಿ, ಅನ್ನುವದರೊಟ್ಟಿಗೆ ಶಾಂತತ್ತೆಯ ಮಗ ಅನ್ನುವ ಪರಿಚಯ.
ಹೆಸರು ಹೇಳಬೇಕಾ? ಗೋಪಾಲ,ನನ್ನ ಮಟ್ಟಿಗೆ ಗೋಪಣ್ಣ..ಅಗಷ್ಟ ಹದಿನೈದು ,ಜನವರಿ ಇಪ್ಪತ್ತಾರು ,ಗಾಂಧೀ ಜಯಂತಿ ಇದಕ್ಕೆಲ್ಲ ಭಾಷಣ ಬರೆದು ಕೊಡಲು ಗೋಪಣ್ಣ ಇದ್ದ.ಗೋಪಣ್ಣ ಬರೆಯುತ್ತಿದ್ದ ಸಾಲುಗಳು ಹೊಸದೆನಿಸುತ್ತಿದ್ದವು.ಇನ್ನು ನೆನಪಿದೆ,ಹಿಂದೆ ಗುರುವಿಲ್ಲ,ಮುಂದೆ ಗುರಿಯಿಲ್ಲ ಸಾಗುತ್ತಿದೆ ಪುಂಡರ ದಂಡು'ಎಂಬ ಸಾಲುಗಳು ನನಗೆ ಮೊದಲ ಬಹುಮಾನ ತಂದು ಕೊಟ್ಟಿದ್ದವು.

ಇಂತಿರ್ಪ ಗೋಪಣ್ಣ ಎಸ್ ಎಸ್ ಎಲ್ ಸೀ ಪಾಸಾಗಿದ್ದು ಊರಲ್ಲೆಲ್ಲ ಸುದ್ದಿಯಾಗಿತ್ತು.ಆವಾಗೆಲ್ಲ ಅದೆ ದೊಡ್ಡ ಸುದ್ದಿ.ಶಾಂತತ್ತೆ ಮನತುಂಬಿ ನಗೆಯಾಡಿದ್ದು ಆವತ್ತೆ ಅಂತ ಅಮ್ಮ ಹೇಳಿದ್ದ ನೆನಪು.
ನನ್ನ ಅಪ್ಪನದ್ದು ಊರಿಂದ ಊರಿಗೆ ಎತ್ತಂಗಡಿ ಆಗುವ ಸರಕಾರಿ ಕೆಲಸ.ಮುಂದೆ ಗೋಪಣ್ಣ ನೋಡಿದ್ದೂ ನನಗೆ ನೆನಪಿಲ್ಲ. ಒಮ್ಮೆ ಗೋಪಣ್ಣ ಇಂಗ್ಲಿಷ್ ನಲ್ಲಿ ಎಮ್ ಎ ಓದುತ್ತಿದ್ದ ವಿಷಯ ಅಮ್ಮ ಹೇಳಿದ್ದಳು.ಮುಂದಿನ ಕತೆ  ಗೊತ್ತಿರಲಿಲ್ಲ.
ನಾನು ಪಿಎಚ್ ಡಿ ಮಾಡುತ್ತಿದ್ದೆ  ಹೌಸ್ಟ್ನನ್ ಯುನಿವರ್ಸಿಟಿಯಲ್ಲಿ.ಒಂದು ದಿನ ಅಚಾನಕ್ ಆಗಿ ಫೇಸ್ ಬುಕ್ ನಲ್ಲಿ ಗೋಪಣ್ಣ ಕಂಡಂತಾದ. ಕಂಡಂತಾದ ಏನು, ಸಿಕ್ಕೇ ಬಿಟ್ಟ
ಹೀಗೆ ಗೋಪಣ್ಣ ಮತ್ತೆ ಸಿಕ್ಕಿದ. ನಾಲ್ಕೈದು ವರ್ಷಗಳ ಹಿಂದೆ.

ಆತ
ಅಣ್ಣಾ, ನವಿಲು ಮರಿ ಹುಟ್ಟುತ್ತಾ? ಎಂದು ಮುದ್ದಾಗಿ ಕೇಳಿದ್ದಳು,ಆಕೆಯ ಪುಟ್ಟ ಮುಖಕ್ಕೆ ಆ ಕಣ್ಣುಗಳು ಎದ್ದು ಕಾಣುತಿದ್ದವು.ಕೈಯಲ್ಲಿನ ಆ ನವಿಲುಗರಿಯನ್ನ ನೋಡುತ್ತ ಇಲ್ಲ ಪುಟ್ಟಾ ಅಂದಿದ್ದೆ. ಕೆಲವರ ಮುಖ ನೋಡಿದಾಗಲೇ ಅವರ ಬಗ್ಗೆ ಗೌರವ/ಪ್ರೀತಿ/ಕಾಳಜಿ ಬಂದುಬಿಡುತ್ತದೆ.ಅದರಲ್ಲೂ ನನಗೆ ಸ್ವಂತ ತಂಗಿ ಇರಲಿಲ್ಲ. ಈ ಪುಟ್ಟ ಕೂಸು ನಮ್ಮ ಮನೆಯವಳೇ ಆಗಿದ್ದಳು. ಆಗಾಗ ಗೋಪಣ್ಣಾ ಎಂದು ಕರೆಯುತ್ತ ತನ್ನ ೨೭ ಮತ್ತೊಂದು ಹಲ್ಲು ತೋರಿಸುತ್ತ ನಮ್ಮ ಮನೆಯತ್ತ ಸವಾರಿ ಆಗಮಿಸುತ್ತಿತ್ತು. ಆಕೆಯ ಅಪ್ಪನಿಗೆ ಮತ್ತೊಂದು ಊರಿಗೆ ವರ್ಗವಾಗಿ ಹೊರಟು ನಿಂತಾಗ,ನಂಗಂತು ಅಳುವೇ ಬಂದಿತ್ತು,ಗಂಡು ಹುಡುಗ ಅಲ್ಲವ ಅತ್ತರೆ ಮರ್ಯಾದೆ ಅಂದುಕೊಂಡು ಸುಮ್ಮನಿದ್ದೆ.
ಆಕೆಯನ್ನ ಮತ್ತೆ ನೋಡಿದ್ದು ಫೇಸ್ ಬುಕ್ ನಲ್ಲಿಯೆ.
ಹ್ಮ್,ಅವುಳು ಹಾಗೆ ಸದಾ ಹರಿವ ನದಿಯಂತೆ ಹರಿಯುತ್ತಲೇ ಇರಬೇಕೆನ್ನುವವಳು.ಒಂದು ಖಾದಿಯ ಕುರ್ತ/ ಟೀ ಶರ್ಟ್, ಮಾಸಿದ ಜೀನ್ಸ್ ಹಾಕಿ ನಿಂತರೆ ಮುಗಿಯಿತು ಅವಳ ಅಲಂಕಾರ.ತುಂಡು ಕೂದಲಿಗೊಂದು ಕಪ್ಪನೆಯ ರಬ್ಬರ್ ಬ್ಯಾಂಡು.ಚರ್ ಪರ್ ಎಂದು ಫ್ಲೋಟಸ್ ಹಾಕಿಕೊಂಡರೆ,ಕಾಲಿನ ಬಗೆಗಿನ ಕಾಳಜಿ ಮುಗಿಯಿತು.ಸದಾ ಏನನ್ನಾದರು ಹಲುಬುವವಳಿಗೆ  ತಿನ್ನಲಿಕ್ಕೆ ಅದೇ ಆಗಬೇಕೆನ್ನುವದೇನೂ ಇಲ್ಲ , ಏನಾದರೂ ನಡಿದೀತು. ಕಳೆದ ಎರಡ್ಮೂರು ವರ್ಷಗಳಿಂದ ಇವಳ ಬಗ್ಗೆ ಅರಿತಿದ್ದು ಇಷ್ಟೇ.
ಆಕೆ ಇರೋದೆ ಹಾಗೆ. ಆ ಊರಿನ ತಳಕು ಈಕೆಯನ್ನ ತಟ್ಟಲ್ಲ,ಹತ್ತಿರಕ್ಕು ಸೇರಿಸಲ್ಲ. ಆ ಊರನ್ನ ಆಕೆ ಒಗ್ಗಿಸಿಕೊಂಡಿಲ್ಲ ಅನ್ನಿಸಿತ್ತು ಮೊನ್ನೆ.
ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಈ ಸಮಯದಲ್ಲಿ ಗೋಪಣ್ಣಾ ‘Don’t worry’ ಅಂದಿದ್ದು ಈಕೆಯೇ.

ಭೂಮಿ
ಇದುರಿನಲ್ಲಿ ಗೋಪಣ್ಣನ್ನ ಕಂಡು ನನ್ನ ಯೋಚನೆಗಳಿಗೆಲ್ಲ ತಡೆ ಬಿತ್ತು. ಗೋಪಣ್ಣ ಮನೆಗೆ ಕರೆದೊಯ್ದ. ಶಾಂತತ್ತೆಯ ಮುಖದಲ್ಲಿ ಕುಶಿ ಇತ್ತು. ತುಂಬಿದ ಮನಸಿನಿಂದ ಸ್ವಾಗತಿಸಿದ್ದರು.
ಯಾಕೋ ಗೊತ್ತಿಲ್ಲ,ಮರಳಿದ ಮುಸ್ಸಂಜೆ ನಿರಾಸೆಯನ್ನ ಕಟ್ಟಿಕೊಂದು ಬಂದಿಲ್ಲವೆಂಬುದಷ್ಟೇ ಖಾತರಿ.ತೀರಾ ಮಂದ ಬೆಳಕಿರುವ ನಮ್ಮೂರಿನ ರಸ್ತೆಯ ದೀಪ,ಮಿಂಚಿ ಮರೆಯಾಗುವ ಆ ಮಿಂಚು ಹುಳುವಿನ ಮಿಂಚು, ಇದುರಿನ ಆಂಜನೇಯ ದೇವಾಲಯ,ರಸ್ತೆಗೆ ಅಂಟಿಕೊಂಡಿದ್ದ ಗಟಾರ,ಮನೆಯ ಗೋಡೆಗೆ ಆತುಕೊಂಡಿದ್ದ ಪೇರಲೆಯ ಗಿಡ ಮತ್ತು ಅಲ್ಲಿ ತನ್ನ ಪುಟ್ಟ ಗೂಡು ಕಟ್ಟಿರುವ ಆ ಜುಟ್ಟಪಿಕಳಾರ,ಪಕ್ಕದಲ್ಲೇ ಹಬ್ಬಿದ್ದ ನೆಹ್ರು ಗುಲಾಬಿಯ ಗಿಡ, ಮೈ ತುಂಬ ಮುಳ್ಳಿದ್ದರೂ ಬೇಸರಿಸದೆ ಗುಲಾಬಿಯ ಗಿಡಕ್ಕೆ ಹಬ್ಬಿದ್ದ ಶಂಖಪುಷ್ಪ ಹೂವಿನ ಬಳ್ಳಿ,ಅಲ್ಲೇ ಪಕ್ಕದಲ್ಲಿ ಶಾಂತತ್ತೆ ನೆಟ್ಟಿದ್ದ ಚಿಕ್ಕ ತುಳಸಿಯ ಗಿಡ, ಅದಕ್ಕೆ ಹಚ್ಛಿದ್ದ ಅರಿಶಿಣ,ಕುಂಕುಮ ಆ ಮಬ್ಬು ಬೆಳಕಲ್ಲೂ ಎದ್ದು ತೋರುತ್ತಿತ್ತು.
ಅಂತಹ ಮಬ್ಬುಬೆಳಕಲ್ಲಿ,ಮನೆಯಂಗಳದಲ್ಲಿ ಕುರ್ಚಿ ಹಾಕಿ ಕೂತು ತಲೆ ಎತ್ತಿ ಆಕಾಶ ನೋಡುವದೆಂದರೆ ಪರಮ ಸುಖ.ಅಂದು ನಾವು ಕೂತದ್ದು ಹಾಗೆಯೆ.


ಆತ
ಮಾತಿಗಿಂತ ಮೌನವೇ ಪ್ರಿಯವಾದಾಗ.
ಹಲವರನ್ನ ಗಮನಿಸಿದ್ದೀನಿ ಮಾತಾಡ್ತಲೇ ಇರ್ತಾರೆ ಸಾಕು ಅನ್ನುವವರೆಗೂ,ಸಾಕೆನ್ನಿಸುವವರೆಗೂ,ಸಾಕಪ್ಪಾ ಅನ್ನುವ ವರೆಗೂ.ಹೀಗೂ ಅಗುತ್ತೆ,ಕೆಲವೊಮ್ಮೆ ಕೆಲವರ ಮಾತು ಸಿಂಫನಿಯೇ ಹೌದು.(ಸಿಂಫನಿ = ಸಿಂಪು + ಹನಿ -ಸ್ವಾತಿ ಯ ಮಳೆಯ ಹನಿ ಸಿಂಪಿನಲ್ಲಿ ಮುತ್ತಗುತ್ತಲ್ಲಾ ಹಾಗೆ, ಸ್ವರಮೇಳ ಅಂತಲೂ ಹೇಳಬಹುದು.)ಮುತ್ತಿನಂತ ಮಾತು.ಕೆಲವರ ಮಾತಿಗಾಗಿ ತಾಸುಗಟ್ಟಲೆ ಕಾಯುತ್ತೇನೆ.ಮಾತಾಡುತ್ತಲೇ ಕಣ್ಣೀರಾಗಿಬಿಡುತ್ತೇನೆ.ಕೆಲವೊಮ್ಮೆ ಎದುರಿನವರನ್ನೂ ಅಳಿಸಿ ಕೊನೆಗೆ 'I am sorry' ಎಂದು ಹೇಳಿ ನನ್ನ ಪಾಡಿಗೆ ನಾನು ಸ್ವಲ್ಪ ಹೊತ್ತು ಹಾಗೆ ಇದ್ದುಬಿಡುತ್ತೇನೆ.
ಎಲ್ಲಾ ಮಾತಿಂದ, ಮಾತಿಗಾಗಿಯೇ.

ಅಪರೂಪಕ್ಕೆ ಸಿಕ್ಕಿದ ನಮಗೆ ಮಾತಾಡಲಿಕ್ಕೆ ಬಹಳ ವಿಷಯವಿತ್ತು,ಆದರೆ ಮಾತೇ ಹೊರಡುತ್ತಿರಲಿಲ್ಲ.
‘Annie’ ಪರಿಚಯಿಸಿದ್ದಕ್ಕೆ ಆಕೆಗೊಂದಿಷ್ಟು ಧನ್ಯವಾದ ಹೇಳಬೇಕಿತ್ತು.  Annie, ನನ್ನ ಹೆಂಡತಿ. ಮೂಲ ಇಂಗ್ಲೆಂಡಿನವಳು. ಕಳೆದ ವರ್ಷವಷ್ಟೇ ನಮ್ಮ ಮದುವೆ ಆಗಿತ್ತು.ಹಾಗಾಗಿ ಈಗ ನಮ್ಮದೊಂದು ಅಂತರ್ಜಾತೀಯ,ಅಂತರ್ದೇಶೀಯ,ಸಂಸಾರ. ಇದು ಸಾಕಾರಗೊಂಡಿದ್ದೆ ನಮ್ಮ ಈ ಪುಟ್ಟ ಕೂಸಿನ ಸಹಾಯದಿಂದ.ಈಗ ಆಕೆ ಪುಟ್ಟ ಕೂಸಲ್ಲ, Dr.ಭೂಮಿ.
ನಮ್ಮ ಮನೆಯಲ್ಲಿ ಕ್ರಿಸ್ಮಸ್ ನ ಸಂಭ್ರಮ.Annie ಯ ಸಂತಸ ಮುಗಿಲು ಮುಟ್ಟಿತ್ತು. ಭೂಮಿ ಆಕೆಯ ಆಪ್ತ ಗೆಳತಿ.
ಕೇಕ್ ತಯಾರಿಯಲ್ಲಿ ಸಾತ್ ನೀಡಲಿಕ್ಕೆ ಭೂಮಿಗೆ  ಅಡುಗೆ ಮನೆಯಿಂದ ಕರೆ ಬಂದಿತ್ತು.

Merry Christmasssss!! Annie ಎಂದು ಕೂಗುತ್ತಾ ಭೂಮಿ ಒಳಗೋಡಿದ್ದಳು


ಶುಕ್ರವಾರ

ಧಿಕ್ಕಾರವಿರಲಿ ಕ್ರೌರ್ಯಕ್ಕೆ


ಡಿಸೆಂಬರಿನ ಚಳಿ ಜೋರಾಗುತ್ತಿರುವಂತೆಯೇ,ಕ್ರಿಸ್ ಮಸ್ ನ ಸಂಭ್ರಮ, ಹೊಸವರುಷದ ಆಗಮನದ ದಿನಗಣನೆ ಶುರುವಾಗಿದೆ. ಯಾವತ್ತಿನಂತೆ,ನಿಟ್ಟುಸಿರು ಬಿಡುತ್ತಾ,'ಅಯ್ಯೊ ಅದೆಷ್ಟು ಬೇಗ ಈ ವರ್ಷ ಕಳೀತಪ್ಪ' ಅಂತ ಹೇಳಲು ಶುರುಮಾಡಿದ್ದಾಗಿದೆ.

ಹರಸಾಹಸ ಪಟ್ಟ ಒಸಾಮ ಮೇಲಣ ಧಾಳಿ, ಅಲ್ಲೊಂದು ಭೂಕಂಪ,ಇಲ್ಲೊಂದು ಪ್ರವಾಹ,
ಮುಂಬೈ ನ ಜನರ ಧೈರ್ಯ,ಬದುಕನ್ನ ಪ್ರೀತಿಸುವ ಕಲೆ,ಉಗ್ರರ ಕ್ರೌರ್ಯ,ಅಣ್ಣಾ ಹಜಾರೆ, ಅಮಿತಾಬ್ ಬಚ್ಚನ್ ರ ಮೊಮ್ಮಗಳು,ವಿದ್ಯಾ ಬಾಲನ್,ಸುದ್ದಿ ಮಾಡದೆ ಭೇಶ್ ಅನ್ನಿಸಿಕೊಂಡ ಕಿರಣ್ ಮತ್ತು ಅಮಿರ್ ಖಾನ್,ಖಾಲಿ ಡಬ್ಬಾ ಸೇರಿ ಹಿಟ್ಟಾದ ಶಾರುಕ್ ನ 'ರಾ ಒನ್', ಹೇಳದೇ,ಕೇಳದೆ ಸುದ್ದಿ ಮಾಡಿದ 'ಕೊಲಾವೇರಿ ಡಿ',
ಕೊಳೆತು ನಾರುತ್ತಿರುವ ಕರ್ನಾಟಕದ ರಾಜಕಾರಣ, ವಿಪರೀತಕಕ್ಕೇರುತ್ತಿರುವ ಮಾನಹಾನಿ,ಪ್ರಾಣಹಾನಿ ಪ್ರಕರಣಗಳು,

- ಇವೆಲ್ಲಾ ಈ ವರ್ಷದ ಕೆಲವು ಹೈ ಲೈಟ್ಸ್ ಅಷ್ಟೇ.

ಇವೆಲ್ಲವುಗಳ ಮಧ್ಯೆ, ಬೆಳಿಗ್ಗೆದ್ದು ಪೇಪರ್ ಓದಲಿಕ್ಕೆ ಮನಸ್ಸಾಗುವದಿಲ್ಲ.ಮಾನಹಾನಿ,ಪ್ರಾಣಹಾನಿ ಪ್ರಕರಣಗಳ ಸಂಖ್ಯೆ ಯಲ್ಲಾಗುತ್ತಿರುವ ಏರಿಕೆ ನನಗೆ ನಿಜಕ್ಕು ಅಸಹ್ಯ ಅನಿಸುತ್ತಿದೆ.ಮನುಷ್ಯ ಇನ್ನೊಬ್ಬ ಮನುಷ್ಯನನ್ನ ವಸ್ತುವಾಗಿ ಪರಿಗಣಿಸುತ್ತಿರುವದು ಖೇದಕಾರಿಯಾಗಿದೆ.

ಧಿಕ್ಕಾರವಿರಲಿ ಕ್ರೌರ್ಯಕ್ಕೆ.ಮಾನವನ ವಿಕೃತ ಮುಖಕ್ಕೆ ತೆರೆ ಬೀಳಲಿ.

ಗುರುವಾರ

ಖಾಲಿ



 A:ಯಾಕೋ ಸೋತು ಹೋದೆ ಅನ್ನೋ ಫೀಲಿಂಗು ಕಣೆ. ೩೦ ವರುಷಗಳ ವೃತ್ತಿ ಬದುಕಲ್ಲಿ ಹೀಗೆ ಅನ್ನಿಸಿದ್ದೇ ಇಲ್ಲ.

 B:ಹಮ್ ಅರ್ಥಾ ಆಗುತ್ತೆ.ನಿನಗೆ ಬೇಕಾದುದ್ದೆಲ್ಲ ಸಿಕ್ತು ಅದಿಕ್ಕೆ ಹಾಗಿರಬೇಕು.

A:ಈಗ ನನ್ನರಿವಿಗೆ ಬರುತ್ತಿಲ್ಲ,ಏನು ಬೇಕಾಗಿತ್ತು ನಂಗೆ?

B:ಇಲ್ನೋಡೆ,ಸ್ವಲ್ಪ ದಿನ ಅಷ್ಟೇ.ಈ ಒಂಟಿತನ ಇದೆಯಲ್ಲ,ಒಮ್ಮೆ ರೂಢಿ ಆಗಿ ಬಿಟ್ಟರೆ ಅಷ್ಟೆ ಮುಗೀತು,ಒಂಟಿತನವನ್ನ ನಾವು ಪ್ರೀತಿಸಲು ಶುರುಮಾಡಿ
ಬಿಡುತ್ತೇವೆ,ಹಾಗೆಯೇ ಒಂಟಿತನವೂ ಕೂಡ.

A:ಅದು ಹಾಗಲ್ಲ.

B:ಹಾಗೂ ಇಲ್ಲ ಹೀಗೂ ಇಲ್ಲ.ನಿನಗೆ ನೀನೆ.

A:ಹ್ಮ್ ನೀನಂದಿದ್ದು ಸರಿ,ಕಂಡವರಿಗೆಲ್ಲ ಅಣ್ಣ ತಮ್ಮ ಎಂದು ಮಾತಾಡಿಸುವ ನನಗೆ ಆವತ್ತು ಅನಿಸಿದ್ದು 'ನನಗೆ ಯಾರೂ ಇಲ್ಲ',ಯಾಕೋ ಗೊತ್ತಿಲ್ಲ,ಈ ಸಂಬಂಧಗಳೇ ಹಾಗೆ.ನಿನಗೆ ನೀನೇ ಅನ್ನುವದೊಂದು ಸತ್ಯ ಕೊನೆಯವರೆಗು ಉಳಿದು ಬಿಡುತ್ತದೆ. ಆದರೂ..
ಎಷ್ಟು ವಿಚಿತ್ರ ಗೊತ್ತ,ನಮ್ಮ ಮೊಬೈಲಿನಲ್ಲಿ ಸಾವಿರ ನಂಬರ್ ಗಳಿರಲಿ,ನಮಗೆ ಬೇಕಾದಾಗ ಮಾತಾಡಲಿಕ್ಕೆ ಯಾರೂ ಸಿಕ್ಕುವದೇ ಇಲ್ಲ.ಎಲ್ಲವೂ ಕಾರ್ಯನಿರತವಾಗಿರುತ್ತವೆ,ಇಲ್ಲಾ ಸದ್ದಿಲ್ಲದೆ ಎಲ್ಲೋ ಬಿದ್ದಿರುತ್ತವೆ ಜೀವ ಕಳೆದುಕೊಂಡು.

B:ಅದಿಕ್ಕೆ ಹೇಳಿದ್ದು,ಯಾರಿಗೋ ಕಾಯುವದರಲ್ಲಿ ಅರ್ಥವಿಲ್ಲ

A:ಅದು ಹಾಗಲ್ಲ,ಎಲ್ಲೋ ಒಂದುಕಡೆ ಸಣ್ಣ ಭರವಸೆ.

B:ಭರವಸೆ ಇರಬೇಕು ನಿಜ, ಆದರೆ ಬೇರೆಯವರ ಮೇಲಲ್ಲ,ನಮಗೆ ನಮ್ಮ ಮೇಲೆ.

A:ಈ ಬೇಜಾರು,ನಿರೀಕ್ಷೆ ಗಳೆಲ್ಲ ಹಾಗೆ ಕಾಡುತ್ತವೆ, ಕಾಡಿಸುತ್ತವೆ.ಮಾಡಲಿಕ್ಕೆ ಕೆಲಸವಿಲ್ಲದಾಗ ನೆನಪಾಗುತ್ತವೆ.ಹಿಂದಿಲ್ಲ ಮುಂದಿಲ್ಲ,ಹೋಗಲಿ ಅರ್ಥವಾದರು ಇದೆಯ? ಅದೂ ಇಲ್ಲ.Just Like that…

B:ಯಾಕೆ ಅನ್ನಿಸುವದಿಲ್ಲ ಗೊತ್ತಾ, ಯಾರು ಆಪ್ತರಾಗುವದೇ ಇಲ್ಲ,ಎಲ್ಲರಿಗೂ ಧಾವಂತದ ಬದುಕಿನ ಹೋರಾಟ ದಿಕ್ಕೆಟ್ಟಿಸಿರುತ್ತದೆ.ಅವರವರ ಬದುಕು ಅವರವರಿಗೆ .

A:ಇಂದಿನ ಬದುಕೊಂದೇ ನಿಜ ಅಲ್ಲ ಅಲ್ಲವ, ನಾಳೆಯೂ ಬದುಕಬೇಕು,ಅದ್ಯಾಕೆ ಅರ್ಥವಾಗುವದಿಲ್ಲ?

B:ಅಯ್ಯೊ ಮಂಕೆ,ಇವತ್ತು ಬದುಕಿದರೆ, ನಾಳೆ ತಾನೆ? ಅಲ್ಲಿಯವರೆಗು ನಾಳೆಯ ಯೋಚನೆ ಯಾತಕ್ಕೆ.ಇವರೆಲ್ಲ ಜನಸಾಮಾನ್ಯರು ಕಣೆ,ಇಂದು ಮುಖ್ಯ.ಕಾಣದ ನಾಳೆಯಲ್ಲ.

A:ಹ್ಮ್ಮ್ ಆದರೂ ಕಾಣದ ನಾಳೆಯ ಬಗ್ಗೆ ಕನಸು ಕಟ್ಟಿದಾಗ,ಎಷ್ಟು ಕುಶಿಯಾಗುತ್ತದಲ್ಲ.

B:ನನ್ನ ಕತೆ ಕೇಳು

ಇಷ್ಟು ವರ್ಷ ಕೆಲಸ ಮಾಡಿ, ಒಂದೇ ಸಾರಿ ನಿನಗಿನ್ನು ವಯಸ್ಸಾಯಿತು ಮನೆಗೆ ಹೋಗು ಎಂದಾಗ,ಇವರಿಗು ನನಗೂ ಇನ್ನು ಏನು ಸಂಬಂಧ ಉಳಿದಿಲ್ಲ ಎಂದು.ಈ Retirement  ಹಾಗೆ.ಎಲ್ಲರಿಗೂ ವಯಸ್ಸಾಗುತ್ತದೆ,ಆದರೆ ಅದನ್ನ ಬೇರೆಯವರ ಬಾಯಿಯಿಂದ ಕೇಳಿದಾಗ , ನಿಜಕ್ಕೂ ನನಗೆ ವಯಸ್ಸಾಯಿತು ಅನ್ನಿಸಿಬಿಡುತ್ತದೆ.

A:ಹೌದು…ಅದು ಹಾಗೆ ಕಣೆ

B:ಅದು ನನ್ನದೇ ಕಂಪನಿ, ನಾ ಕಟ್ಟಿ ಬೆಳೆಸಿದ್ದು.ನನಗೆ ನಿನ್ನ ಸೇವೆ ಸಾಕು ಇನ್ನು ನೀನು ಹೋಗಿ ವಿಶ್ರಾಂತಿ ತೆಗದುಕೊ ಅಂದಾಗ, ಇದನ್ನ ಕಟ್ಟಲು ಪಟ್ಟ ಪಾಡೆಲ್ಲ ಕಣ್ಮುಂದೆ ಬಂದು,ಯಾಕೋ ನಾ ಬೇರೆಯವ,ಒಂಟಿ ಅನ್ನಿಸಿಬಿಡುತ್ತದೆ.ಇನ್ನು ಅವರ ಆಡಳಿತದಲ್ಲಿ ತಲೆ ಹಾಕಬಾರದಂತೆ.ಯುವಕರಿಗೆ ಅವಕಾಶ ಕೊಡಬೇಕಂತೆ.ಕಂಪನಿ ಬೆಳೆಯಿಸುತ್ತಾ,ಸಾವಿರ ಸಾವಿರ ಯುವಕರಿಗೆ ಕೆಲಸ ಕೊಟ್ಟಿದ್ದು ಕಾಣುವದೇ ಇಲ್ಲ.

A:ಹುರುಳಿಲ್ಲದ್ದು ಕಣೆ.ಸಂಜೆ ಆಗ್ತ ಇದೆ ಮನೆಗೆ ಹೋಗಬೇಕಲ್ಲಾ.ಅಲ್ಲಾ ನೀ ಅದೆನೋ ಹೊಸ ಕಂಪನಿ ಕಟ್ಟುತ್ತೀಯಂತೆ?

B :ಹ್ಮ್ ,ಸುಮ್ಮನೆ ಮನೆಯಲ್ಲಿ ಕುತಿರ್ಲಾ? ಶುದ್ಧ ಸೋಂಬೇರಿಯಾಗಿ?

A: ಯಾಕಾಗಬಾರ್ದು? ಒಂದಷ್ಟು ದಿನ ಹಾಗೆ,ಖಾಲಿ,ಏನನ್ನೂ ಯೋಚಿಸದೇ.ಪಾರ್ಕಿಗೆ ಬಾ ,ಸುತ್ತಲಿದನ್ನು ನೋಡು,ಬೇರೆಯದೇ ಲೋಕ.ಹೊಸ ಹೊಸ ವಿಚಾರಗಳು ಬಂದಪ್ಪಳಿಸಿಯಾವು.

B: Let me try Out..


ಖಾಲಿತನ(Emptiness) ಎಲ್ಲರಿಗು ದಕ್ಕುವದಿಲ್ಲ,ಅದು ಹಾಗೇ.ಕೆಲವರಿಗೆ ಸುಮ್ಮನೆ ಕೂತಲ್ಲಿ ಕೂಡಲಿಕ್ಕಾಗುವದಿಲ್ಲ, ನಿಂತಲ್ಲಿ ನಿಲ್ಲಲ್ಲಿಕ್ಕಾಗುವದಿಲ್ಲ,ಒಂದು ತರ ಓಡುತ್ತಲೇ ಇರುತ್ತಾರೆ, ಕೊನೆಯವರೆಗೂ.

ಖಾಲಿತನ ಅನುಭವಿಸಿದವರಿಗಷ್ಟೆ ಗೊತ್ತು,ಖಾಲಿತನಕ್ಕಾಗಿ ಜನರಿಲ್ಲದ ಪ್ರದೇಶವೇ ಆಗಬೇಕಿಲ್ಲ,ನೀವೆಲ್ಲಿದ್ದೀರೋ ಅಲ್ಲೇ ದಕ್ಕಬಹುದು.
ತ್ವಮೇವ ಕರ್ತಾಸಿಯಿಂದ 'ಅವನೇ ನಾನು'  ವರೆಗೂ.

ಭಾನುವಾರ

ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ

ಇಂದಿನ ಬೆಳಗು ಶುರುವಾದದ್ದೇ ಬಿಸಿಬಿಸಿ ಕಾಫಿಯಿಂದ. ಭಾನುವಾರವಾದರು ನಾನು ನಿದ್ದೆಗೆ ಶುಭೋದಯ ಹೇಳುವದು ಬೆಳ್ಳಂಬೆಳಗ್ಗೆಯೇ .ದೊಡ್ಡ ಕಪ್ ನ ತುಂಬ ತುಂಬಿಸಿ ಸೊರ್ ಸೊರ್ ಎಂದು ಕುಡಿಯುತ್ತ ಕುಳಿತರೆ ಹೊತ್ತೇರುತ್ತಿರುವದನ್ನ ಮರೆಯಿಸುವ ನಷೆ ಆವರಿಸಿಬಿಟ್ಟಿದೆ. ಮೂಡಣದ ನಸುಕು ಕತ್ತಲೆಯ ಕಳೆ ಕಳೆಯುತ್ತ,ಮುಂಜಾವಿನ ಮಂಜು ಇಳಿಯುತ್ತಿದ್ದರೆ,ಅದನ್ನೆ ನೋಡುತ್ತ ,ಬಿಸಿಬಿಸಿ ಕಾಫಿಯ ಒಂದೊಂದೇ ಗುಟುಕು ಹೊಟ್ಟೆ ಸೇರಿದ ಆ ಗಳಿಗೆಗಳು ಗೊತ್ತೇ ಅಗುವದಿಲ್ಲ. ರುಚಿ ಸವಿವ ಕೈಂಕರ್ಯ ದಲ್ಲಿ ಬಹಳ ಬ್ಯೂಸಿಯಾಗಿರುವ ನಾಲಿಗೆ, ಆ ಬಿಸಿಗೆ ಚುರುಗುಟ್ಟಿದರು ಎನನ್ನೂ ಹೇಳುವದೇ ಇಲ್ಲ.ಕಾಫಿಯ ಮಟ್ಟಿಗೆ ಹೇಳುವದಾದರೆ ಮೊದಲು ಸುದ್ದಿ ಮುಟ್ಟುವದು ಮೂಗಿಗೆ ಸರಿ.ಮೂಗು ಮಿಕ್ಕವರನ್ನ ಬಡಿದೆಬ್ಬಿಸಿ,ಬೆಳಗಾಗಿದ್ದನ್ನ ಸಾರಿ ಹೇಳಿದ್ದು ದಿಟ.
ಆ ಗುಬ್ಬಿಗೂ ಹಾಗೇ ಆಗಿರಬೇಕು.ನನ್ನ ಪ್ರೀತಿಯ ಗುಬ್ಬಿ/ ಗುಬ್ಬಚ್ಚಿ ನಾ ಕಾಫಿ ಕುಡಿಯುವದನ್ನ ನೋಡಲಿಕ್ಕೆ ಬೇಗ ಎದ್ದಿರಬೇಕು,ಅಥವ ಅದಕ್ಕು ರುಚಿ ಸವಿವ ಮನಸ್ಸಾಗಿರಬೇಕು,ಚಿವ್ ಚಿವ್ ಎನ್ನುತ್ತ ಇಲ್ಲೇ ಸುತ್ತುತ್ತಿದೆ, ನನ್ನಿದುರಿನ ಕಟಾಂಜನದ ತುದಿಯಲ್ಲಿ ಕೂತು ತನ್ನ ಚೊಂಚಿನ ಎರಡು ಬದಿಯನ್ನು ಅನುಕ್ರಮವಾಗಿ ಉಜ್ಜುತ್ತ ಕಾಫಿಯ ಸೇವನೆಗೆ ನಾ ಸಿದ್ಧ ಎಂದು ಸಾರಿ ಹೇಳುತ್ತಿರುವದು ನನಗೆ ಕಾಣಿಸುತ್ತಿಲ್ಲ. ಈ ಗುಬ್ಬಿ ಏನ ಹೇಳ ಹೊರಟಿದೆಯೆಂಬುದು ಕಾಫಿಯ ಸವಿರುಚಿಯ ನಷೆಯಲ್ಲಿ ತೇಲುತ್ತಿದ್ದ ನನಗೆ ತಿಳಿಯುವದೇ ಇಲ್ಲ

ಯಾಕೋ ನನ್ನ ದಿವ್ಯ ನಿರಾಸಕ್ತಿ ತನಗೆ ನೋವು ತಂದಿದೆ ಎಂದು ನನಗೆ ತಿಳಿಯಲೆಂದು ಕುಂತಲ್ಲಿಂದ ರೆಕ್ಕೆ ಬಡಿಯುತ್ತ ಹಾರಿ,ಚಿವ್ ಚಿವ್ ಎಂದುಲಿದು ನನ್ನನೊಂದು ಸುತ್ತು ಹಾಕಿ ಮತ್ತೆ ಬಂದು ಅಲ್ಲೇ ತುದಿಯಲ್ಲಿ ಕುಳಿತು ಮೌನದ ಪಾಲಾಗಿಬಿಟ್ಟಾಗ, ತಟ್ಟನೆ ಇಹದ ಅರಿವಾಗಿ, ನನಗೆ ಖೇದವೆನಿಸಿಬಿಡುತ್ತದೆ. ಸಾವಧಾನ ಭಂಗಿಯಲ್ಲಿ ಕುಳಿತ ಆ ಗುಬ್ಬಿಯ ಆ ಚೂಪು ಚೊಂಚು ಮತ್ತೂ ಚೂಪಗಾದಂತೆ,ರೆಕ್ಕೆಗಳೆಲ್ಲ ಸೇರಿ ನನ್ನ ವಿರುದ್ಧ ಸಮರ ಸಾರಿದಂತೆ ನಾನು ಅಂದುಕೊಳ್ಳುತ್ತೇನೆ.
ಆದರೆ ನಡೆದದ್ದು ಹಾಗಲ್ಲ.ಅಲ್ಲೇ ಎಲ್ಲೋ ಹತ್ತಿರದಲ್ಲಿ ಅಡಗಿ ಕುಳಿತಿದ್ದ ಕೀಟವೊಂದರ ಮೂಗು ಸೇರಿದ ಕಾಫಿಯ ಪರಿಮಳ ಪ್ರಾಣಭಯವನ್ನೂ ಲೆಕ್ಕಿಸದಂತೆ ಮೂಲದೆಡೆಗೆ ಎಳೆದು ತಂದಿರುತ್ತದೆ. ಕಾಫಿಯ ಪರಿಮಳದ ಮೂಲ ಅರಸಿ ಬಂದ ಆ ಪುಟ್ಟ ಕೀಟ,ಕಾಫಿಯ ರುಚಿ ನೋಡಲು ಆಗದೆ ಚಡಪಡಿಸುತ್ತಿರುವ ಆ ಪ್ರೀತಿಯ ಗುಬ್ಬಚ್ಚಿಯ ಆಹಾರವಾಗಿ ಬಿಡುತ್ತದೆ.ಕಾಫಿ ಸಿಕ್ಕದಿದ್ದರೇನು ಎನ್ನ ಹೊಟ್ಟೆ ತುಂಬಿತಲ್ಲ, ಎಂದು ತನಗೇ ತಾ ಸಮಧಾನಿಸಿಕೊಳ್ಳುತ್ತ ಕುಂತಲ್ಲಿ ಕೂಡದ ಗುಬ್ಬಚ್ಚಿ ಅಲ್ಲಿಂದ ಮರೆಯಾಗಿ ಬಿಡುತ್ತದೆ.ಪಾಪ ಗುಬ್ಬಿ,ಎಂದು ಅಂದುಕೊಳ್ಳುತ್ತ,ರುಚಿ ಸವಿಯುವಲ್ಲಿ ತಲ್ಲೀನಳಾಗಿಬಿಡುತ್ತೇನೆ ನಾನು.

ಚೂರು ಸಕ್ಕರೆ ಹೆಚ್ಚಿದ್ದರೂ ನಡೆಯುತ್ತಿತ್ತು ಎಂಬಲ್ಲಿಗೆ ಕಾಫಿಯ ಲೋಟದಲ್ಲಿ ಕೊನೆಯ ಆ ಗುಟುಕೊಂದೇ ಉಳಿದುಬಿಡುತ್ತದೆ.ಬಿಸಿ ತಣಿದ ಆ ಕೊನೆಯ ಗುಟುಕು,ತಳ ಸೇರಿ ಅಡಗಿದ್ದ ಚೂರು ಸಕ್ಕರೆಯ ಜೊತೆ ಬೆರೆತು ಸಿಹಿಯ ಸಿಹಿ ದುಪ್ಪಟ್ಟಾಗಿ, ಅಬ್ಬಾ ಸಕ್ಕರೆ ಕಮ್ಮಿ ಅನಿಸಿದ್ದರೂ ಪರವಾಯಿಲ್ಲ ಇಷ್ಟೆಲ್ಲ ಸಿಹಿ ಇರಬಾರದಪ್ಪ ಅನ್ನಿಸಿ ಹೋಗುವಂತೆ ಮಾಡಿಬಿಡುತ್ತದೆಯಲ್ಲಾ.
ಏನೇ ಅಂದರು, ಮತ್ತೊಂದು ಲೋಟ ಕಾಫಿ ಕುಡಿವ ತನಕ ಉಳಿಯುವದು ಆ ದುಪ್ಪಟ್ಟಾದ ಸಿಹಿಯೆ, ಅದರ ಸವಿಯೇ, ಅದರ ನೆನಪೆ, ಕಾಫಿಯ ರುಚಿ ಕಹಿಯೆಂಬುದನ್ನೇ ಮರೆಯಿಸಿಬಿಡುತ್ತದಲ್ಲಾ ಏನಂತೀರಿ?

ಬುಧವಾರ

ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ


ಸುರಿವ ಮಳೆ  ಸುರಿದು ಬರಿದಾಗಿತ್ತು,ನನ್ನ ಕಣ್ಣೀರಿನಂತೆಯೇ.ಯಾಕೊ ಅತ್ತು ಹಗುರಾಗೋಣವೆಂದರೆ ಅಳುವು ಬರುತ್ತಿಲ್ಲಾ.ಮಾಡಂಚಿನಿಂದ ಮಳೆ ನೀರು ಬಿದ್ದು ಬಿದ್ದು ನೆಲ ಸವೆದಿತ್ತು,ಕೊರಕಲಾಗಿತ್ತು,ನನ್ನ ಬದುಕಿನಂತೆಯೆ.ಬಿದ್ದ ನೀರು ಆ ಇಳೆಯ ಒಡಲೊಳಕ್ಕೆ ಇಳಿಯಲೇ ಇಲ್ಲ ಆತನ ಪ್ರೀತಿಯಂತೆ.ಕೊರಕಲ ಸಂದಿಯನ್ನೂ ಬಿಡದೇ ಅಂಗಳದ ಮಣ್ಣ ಸಮೇತ ಹಾಗೆಯೇ ಕೊರೆದು, ತರೆದು ಮಳೆಯ ನೀರು ಕೆಂಪಾಗಿ ದೂರ ಹರಿದಿತ್ತು ನಮ್ಮ ಪ್ರೀತಿಯಂತೆಯೆ.ಮಣ್ಣ ಸಾರವೆಲ್ಲ ಮಳೆಯ ನೀರಿನೊಟ್ಟಿಗೆ ಹರಿದು ದೂರ ದೂರ ಸರಿದು ಸಾಗರವ ಸೇರಿತ್ತು ಉಪ್ಪಾಗಲು,ಮರಳಾಗಲು,ಥೇಟ್ ನನ್ನ ಕಣ್ಣಿರಿಂತೆಯೇ, ನನ್ನ ಬದುಕಿನಂತೆಯೇ.

ಅಂವ ಕಂಡಿದ್ದು ನಮ್ಮ ಮಲೆನಾಡಿನ ಆ ರಪ್ಪನೆ ಬಾರಿಸುವ ಮಳೆಗಾಲದಲ್ಲಿಯೇ.ನಾನು ಆಗ ಧಾರವಾಡದಲ್ಲಿ ಎಮ್ ಎ ಓದುತ್ತಿದ್ದೆ.ಇಂಗ್ಲಿಷ್ ನನ್ನ ಮೆಚ್ಚಿನ ವಿಷಯ. ಅವಗೆ ಹೇಗೋ ತಿಳಿದಿತ್ತು ಅನ್ನಿಸುತ್ತದೆ.ಆತ ಮಾತ ಶುರುವಲ್ಲಿಯೇ,
I'm Nobody! Who are you?
Are you – Nobody – too?

Then there's a pair of us?

Don't tell! they'd advertise – you know!
How dreary – to be – Somebody!

How public – like a Frog –

To tell one's name – the livelong June –

To an admiring Bog!



ಅಂದಿದ್ದ. ಎಮಿಲಿ ಡಿಕಿನ್ಸೊನ್ ರ ಪದ್ಯ.

ಇಲ್ಲಿ ಯಾರು ಯಾರಿಗು ಒತ್ತಾಯಿಸುವ ಅಗತ್ಯವಿಲ್ಲ, ಯಾರೋ ಅಗುವದಕ್ಕೆ ಹೋಗಿ ಎನೇನೊ ಆಗುವ ಅನಿವಾರ್ಯತೆ ಇಲ್ಲ,ನೀನು ನೀನಾಗಿರಲಿಕ್ಕೆ,ನಿನಗನಿಸಿದ್ದನ್ನ ಹೇಳಲಿಕ್ಕೆ ಯಾರ ಭಯವು ಇಲ್ಲ ಅಂದ.

ಕುಶಿ ಅನ್ನಿಸಿತು,ಮಹಿಳೆಯರ ಮೆಲೆ ಗೌರವವಿರುವವರನ್ನ ಕಂಡರೆ ನನಗೆ ಗೌರವ ಜಾಸ್ತಿ. ಹೀಗೆ ಪರಿಚಯ ೪ನೆ ವರುಷಕ್ಕೆ ಬಂದಿತ್ತು.ಮನೆಯಲ್ಲಿ ಮದುವೆಯ ಮಾತುಕತೆ ನಡೆದಿತ್ತು.ಜಾತಿ,ಆಚಾರ,ಗ್ರಹ ಗತಿಗಳೆಲ್ಲ ಪ್ರತಿಕೂಲವಾಗಿದ್ದವು.ಮನೆಯಲ್ಲಿ ಧಾರವಡದ ಬಿಸಿಲಲ್ಲಿ ಕಂಡ ಅವನ್ನ ಅಳಿಯನನ್ನಾಗಿ ಮಾಡಿಕೊಳ್ಳಲು ಕೊನೆಗು ಒಪ್ಪಲೆ ಇಲ್ಲ, ಆ ಮಳೆಗಾಲದಲ್ಲೂ.

ಅಂದು ನಮ್ಮನೆಯ ಕೆರೆ ದಂಡೆಯ ಮಗ್ಗುಲಲ್ಲಿ ಕೊನೆಯ ನಿರ್ಧಾರ.ಅದೆ ಸಿನಿಮೀಯ ತಿರುವುಗಳಿಗಾಗುವ ಅಂತ್ಯ ನಮ್ಮ ಜೀವನದ್ದು. ಬೇಜಾರಿನದ್ದು.
I cannot live with you,

It would be life,

And life is over there

Behind the shelf

………….



So we must keep apart,

You there, I here,

With just the door ajar

That oceans are,

And prayer,

And that pale sustenance,

Despair! -

Emily Dickinson

ಆ ಸಾಲುಗಳನ್ನ ಹೇಳಿಯೇ ಆತ ದೂರಸರಿದಿದ್ದು.

ಹ್ಮ್ಮ್ ಅಂದೇ ಮಳೆಗಾಲ ಶುರುವಾಗಿತ್ತು,ಜಡಿಮಳೆ. ಕನಸಾಗಿರಲಿ ಎಂದು ಕೈ ಚಿವುಟಿ ನೋಡಿಕೊಂಡಿದ್ದೆ.ಉರಿಯಲಿಲ್ಲ,ಉರಿಯಲಿಕ್ಕೆ ನೋವು ಗೊತ್ತಾಗುವದಾದರೂ ಹೇಗೆ? ಆ ನೋವೇ ಈ ನೋವ ನುಂಗಿದರೆ?
ಮತ್ತೆ ಅದೇ ಮಳೆಗಾಲ, ಅದೇ ಕಿಡಕಿಯ ಪಕ್ಕ ಅಂತೆಯೇ ಕುಳಿತಿದ್ದೇನೆ ಬಾರದವರಿಗಾಗಿ ಕಾಯುತ್ತ , ಕಾಡುವ,ಬಿಡದ ನೆನಪುಗಳನ್ನು ಹತ್ತಿಕ್ಕುತ್ತ.
ಉಸಿರು ಎಲ್ಲೋ ಕಳೆದು ಹೋಗಿದೆ,ಕಾಣದ ಅವನಂತೆ ಕಣ್ತುಂಬ ನಿದ್ರೆ ಬರದೆ ವರುಷಗಳಾಗಿದೆ,ಅಂದಿನ ದಿಟ್ಟತನ ಅವನೊಟ್ಟಿಗೇ ಮರೆಯಾಗಿದೆ ಮತ್ತೆ ಬಾರದಂತೆ.ಮತ್ತೆ ಮಳೆ ಶುರುವಾಗಿದೆ ಒಂದೇ ಸಮನೆ ಕಾಡುವ ನೆನಪುಗಳಂತೆ.

ಗುರುವಾರ



ನಾಕೇ ನಾಕು ತಂತಿ.....



ಅಬ್ಬಾ ಎಷ್ಟೋ ದಿನಗಳು ಅಲ್ಲಲ್ಲ ತಿಂಗಳುಗಳೆ ಸರಿದು ಹೋಗಿದ್ದಾವೆ ಏನನ್ನು ಬರೆಯದೇ. ಮಳೆಗಾಲ ಕಳೆದು ,ಚಳಿಗಾಲ ಮುಗಿದು ಬಿರು ಬೇಸಿಗೆಯೂ ಕೈಬೀಸಿ ಹೋಗಿಬರುತ್ತೇನೆ ಅನ್ನುತ್ತಿದೆ. ಮತ್ತೆ ವರುಣ ದೇವರ ಕೃಪೆಯಿಂದ ಆಗಸದಲ್ಲಿ ಮೋಡಗಳು ತೇಲಿ ಕುಬೇರನ ಲೋಕದ ನೆನಪನ್ನ ತರುತ್ತಿವೆ(ಕುಬೇರನ ಲೋಕವನ್ನ ಯಾವತ್ತು ನೋಡಿದ್ದೀಯಾ ಎಂದು ಕೇಳಬೇಡಿ, ಹಾಗೆ ಸುಮ್ಮನೇ..),ಆಗಾಗ ಆಂಗ್ಲ x, y, z, ಬರೆಯುವ ಕೋಲ್ಮಿಂಚುಗಳು, ನೆನ್ನೆ ಮೊನ್ನೆಯ ಗುಡುಗುಗಳು,ಬೆಂಗಳೂರಲ್ಲಿ ಮಳೆಗಾಲ ಶುರುವೇ ಆಗಿಬಿಟ್ಟೀತೇನೋ ಎಂಬ ಫೀಲ್ ಕಟ್ಟಿಕೊಟ್ಟಿವೆ.
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ನೆಗೆದಂತೆ ದಿನಗಳೆಲ್ಲ ಕಳೆದೆ ಹೋಗಿವೆ.ಇಷ್ಟೆಲ್ಲಾ ದಿನಗಳಲ್ಲಿ ಎಷ್ಟೆಲ್ಲಾ ಘಟನೆಗಳು ನಡೆದು ಹೋಗಿದ್ದಾವೆ
ಒತ್ತಡದ ಜೀವನಕ್ಕೊಂದು ತಡವಾದ ವಿಶ್ರಾಂತಿ ದೊರಕಿದೆ.ಬಹಳ ದಿನಗಳಿಂದ ಹಲವು ಅನಿಸಿಕೆಗಳು ತೇಲಿ ಬರುತ್ತಲೇ ಇದ್ದವು, ಎಲ್ಲವನ್ನು ಕೂಡಿಹಾಕಲಿಕ್ಕಾಗಿರಲಿಲ್ಲವಷ್ಟೇ.



*****ಒಂದು*****

ಬಿಡುವಿನ ವೇಳೆಯಲ್ಲಿ ಹಲವು ಪುಸ್ತಕಗಳನ್ನು ಓದಿ ಮುಗಿಸಿದೆ ಎನ್ನುವದು ಒಂದು ಸಾಧನೆಯ ಅಧ್ಯಾಯ. ಹಾಂ ಹೇಳಬೇಕೆಂದರೆ, ಬೇಂದ್ರೆಯವರ ಕವನ ಸಂಕಲನಗಳನ್ನು ಮತ್ತೆ ಓದಿದೆ ಈ ಬಾರಿ ಹೊಸದೊಂದೇ ಅರ್ಥ ಹುದುಕಿದೆ.ಹುಡುಕಿದೆ ಅನ್ನುವದಕ್ಕಿಂತ ದೊರಕಿದೆ ಅನ್ನುವದೇ ಸೂಕ್ತವಾದೀತು. ಪುಸ್ತಕಗಳನ್ನು ನೋಡಿದಾಗ ರುಚಿಕಟ್ಟಾದ ಭೋಜನ ದ ಚಿತ್ರ ಕಣ್ಮುಂದೆ ಬರುತ್ತದೆ ನನಗೆ. ಇದುವರೆಗೂ ಪುಸ್ತಕಗಳು ನೀಡಿದ ಕುಷಿಯನ್ನ ಮತ್ತೆಲ್ಲೂ ಹುಡುಕಲಿಕ್ಕಾಗಲಿಕ್ಕಿಲ್ಲ ಅನ್ನುವದು ಕುಷಿಯೂ ಅಲ್ಲದ ಬೇಜಾರು ಇಲ್ಲದ ಸಂಗತಿ .ಒಂದೇ ಉಸಿರಿನಲ್ಲಿ ಓದಿದ, ಖಲೆದ್ ಹೋಸೆನಿಯ 'Thousand Splendid Suns ಕಾದಂಬರಿ - ಸುಂದರ ಆಫ್ಘಾನಿಸ್ತಾನಕ್ಕಾದ ಗತಿಗಾಗಿ ಮರುಗುತ್ತದೆ, ಮತ್ತು ನಾನು ಭಾರತದಲ್ಲಿ ಜನಿಸಿದ ಬಗ್ಗೆ ಬಹಳ ಕುಶಿಯಾಗುತ್ತದೆ. ಆ ಕಾದಂಬರಿ ಓದಿದ ಕೂಡಲೇ ಅನಿಸಿದ್ದು ಇಷ್ಟೇ -'ನಾನು ಆಫ್ಘಾನ್ ದೇಶದಲ್ಲಿ ಹುಟ್ಟಲಿಲ್ಲವಲ್ಲ ಸಧ್ಯ'.ಅಫಘಾನಿನ ಜನರ ಬಗ್ಗೆ ಮರುಕ ಹುಟ್ಟಿಸುತ್ತದೆ,ಕತೆಯಲ್ಲಿನ ಮರಿಯಂ ಮತ್ತು ಲೈಲ ಎಂಬ ಇಬ್ಬರು ಮಹಿಳೆಯರು ಅಫಘಾನಿನ ಮಹಿಳೆಯರನ್ನ ಪ್ರತಿನಿಧಿಸುತ್ತಾರೆ, ಅಲ್ಲಿನ ಬಡತನ, ಯುದ್ಧ ಮತ್ತು ಅದರ ಪರಿಣಾಮಗಳು,ಮಹಿಳೆ ಗಿರುವ ಸ್ಥಾನಮಾನಗಳು ಎಲ್ಲವನ್ನ ಜಾಹೀರು ಮಾಡಿದೆ ಈ ದೊಡ್ಡ ಕಾದಂಬರಿ.ಖಲೆದ್ ಹೋಸೆನಿ , ಕೊಡುವ ವಿವರಣೆ, ಮರಿಯಂ ಪಾತ್ರವನ್ನ ಚಿತ್ರಿಸಿದ ಬಗೆ, ಮರಿಯಂನ ತಲೆಯಲ್ಲಿ ಬಂದು ಹೋಗುವ ವಿಚಾರಗಳ ನಿರೂಪಣೆ,ಎಲ್ಲವನ್ನ ಓದಿ ಮುಗಿಸುವ ಹೊತ್ತಿಗೆ, ನಿಮ್ಮಿದುರಲ್ಲಿ ,ಕಾಬೂಲ್, ಮರಿಯಂ,ಮತ್ತು ಎಲ್ಲ ಸಂಘರ್ಷಗಳಿಂದ ಎರಡು ದಿನಕ್ಕಾಗುವ 'hangover' ತಯಾರಾಗಿ ಬಿಡುತ್ತದೆ.



*****ಎರಡು*****


ಹಲವು ಒಳ್ಳೆಯ ಚಲನ ಚಿತ್ರಗಳನ್ನ ನೋಡುತ್ತೇನೆ , ಒಂದು ಸಾರೆಯಲ್ಲ ಹಲವು ಸಾರೆ.... ಮೊದಲ ಬಾರಿ ನೋಡುವಾಗ ಕಣ್ಣು ಬಿಟ್ಟುಕೊಂಡು,ಬಾಯೀ ಮುಚ್ಚಿಕೊಂಡು ನೋಡಿದರೆ ಮುಂದಿನ ಬಾರಿಯೆಲ್ಲ ಇವ ಈ ಕತೆಯನ್ನ ಒಂದು ಚೂರು ಹಿಂಗೆ ಮಾಡಿದ್ರೆ ಛೋಲೋ ಇತ್ತಲ್ಲ, ಈ ನಾಯಕನ ಚಿತ್ರಣ ಹೀಗಿದ್ದರೆ ಚೆನ್ನ, ನಾಯಕಿಗೆ ಅವಕಾಶ ಕಡಿಮೆ ಆದಹಾಗೆ ಅನಿಸುತ್ತಿದೆ, ಕತೆಯಲ್ಲಿ ಗಟ್ಟಿತನವಿಲ್ಲ,ಈ ಕತೆ ಮುಗಿಯದ ಹ್ಯಾಂಗೋವರ್ ಉಳಿಸಿದೆ ಅಲ್ಲ, ಎಂದೆಲ್ಲ ಯೋಚಿಸುತ್ತಾ, ಚಲನ ಚಿತ್ರದ ಕೊನೆಯ ಭಾಗಕ್ಕೆ ಕಾಯತೊಡಗುತ್ತೇನೆ : ಹಲವು ಚಲನ ಚಿತ್ರಗಳ 'ಮುಕ್ತಾಯ' ಬಹಳ ಸೂಕ್ಷ್ಮವಾಗಿರುತ್ತವೆ (ನಾನು ಹೇಳುತ್ತಿರುವದೆಲ್ಲ ಕಲಾತ್ಮಕ ಚಿತ್ರಗಳ ಬಗ್ಗೆ ನೆನಪಿರಲಿ.) ಅಷ್ಟೇ ಅಲ್ಲದೇ ಮನತಟ್ಟುವಂತಿರುವ, ಚಿತ್ರಗಳೆ ಮಾತಾಡುವ 'ಅಂತಿಮ' ಭಾಗವೇ ಕೆಲವು ಸಾರೇ ಚಲನ ಚಿತ್ರದ ಯಶಸ್ಸಿಗೆ ಕಾರಣ ವಾಗುತ್ತದೆ.ಇಲ್ಲಿ ಯಶಸ್ಸು ಎನ್ನುವದು ಪ್ರೇಕ್ಷಕರ ಮೆಚ್ಚುಗೆ ಮಾತ್ರ ಸೀಮಿತ.'ಮಡಗಾಸ್ಕರ್ ೩' ಬೆಂಗಳೂರಲ್ಲಿ ತಯಾರಾಗುತ್ತಿದೆ ಎಂಬುದನ್ನು ಕೇಳಿ ಬೆಂಗಳೂರಿಗೆ 'ಹಾಲಿವುಡ್ ವ್ಯಾಲ್ಯೂ' ವಾಹ್ ಎಂದು ಕುಶಿ ಪಡುತ್ತೇನೆ.'Cow' ಚಲನಚಿತ್ರ ದಂತಹ ಚಿತ್ರಗಳನ್ನು ನೋಡುವಾಗ ಅದೇ ಗುಂಗಿನಲ್ಲಿ ಎರಡು ದಿನಾ ಹಾಗೆ ಕಳೆದು ಹೋಗುತ್ತದೆ.


***** ಮೂರು*****

ಅದರೊಟ್ಟಿಗೆ,

ಬಂಗಾಲದಲ್ಲಿ ಸೂರ್ಯೋದಯವಾಗಿದೆ, ಚಟ-ಪಟ ಮಾತಾಡುವ ಸರಳ ಜೀವಿ 'ದೀದಿ' ಮಮತ ಅಧಿಕಾರಕ್ಕೆ ಬಂದಿದ್ದಾರೆ. ಪಕ್ಕದ ತಮಿಳುನಾಡಲ್ಲಿ 'ಅಮ್ಮ' ವಿಜಯ ಭೇರಿ ಬಾರಿಸಿದ್ದಾರೆ,ಮಹಿಳಾ ಮಣಿಗಳ ಯಾತ್ರೆ ಹೀಗೆ ಮುಂದುವರಿಯಲಿ. ವಾರ್ತಾ ವಾಹಿನಿಗಳು ಇನ್ನು ಸಾಕೆಂದು ಒಸಾಮ ಮತ್ತು ಓಬಾಮರ ಸುದ್ದಿಗಳನ್ನು, ತಕ್ಕಮಟ್ಟಿಗೆ ನಿಲ್ಲಿಸಿದ್ದಾರೆ. ವಾರಗಟ್ಟಲೆ ಅದೇ ಅದೇ ಸುದ್ದಿಯನ್ನ, ವಿಕಾರಗೊಂಡ ಭಯಾನಕ ಛಾಯಾಚಿತ್ರಗಳನ್ನ ನೋಡಿ ನೋಡಿ ಬೇಸತ್ತಿದ್ದ ಮನಕ್ಕೆ 'ಕೆನ್ಸ್ ಚಲನ ಚಿತ್ರೋತ್ಸವ' ಸ್ವಲ್ಪ ತಂಪು ತಂದಿದೆ:). ಐ ಪಿ ಲ್ ಮತ್ತು ಬೇಸಿಗೆಯ ರಜ ಮುಗಿಯುತ್ತಿದೆ.




ಭಾನುವಾರ

ಬಲ್ಲೀರೇನಯ್ಯಾ ಸಂಬಂಧಗಳ ಮೂಲವ?

ಅಕ್ಕಾ,ಒಂದು ಮೊಳ ಮಲ್ಲಿಗೆ ಕೊಡಲಾ? ಅಂದಳು ಅವಳು,ಹೂ ಮಾರುವವಳು.'ಅಕ್ಕಾ' ಎಂದು ಕರೆಯುವದರ
 ಮೂಲಕ, ಆಕೆಯ ಅರಿವಿಗೆ ಬರದ, ನನ್ನ ಪರಿಧಿಗೂ  ಬರದ ಸಂಬಂಧದ ಎಳೆಯೊಂದನ್ನು  ಕಟ್ಟಿಬಿಟ್ಟಿದ್ದಳು.ನಾನು ಮೊಳ ಮಲ್ಲಿಗೆ ಕೊಂಡೆನೋ, ಬಿಟ್ಟೆನೋ ಅದು ಈ  ಲೇಖನದ ವ್ಯಾಪ್ತಿಗೆ ಹೊರತಾಗಿದ್ದು.


ಸಂಬಂಧಗಳೆ ಹಾಗೆ! ಕ್ಷಣದಲ್ಲಿ ಹುಟ್ಟಿಬಿಡುತ್ತವೆ,ಪೋಷಿಸಿದಲ್ಲಿ ಬೆಳೆಯುತ್ತವೆ,ತೀರಾ ಸೂಕ್ಷ್ಮವಾಗಿ ಗುರ್ತಿಸುತ್ತಾ, ಅವರವರ ಮನೋಗುನಕ್ಕನುಗುಣವಾಗಿ ಸ್ಪಂದಿಸುತ್ತಾ ಇದ್ದರೆ ಅಂತಹ ಸಂಬಂಧಗಳು ಬತ್ತದ ಅನುಭಾವದ ಪಯೋನಿಧಿಯೇ ಸರಿ.ನಡುವೆ ತೇಪೆ ಹಾಕುವದು,ಕತ್ತರಿಸುವದು,ಇತ್ಯಾದಿ ಎಲ್ಲ ತರಹದ ನಿಯಂತ್ರಣಗಳು ನಮ್ಮ ಕೈಯಲ್ಲಿರ ಬೇಕಾದುದು ಅಗತ್ಯ,ಅದು ಬೇರೆ ವಿಷಯ.

ಪಕ್ಕದ ಮನೆಯ ಪುಟ್ಟ ಕೂಸು'ರಕ್ಷಾ'  ನಮ್ಮ ಮನೆಗೆ ದೋಸೆ ತಿನ್ನಲು ಪ್ರತಿದಿನ ಬರುತ್ತಿದ್ದಳು,ಬೆಳಿಗ್ಗೆ ದೇವರಪೂಜೆಯ ಗಂಟೆಯ ಶಬ್ಧ ಆಕೆಗೆ ಕೇಳಿದ ಕೂಡಲೇ  ಆಕೆಯ ಅಮ್ಮನ ಸೀರೆ ಎಳೆದು ನಮ್ಮ ಮನೆಯ ದಿಕ್ಕಿನತ್ತ ಕೈ ತೋರಿಸುತ್ತಿದ್ದಳಂತೆ,ಅವಳ ಅಮ್ಮ ನಮ್ಮ ಮನೆಗೆ ಕಳಿಸಿಬಿಟ್ಟರೆ ಆಯಿತು,ಅಂಬೆಗಾಲಿಕ್ಕುತ್ತಾ, ದೋಚೆ ಮಮ್ ಮಮ್ ಎಂದು ಪುಟ್ಟ ಬಾಯಿಯಲ್ಲಿ  ಆಕೆ ನಗುತ್ತಿದ್ದರೆ ನನ್ನ ಅಮ್ಮನಿಗೂ ದೋಸೆ ಮಾಡಲು ಉತ್ಸಾಹ.ಬೆಲ್ಲ ತುಪ್ಪದಲ್ಲಿ ಅದ್ದಿದ ದೋಸೆ ಯನ್ನು ತಿಂದು, ನಮ್ಮೊಟ್ಟಿಗೆ ಸ್ವಲ್ಪ ಆಟವಾಡಿ,ಸವಾರಿ ಮನೆಯತ್ತ  ತಿರುಗಿಬಿಡುತ್ತಿತ್ತು..ಆಕೆ ಬರದೇ ಇದ್ದರೆ ನಮಗೆಲ್ಲ ಒಂದು ತರಹದ  ಕಸಿವಿಸಿ,ಅಮ್ಮನಂತೂ,ಕೂಸು ಬೈಂದೆ ಇಲ್ಯಪ,ನೀನಾದ್ರೂ ಹೋಗಿ ದೋಸೆ ಕೊಟ್ಟಿಕ್ಕೆ ಬಾ' ಎಂದು ನನ್ನನ್ನು ಆಕೆಯ ಮನೆಗೆ ಕಳಿಸುತ್ತಿದ್ದರು.ಈ ಪುಟ್ಟ ಕೂಸು ನಮಗಾವ ಬಂಧುವು ಅಲ್ಲ.ಆಕೆಯ ಬೊಚ್ಚುಬಾಯ ನಗೆ,ತುಂಟಾಟಗಳಿಂದ ನಮ್ಮ ಜೊತೆಗೊಂದು ಬಂಧ ಗಟ್ಟಿಗೊಳಿಸಿದ್ದಳು.
ಹಾಮ್..ಹೀಗೆ ಹುಟ್ಟಿಬಿಡುತ್ತದೆ ಸಂಬಂಧದ ಎಳೆಯೊಂದು!
ಮಾನವ ಸಮಾಜಮುಖಿ,ಬಂಧ,ಬಂಧನ ಮನುಷ್ಯನ ಮೂಲಭೂತ ತುಡಿತ;
ದಿನವೂ ಅದೇ ಬಸ್ಸಿನಲ್ಲಿ ಆಕೆ ಸಿಕ್ಕಾಗ,ನಮ್ಮ್ ಕಣ್ಣುಗಳು ಆಕೆಯನ್ನ ಗುರುತಿಸಿಬಿಡುತ್ತವೆ,ಒಂದು ಚಿಕ್ಕ ನಗೆ ನಗದೇ ಮುಂದೆ ಹೋಗಲು ಬಿಡಡು ಈ ಮನ,ಹಾನ್,ಸಂಶೋಧನೆಯೊಂದರ ಪ್ರಕಾರ ಅಪರಿಚಿತ ಪರಿಚಿತ ನಗೆ ನಗಲು ಅಂದರೆ,ಅದೇ ಬಸ್ಸಿನಲ್ಲಿ ದಿನವೂ ಸಿಗುವ ಆಕೆಯತ್ತ ಪರಿಚಯದ ನಗೆ ಬೀರಲು ೪-೫ ದಿನಗಳು ಸಾಕಂತೆ.(ಮಾತಾಡಲು, ಸುದ್ದಿ ಹೇಳಲು ಎಷ್ಟು ದಿನಗಳು
ಬೇಕು ಅದೆಲ್ಲ ನನಗೆ ಗೊತ್ತಿಲ್ಲಾಪ್ಪ..)


ಇನ್ನೊಂದು ವರ್ಗವಿದೆ, ಅದು ಮಿಸ್ಡ್ ಕಾಲ್ ಸಂಬಂಧಗಳು.
ಆಕೆಯನ್ನ ದಿನವೂ ಗಮನಿಸುತ್ತಿದ್ದೆ,ಫೋನಿನಲ್ಲಿ ತಾಸುಗಟ್ಟಲೇ ಹರಟುತ್ತಿದ್ದಳು ,Bio Data ಗಳ ವಿನಿಮಯ ನಡೆಯುತ್ತಿತ್ತು, ಒಂದು ಸಾರೇ ಆಗಿದ್ದರೆ ಓಕೇ , ಆಕೆಗೆ ಹತ್ತೋ ಹನ್ನೊಂದು ಮಿಸ್ಡ್ ಕಾಲ್ ಸ್ನೇಹಿತರುಗಳಿದ್ದರು. ಇಂತಹವರನ್ನೆಲ್ಲ ಹೇಗೆ ನಂಬಿಕೊಳ್ತಾರೋ ಜನರು,ಸುಮ್ಮನೇ ಟೈಮ್ ಪಾಸ್ ಮಾಡುವ ಮಾರ್ಗವಿರಬೇಕು ಅಂದು ಕೊಂಡಿದ್ದೆ.ಆಕೆಯ ಮನೆಯ ವಾತಾವರಣ ಸರಿ ಇಲ್ಲದಿದ್ದು ದು ಇನ್ನೊಂದು ಕಾರಣ ಅನ್ನಿಸಿತ್ತು ನನಗೆ.ಇನ್ನೊಮ್ಮೆ ಬರೆಯೋಣ ಇದರ ಬಗ್ಗೆ.

ನನ್ನ ಹಲವು ಸ್ನೇಹಿತರಿದ್ದಾರೆ, ನಮ್ಮ ಮನೆಗಳ ಸುದ್ದಿ ಹಂಚಿಕೊಳ್ಳುತ್ತೇವೆ, ಸಮಸ್ಯೆಗಳು ಬಂದಾಗ ಸಲಹೆ ಪಡೆಯುತ್ತೇವೆ, ನೋಡೇ ಇವತ್ತು  ಒಂದು ಕೂಸನ್ನು ನೋಡಲೇ ಹೋಗಿದ್ದೆ, ಎಂದು  ಸ್ನೇಹಿತನೊಬ್ಬ ಆಕೆಯ ಫೋಟೋ ವನ್ನು ಮೈಲ್ ಮಾಡುತ್ತಾನೆ,ಮದುವೆಗೆ ಎರಡು ದಿನ ಮುಂಚೇನೆ ಬರೋ ಎಂದು ಆಕೆ ಒತ್ತಾಯಿಸುತ್ತಾಳೆ, ಇವರಾರು ರಕ್ತ ಸಂಬಂಧಿಗಳಲ್ಲ, ಆದರೂ ಬಂಧುಗಳು  ಅದೇ ಗಾದೆಯಿದೆಯಲ್ಲ, 'ಸಮಯಕ್ಕಾದವರೇ ಬಂಧುಗಳು' ಅನ್ನಿಸಿಬಿಡುತ್ತದೆ.

ಒಂದುತರ ರಾಬಿನ್‌ಸನ್ ಮತ್ತು ಕ್ರಸೋ ಕತೆಯನ್ನ ಹೋಲುತ್ತದೆ ನಮ್ಮ ಈ ಬದುಕು. ಪರಿಚಯವಿಲ್ಲ, ನಾನು ಕರ್ನಾಟಕದವಳು, ನಾನು ಬಿಹಾರಿ, ನಾನು ಭಾರತೀಯ,ನೀನು ಪರಂಗಿಯವ  ಅನ್ನುವ ಮಾತೇ ಇಲ್ಲ, ಯಾಕೆ ಗೊತ್ತಾ ಮಾತನಾಡಲು ಮಾತೇ ತಿಳಿದಿಲ್ಲ. ಹೀಗಿದ್ದಾಗಲು, ಹೇಳಬೇಕೆನಿಸಿದ್ದನ್ನ ಹೇಳುತ್ತ, ಕೇಳಿಸಿಕೊಳ್ಳುತ್ತ, ನಮ್ಮದೇ ಲೋಕ ಕಟ್ಟುತ್ತಾ, ಪರಿಚಯದ ಬಂಧಗಳಿಸುತ್ತಾ ಜೀವನದಲ್ಲಿ ಮುನ್ನಡೆಯುತ್ತೇವಲ್ಲ ಇಂತಹ ಸಂಬಂಧಗಳಿಗೆ  ಎಣೆಯುಂಟೆ?ಬೆಲೆಕಟ್ಟಲಾದೀತೇ?
ಇಂತಹ ಸಂಬಂಧಗಳ ಮೂಲ ಹುಡುಕುವದು ವ್ಯರ್ಥ ಪ್ರಯತ್ನವೇ ಸರಿ,ಅಲ್ಲವ?

ಯಾಕ ಮಾಡುತಿ ಲೋಕದ ಚಿಂತಿ?

 ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...